Powered By Blogger

Thursday, July 7, 2016

ಭಗವಂತನಿಂದ ಲೋಕಕ್ಕೆ ಬಂಪರ್ ಕೊಡುಗೆ, ಎಲ್ರಿಗೂ ಈ ವರ್ಷ ಒಂದು ಸೆಕೆಂಡ್ ಎಕ್ಸ್ಟ್ರಾ!


   
ಗಾಬರಿ ಆಗಬೇಡಿ. ವಿಜ್ನಾನವನ್ನ ಅದಕ್ಕೇ ’ರೋಚಕ’ ಅಂತ ಬಣ್ಣಿಸುವುದು. ಸಮಾಧಾನದಿಂದ ಓದಿ.
ವಿಜ್ನಾನ ಜಗತ್ತು ಅಧಿಕೃತ ಅಂತ ಒಪ್ಪಿಕೊಂಡು ಬಂದ ಕಾಲಗಣನೆಯ ವ್ಯವಸ್ಥೆಯೊಂದಿದೆ. UTC(Coordinated Universal Time) ಅಂತ. ಇಂತಹ ಅತೀ ಸೂಕ್ಷ್ಮ ಮತ್ತು ಕರಾರುವಕ್ಕಾದ ವ್ಯವಸ್ಥೆಯನ್ನು ಸಂಭಾಳಿಸಲು ವಿಜ್ನಾನಿಗಳು ಪರಮಾಣು ಗಡಿಯಾರ(Atomic Clock)ಗಳ ಮೊರೆಹೋಗುತ್ತಾರೆ. ಈ ಪರಮಾಣು ಗಡಿಯಾರಗಳ ನಿಖರತೆ ನಮ್ಮ ಊಹೆಗೂ ನಿಲುಕದ್ದು. ಪೂರ್ಣಚಂದ್ರ ತೇಜಸ್ವಿಯವರ ದೇಶಕಾಲದಲ್ಲೋ, ’ವಿಸ್ಮಯ ವಿಶ್ವ’ದಲ್ಲೋ ಹೈಸ್ಕೂಲಿನಲ್ಲಿರುವಾಗ ಯಾವಾಗಲೋ ಇವುಗಳ ಕುರಿತು ಓದಿ ನಿಬ್ಬೆರಗಾಗಿದ್ದೆ. ಸೀಜಿಯಮ್-೧೩೩ ಎಂಬ ಧಾತು(element)ವನ್ನು ಉಪಯೋಗಿಸಿ, ಸಾಮಾನ್ಯವಾಗಿ ಇವುಗಳನ್ನು ತಯಾರಿಸಿರುತ್ತಾರೆ. ಜಗತ್ತಿನ ಅತ್ಯಂತ ನಿಖರ ಸೀಜಿಯಮ್ ಗಡಿಯಾರಕ್ಕೆ ಒಂದು ಸೆಕೆಂಡ್ ಪೂರ್ಣವಾಗುವುದು , ತನ್ನೊಳಗಿನ ಅಣು 9,19,26,31,970 ಬಾರಿ ಎರಡು ಎನರ್ಜಿ ಲೆವೆಲ್ ಗಳ ನಡುವೆ ಜಿಗಿದಾಡಿ, ವಿಕಿರಣಚಕ್ರವನ್ನು ಪೂರ್ಣಗೊಳಿಸಿದಾಗ!!! ಹಾಗಾಗಿ ಇವುಗಳು ಎಷ್ಟು ಕರಾರುವಕ್ಕಾಗಿ ಇರುತ್ತವೆಯೆಂದರೆ, ಆಕಾಶಕಾಯಗಳು ತಮ್ಮ ಚಲನವಲನದಲ್ಲಿ one billionth of a second ಹೆಚ್ಹುಕಮ್ಮಿ ಮಾಡಿದರೂ ಇವು ವಿಜ್ನಾನಿಗಳಿಗೆ ಹೋಗಿ ಚಾಡಿ ಹೇಳಿಬಿಡುತ್ತವೆ! ತಲೆಕೆಡಿಸಿಕೊಂಡು, ಇತರರ ತಲೆಯನ್ನೂ ಕೆಡಿಸಬೇಕೆಂದು ಇಪ್ಪತ್ನಾಲ್ಕು ಗಂಟೆ ಹಪಹಪಿಸುತ್ತಿರುವ ವಿಜ್ನಾನಿಗಳು ಸುಮ್ಮನೆ ಬಿಡುತ್ತಾರಾ? ಅದೂ ಭೂಮಿಯೇ ತನ್ನ ಸುತ್ತುವಿಕೆಯಲ್ಲಿ ಸೆಕೆಂಡ್ ಗಳ ಎಡವಟ್ಟು ಮಾಡಿಕೊಂಡಿತು ಅಂದರೆ, ವಿಜ್ನಾನಿಗಳಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ, ಈ ಅತ್ಯಾಧುನಿಕ ಯುಗದಲ್ಲಿ ಇದೊಂಥರ ಆಕಾಶ ತಲೆ ಮೇಲೆ ಬಿದ್ದ ಹಾಗೆಯೇ ಅನ್ನಿ, ಯಾಕೆಂದರೆ ಭೂಮಿಯ ಸುತ್ತುವಿಕೆಯ ಏರುಪೇರು ನಮ್ಮ ಕಾಲಗಣನೆಯನ್ನೂ ಮಂಗಮಾಡಿಬಿಡುತ್ತದೆ! ನಾವು ಕಾಲಗಣನೆಯನ್ನು ಸರಿಮಾಡಿಕೊಳ್ಳದೇ ಉಪೇಕ್ಷಿಸಿಬಿಟ್ಟೆವು ಅಂದರೆ, ಸೂರ್ಯನ ಸ್ಥಾನಕ್ಕೂ ನಮ್ಮ ಕಾಲಗಣನಾ ವ್ಯವಸ್ಥೆಗೂ ಲಿಂಕೇ ತಪ್ಪಿಹೋಗುತ್ತೆ. ಸೌರಮಂಡಲದಲ್ಲಿ ಅವ್ಯಾಹತವಾಗಿ ಹರಿಯುತ್ತಿರುವ ಕಾಲ ಮತ್ತು ನಾವು ನಮ್ದೇ ಸರಿ ಅಂತ ಲೆಕ್ಕ ಮಾಡುತ್ತಿರುವ ಟೈಮೂ ಸಿಂಕೇ ಆಗುವುದಿಲ್ಲ.
    International Earth Rotation And Reference Systems Service(IERS) ದೂರಾತಿದೂರದ ಗ್ಯಾಲಾಕ್ಸಿಗಳಿಂದ ಬರುವ ಬೆಳಕು-ವಿಕಿರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಆಕಾಶಕಾಯಗಳ ಚಲನಾ ಸಮಯದ ಏರುಪೇರುಗಳನ್ನು ಲೆಕ್ಕಹಾಕುತ್ತದೆ. ಪರಮಾಣು ಗಡಿಯಾರಗಳ ಪ್ರಕಾರ ದಿನವೊಂದಕ್ಕೆ ೮೬೪೦೦ ಸೆಕೆಂಡ್ ಗಳು ಇರಬೇಕು. ಭೂಮಿ ತನ್ನ ಪಥದಲ್ಲಿ ೦.೯ ಸೆಕೆಂಡ್ ಅಥವಾ ಹೆಚ್ಹು ಏರುಪೇರು ಮಾಡಿಕೊಂಡರೆ, “ಈ ವರ್ಷ ಒಂದು ಸೆಕೆಂಡ್ ಎಕ್ಸ್ಟ್ರಾ ಸೇರಿಸಿಕೊಳ್ರಪೋ..” ಅಂತ IERS ಆಜ್ನೆ ಮಾಡುತ್ತೆ. ಇದನ್ನ ವೈಜ್ನಾನಿಕ ಪರಿಭಾಷೆಯಲ್ಲಿ leap second ಅಂತಾರೆ. ಅದನ್ನು ಅನುಭವಿಸುವ ಭಾಗ್ಯ ನಮಗೆ ಈ ವರ್ಷ ಬಂದಿದೆ. ಅಂದರೆ, ಈ ವರ್ಷ ಡಿಸೆಂಬರ್ ೩೧ರ ರಾತ್ರಿ 11:59 ಆದಮೇಲೆ 11:60 ಆಗಲಿದೆ, ನಂತರ ಹನ್ನೆರಡು ಗಂಟೆ ಆಗಲಿದೆ!! ಇತ್ತೀಚಿನ ಉದಾಹರಣೆಯಾಗಿ ೨೦೧೫ರ ಜುಲೈ ಮೂವತ್ತಕ್ಕೆ ಒಂದು ಲೀಪ್ ಸೆಕೆಂಡ್ ಸೇರಿಸಿದ್ದರು. ೧೯೭೨ರಿಂದ ಇದುವರೆಗೆ ಹೀಗೇ ೨೬ ಲೀಪ್ ಸೆಕೆಂಡ್ ಗಳನ್ನ ಸೇರಿಸಿಕೊಳ್ಳಲಾಗಿದೆ! ಯಾವುದೇ ಸೆಕೆಂಡ್ ಅನ್ನು ಕಾಲಗಣನೆಯಿಂದ “ನೀನು ಹೆಚ್ಹು, ನಮಗೆ ಬೇಡ” ಅಂತ ಇದುವರೆಗೆ ತೆಗೆದ ಘಟನೆ ಇಲ್ಲ. ಹೀಗೇ ಸೇರಿಸಿಕೊಂಡು, ನಾವು ಹೊಂದಿಸಿಕೊಂಡ ಟೈಮು ಪರಮಾಣು ಗಡಿಯಾರ ಹೇಳುವುದಕ್ಕಿಂತ ೩೬ ಸೆಕೆಂಡ್ ಹಿಂದಿದೆ! ಆದ್ದರಿಂದ “ಹೀಗೆಲ್ಲ ದಾರೀಲಿ ಹೋಗಿಬರೋ ಸೆಕೆಂಡುಗಳು ’ನಾನೂ ಬರ್ತೀನಿ’ ಅಂದರೆ ಸೇರಿಸಿಕೊಳ್ಳಬೇಡಿ, ಕಂಪ್ಯೂಟರ್ ಸಿಸ್ಟಮ್ ಗಳಿಗೆ ತೊಂದರೆಯಾಗುತ್ತೆ” ಅಂತ ಕೆಲವರ ಅಳಲು. “ನಿಮ್ಮ ಕಂಪ್ಯೂಟರ್ ಸಿಸ್ಟಮ್ ಗಳು ತಲೆಕೆಳಗಾಗದಂತೆ ಏನಾದ್ರೂ ಮಾಡಿಕೊಳ್ಳಿ ಅಂತಲೇ ಆರು ತಿಂಗಳ ಮೊದಲೇ ಲೀಪ್ ಸೆಕೆಂಡ್ ಸೇರಿಸುವುದರ ಬಗ್ಗೆ ಹೇಳುತ್ತಿದ್ದೇವೆ” ಅನ್ನುವುದು ವಿಜ್ನಾನಿಗಳ ಕಣ್ಣೊರೆಸುವಿಕೆ. ಅಷ್ಟಕ್ಕೂ, ಸೇರಿಕೊಳ್ಳದೇ ಏನು ಮಾಡಲು ಸಾಧ್ಯ? ಸೇರಿಸಿಕೊಳ್ಳದೇ ಸಾಗಿದರೆ ೨೧೦೦ನೇ ಇಸವಿಯ ಹೊತ್ತಿಗೆ ಸೂರ್ಯನ ಮತ್ತು ನಮ್ಮ ಕಾಲಕ್ಕೆ ಎರಡು ಮೂರು ನಿಮಿಷ ವ್ಯತ್ಯಾಸವಿದ್ದುಬಿಡುತ್ತೆ. ೨೭೦೦ರ ಹೊತ್ತಿಗೆ ಈ ವ್ಯತ್ಯಾಸ ಬರೋಬ್ಬರಿ ಅರ್ಧಗಂಟೆಯಾಗಿಬಿಡುತ್ತೆ! ಆದ್ದರಿಂದ ಕಳೆದ ನವೆಂಬರಿನಲ್ಲೇ ಈ ಟೈಮಿಗೆ ಒಂದು ಪಂಚಾಯಿತಿ ತೀರ್ಮಾನ ಮಾಡಿಬಿಡೋಣ ಅಂದುಕೊಂಡಿದ್ದ ವಿಜ್ನಾನಿಗಳು, ೨೦೨೩ರವರೆಗೆ ಲೀಪ್ ಸೆಕೆಂಡ್ ಗಳ ಬಗ್ಗೆ ದೂರೆತ್ತಬೇಡಿ, ಆಮೇಲೆ ಬೇಕಾದ್ರೆ ನೋಡೋಣ ಅಂದುಬಿಟ್ಟಿದ್ದಾರೆ!
    ಅದೆಲ್ಲಾ ಏನಾದ್ರೂ ಮಾಡ್ಕೊಂಡು ಹಾಳಾಗ್ ಹೋಗಿ, ನಮಗೆ ಪ್ರತೀವರ್ಷ ಒಂದು ದಿನ ಹೆಚ್ಹಿಗೆ ರಜೆ ಸಿಗುವ ಹಾಗೆ ಏನಾದ್ರೂ ಟೈಮ್ ಅಡ್ಜಸ್ಟ್ ಮಾಡೋಕೆ ಆಗತ್ತಾ ಸ್ವಲ್ಪ ನೋಡಿ ಪ್ಲೀಸ್ ಅಂತ ವಿಜ್ನಾನಿಗಳನ್ನ ಕೇಳಿಕೊಳ್ಳುತ್ತಾ....  

#ವಿಸ್ಮಯ_ವಿಜ್ನಾನ-2







Wednesday, July 6, 2016

JUNO !

   ಸೌರ ಮಂಡಲದ ಹಿರಿಯಣ್ಣನನ್ನೂ ಬಿಡಲಿಲ್ಲ ಮನುಷ್ಯ. ಮೊನ್ನೆ ಜುಲೈ ನಾಲ್ಕರ ರಾತ್ರಿ ಫೆಸಿಫಿಕ್ ವೇಳೆ ೮:೫೩ಕ್ಕೆ ಸರಿಯಾಗಿ, ಪಿಯಾನೋದಿಂದ ಹೊರಡುವ ಅತ್ಯುಚ್ಚ  D- Toneನಂತೆ, ೨.೩೨ ಕಿಲೋ ಹರ್ಡ್ಜ್ ನ ತರಂಗ ಮೊಳಗಿದಾಗ ಕ್ಯಾಲಿಫೋರ್ನಿಯಾ ದ  Jet Propulsion Laboratory ಹರ್ಷದ ಉದ್ಗಾರ."We conquered the Jupiter" ಅಂತ ಸಂತಸ ತೋಡಿಕೊಂಡ mission lead ಸ್ಕಾಟ್ ಬೋಲ್ಟನ್ . ಇದು ಗುರುಗ್ರಹವನ್ನು ಹಿಂಬಾಲಿಸುವ ಮೊದಲ ಪ್ರಯತ್ನವೇನು ಅಲ್ಲ ಬಿಡಿ. ೧೯೯೩-೨೦೦೫ರ ವರೆಗೆ 'ಗೆಲಿಲಿಯೋ ಮಿಷನ್' ಗುರುವನ್ನು ಸುತ್ತುಹಾಕುತ್ತಿತ್ತು. ಆದರೆ ಈ 'ಜುನೋ' ಅಂತಿಥ ಯೋಜನೆಯಲ್ಲ.
    ೧.೭ ಬಿಲಿಯನ್ ಮೈಲು! ಇದು ಗುರುಗ್ರಹದ ಸುತ್ತ ಕಕ್ಷೆಗೆ ತನ್ನನ್ನು ತಗುಲಿಹಾಕಿಕೊಳ್ಳಲು, ಕಳೆದ ಐದು ವರ್ಷದಿಂದ ಕ್ರಮಿಸಿರುವ ದೂರ! ೧.೧ ಬಿಲಿಯನ್ ಅಮೆರಿಕನ್ ಡಾಲರ್, ಇದು ನಾಸಾ ಜುನೋ ಮೇಲೆ ಸುರಿದ ಒಟ್ಟು ಮೊತ್ತ. ೩೭ ಬಾರಿ ಗುರುವಿನ ಕಕ್ಷೆ ಸುತ್ತಲಿರುವ ಜುನೋ, ಇಪ್ಪತ್ತು

ತಿಂಗಳ ಕಾಲ ತನಗೆ ವಹಿಸಿದ ಕೆಲಸ ಮಾಡಲಿದೆ. ಗುರುವಿನ one of the ಚಂದ್ರ, ಯುರೋಪಾ ದಲ್ಲಿ ಜೀವಿಗಳಿರುವ ಸಂಭವ ಇರುವುದರಿಂದ, ಅದರ ವಾತಾವರಣ ಕಲುಷಿತವಾಗಬಾರದೆಂದು, ೨೦೧೮ರಲ್ಲಿ ಗುರುಗ್ರಹದಲ್ಲೇ ಅಂತರ್ಗತವಾಗಲಿದೆ. ಗುರುಗ್ರಹ ಎಷ್ಟು ಅಗಾಧವಾದುದು ಎಂದರೆ, ಗುರುವಿನ ತೆಕ್ಕೆಗೆ ಬೀಳುವ ಮೊದಲು, ಈ ನೌಕೆ ಗುರುವಿನ ಮೋಡಗಳ ಮೇಲ್ಮೈಯಿಂದ ಬರೋಬ್ಬರಿ ೪೪೯೦ ಕಿಲೋಮೀಟರ್ ದೂರದಲ್ಲಿ ಹಾದುಹೋಗುವಾಗಲೂ, ನೌಕೆಗೆ ಕಾಣಬಹುದಾಗಿದ್ದ ಅರ್ಧ ಆಕಾಶವನ್ನು ಗುರುಗ್ರಹವೇ ಆವರಿಸಿಕೊಂಡುಬಿಟ್ಟಿತ್ತಂತೆ! ಎಲ್ಲ space explorations ಗಳಲ್ಲೂ ಸಾಮಾನ್ಯವಾಗಿರುವಂತೆ, ಗ್ರಹಗಳು ಮತ್ತು ಸೌರಮಂಡಲ ಹೇಗೆ ನಿರ್ಮಾಣವಾದವು ಎಂಬುದು ಮತ್ತು ಗುರು ತನ್ನಲ್ಲಿ ಎಷ್ಟು ನೀರನ್ನು ಹಿಡಿದಿಟ್ಟುಕೊಂಡಿರಬಹುದು ಎಂದು ಅಂದಾಜಿಸುವುದು ಇದರ ಗುರಿ. ಉಪಗ್ರಹ ಅಥವಾ ವ್ಯೋಮನೌಕೆಗಳ ಜೊತೆ ಏಗುವುದು ಅತ್ಯಂತ ಸೂಕ್ಷ್ಮ ವಿಚಾರ. ಅವುಗಳನ್ನು ತಯಾರಿಸುವುದರಿಂದ ಉಡಾಯಿಸುವವರೆಗೆ, ಅವುಗಳ ಪಥ, ವೇಗ, ಉತ್ಕರ್ಷಗಳನ್ನ ಲೆಕ್ಕಹಾಕಿ ನಿರ್ಧರಿಸುವವರೆಗೆ ಅತ್ಯಂತ ಕ್ಲಿಷ್ಟವಾದ ಕೆಲಸಗಳೇ. ಸ್ವಲ್ಪವೇ ಹೆಚ್ಚು ಕಮ್ಮಿಯಾದರೂ ಸಾವಿರಾರು ಕೋಟಿಯನ್ನು ಕೈಯ್ಯಾರೆ ತಗಂಡುಹೋಗಿ ಸಮುದ್ರಕ್ಕೆ ಎಸೆದು ಬಂದಹಾಗೆ. ಎಲ್ಲಾ ಮುಗಿದು ಇನ್ನೇನು ಕಕ್ಷೆ ಸೇರೇ ಬಿಟ್ಟಿತು ಅನ್ನುವಾಗ, ಎಂಜಿನ್ ಚಾಲೂ ಆಗುವಲ್ಲಿ ಎಡವಟ್ಟಾಯಿತು ಅಂದರೆ, ನೌಕೆ ಕಣ್ಣಿಗೆ ಕಾಣದೆ ಅನಂತಾಕಾಶದಲ್ಲಿ ಲೀನವಾಗಿಬಿಡಬಹುದು! ಹೆಚ್ಚು ಶಕ್ತಿ ಎಳೆದುಕೊಂಡು ಚಾಲು ಆದರೆ, ಹೋಗಿ ಗ್ರಹಕ್ಕೆ ಜಜ್ಜಿಕೊಂಡು ಬಿಡಬಹುದು! ಇಂತಹವುಗಳನ್ನು ದಾಟಿ ನೌಕೆ ಕಕ್ಷೆ ತಲುಪಿದೆ. ವಿಜ್ಞಾನಿಗಳ ಶ್ರಮಕ್ಕೆ, ಅನ್ವೇಷಣೆಗಳಿಗೆ ಫಲ ಸಿಗಲಿ ಎಂಬ ಆಶೆಯೊಂದಿಗೆ...
#ವಿಸ್ಮಯ_ವಿಜ್ಞಾನ- ೧
 (ಅಂದಹಾಗೆ ರೋಮನ್ ಪುರಾಣಗಳಲ್ಲಿ ಜ್ಯುಪಿಟರ್ ದೇವನ ಪತ್ನಿಯ ಹೆಸರು 'ಜುನೋ' ಅಂತೆ. ಅದಕ್ಕೆ, ಪಾಪ ಆ ನೌಕೆಗೂ ಅದೇ ಹೆಸರಿಟ್ಟಿದ್ದಾರೆ)

Saturday, June 11, 2016

'ಕೋಟಿ ಮನಸ್ಸು, ಒಂದು ಕನಸು'ಗಳಿಗೆ ಒಂದು ದಿಕ್ಕೂ ಸಿಕ್ಕು, ಅದಾಗಲೇ ಎರಡು ವರ್ಷ..!

    ಒಪ್ಪಿಕೊಳ್ಳೋಣ! ಇವತ್ತು ಚೀನಾ ಅಮೆರಿಕಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಬೆಳೆದುನಿಂತಿದೆ. ಹಿರಿಯಣ್ಣನಿಗೊಂದು ಪರ್ಯಾಯ ಶಕ್ತಿಯಾಗಿ ಸೆಡ್ಡು ಹೊಡೆದಿದೆ. ಆದರೂ ಅದಕ್ಕೆ ಭಾರತದ ಬಗ್ಗೆ ಒಂದು ದೊಡ್ಡ ಹೂಟ್ಟೆಕಿಚ್ಚಿದೆ! ಜಗತ್ತೂ ಅಷ್ಟೇ, ಭಾರತದ ಮೇಲೆ ಒಂದು ಹಿಡಿ ಹೆಚ್ಚು ಭರವಸೆ ಇಟ್ಟಿದೆ, ಭಾರತದ ಕನಸುಗಳ ಮೇಲೆ ತುಸು ಜಾಸ್ತಿಯೇ ನಂಬಿಕೆ ಇಟ್ಟುಕೊಂಡಿದೆ! ಯಾಕೆ ಗೊತ್ತೇನು? The Human Resource, ಮಾನವ ಸಂಪನ್ಮೂಲ. ಚೀನಾದಲ್ಲೇನು ಕಮ್ಮಿ ಜನ ಇದ್ದಾರೆಯೇ? ಅಂತ ನಗಬೇಡಿ, ಇಲ್ಲ ಅಂತ ಯಾರು ಹೇಳಿದ್ದು? ಆದರೆ ಭಾರತದಲ್ಲಿ ಯುವ ಜನಾಂಗ ಅಧಿಕವಾಗಿದೆ. That makes all the difference. ಚೀನಾ ತನ್ನ ಕುಟುಂಬ ಯೋಜನೆಯ ಕಠಿಣ ನಿರ್ಧಾರದ ಒಂದು ಅಡ್ಡ ಪರಿಣಾಮವಾಗಿ, ವೃದ್ಧರ ದೇಶವಾಗಿ ಕುಂತಿದೆ. ಇತ್ತ ಭಾರತ ಯುವಶಕ್ತಿಯ ಕಾಮನಬಿಲ್ಲಾಗಿ  ಹೊಂಗನಸು ಬೀರುತ್ತಿದೆ. ಆದರೆ ಸೃಷ್ಟಿಯ ವಿಪರ್ಯಾಸವೆಂಬಂತೆ ಯುವ ಜನಾಂಗ ಬಿಸಿರಕ್ತದ ಮದದಲ್ಲಿ ದಾರಿ ತಪ್ಪುವ ಸಂದರ್ಭ ಹೆಚ್ಚು. ದೇಶವೊಂದಕ್ಕೆ ತನ್ನ ಯುವ ಜನಾಂಗ ಪೂರಕವೂ ಆಗಬಹುದು, ಮಾರಕವೂ ಆಗಬಹುದು. "ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗಿತ್ತು ವೀರದಂಡು" ಎಂಬಂತೆ, ಮುಂದಿರುವ ಗುರಿಯಕಡೆ ಮುಖಮಾಡಿಸಬಲ್ಲಂತ ಗುರುವೊಂದು ಯುವಶಕ್ತಿಗೆ ದಕ್ಕಿಬಿಟ್ಟರೆ, ಆಗ ಶಕ್ತಿಯ ನಾಗಾಲಾಟವನ್ನು ಹಿಡಿಯಲು ಯಾವುದಕ್ಕೂ ಸಾಧ್ಯವಾಗುವುದಿಲ್ಲ. ಕರ್ನಾಟಕದ ಕೆಲವು ಪ್ರಬುದ್ಧ ಯುವಮನಸ್ಸುಗಳಿಗೆ ಹೀಗನಿಸಿದ್ದೇ ತಡ, ಒಂದು ರಾಷ್ಟ್ರೀಯ ಬದ್ಧತೆಯ, ರಾಷ್ಟ್ರವಾದೀ ಧ್ಯೇಯಗಳ ಸಂಘಟನೆ ಒಂದು ರೂಪುತಾಳಿತು, 'ದಿ ಯುವಾ ಬ್ರಿಗೇಡ್"!.  ನೋಡುನೋಡುತ್ತಿದ್ದಂತೆ ಆ ಶುಭ್ರ ಮನಸ್ಸಿನ, ಶ್ರೇಷ್ಠ ಕನಸಿನ ಆ ಹಸುಗೂಸಿಗೆ ಮೊನ್ನೆ ಎರಡು ವರ್ಷವಾಗಿಬಿಟ್ಟಿತು.
       ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಮಾಡುವಲ್ಲಿ ಶ್ರಮಿಸಲು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 'ನಮೋ ಬ್ರಿಗೇಡ್' ರಚನೆಯಾಗಿತ್ತು. ಸೂಲಿಬೆಲೆ ಅವರೇ ಹೇಳುವ ಪ್ರಕಾರ, ಅದು "ಹುಟ್ಟುವಾಗಲೇ ಎಂದು ಸಾಯಬೇಕೆಂದು ನಿರ್ಧಾರ ಮಾಡಿದ್ದ ಕೂಸು". ನಮೋ ಪ್ರಮಾಣವಚನ ಸ್ವೀಕರಿಸಿ ಅಧಿಕೃತವಾಗಿ 'ಭಾರತದ ಪ್ರಧಾನಿ' ಎಂದು ಘೋಷಣೆಯಾದ ಮೇಲೆ, ಬ್ರಿಗೇಡ್ ನ "Mission Completed". ನಮೋ ಬ್ರಿಗೇಡ್ ನ ವಿಸರ್ಜಿಸುವ ಯೋಚನೆಯಲ್ಲಿದ್ದಾಗ ಚಕ್ರವರ್ತಿ ಅವರಿಗೆ ಆಪ್ತ ರಾಜಕಾರಣಿಯೊಬ್ಬರು ಕರೆ ಮಾಡಿ " ನೀವು ಯುವಕರಲ್ಲಿ ಒಮ್ಮೆ ಸಂಘಟನೆಯ ಉತ್ಸಾಹ ಮೂಡಿಸಿ, ಹೀಗೆ ನಡು ನೀರಿನಲ್ಲಿ ಕೈ ಬಿಡುತ್ತಿರುವುದು ಸರಿಯಲ್ಲ" ಅಂದರಂತೆ. ಅದಕ್ಕೂ ಮೊದಲೂ ಈ ಯೋಚನೆ ತಂಡದಲ್ಲಿ ಹೊಳೆದಿತ್ತು. ಅಲ್ಲದೇ "ಸಮಾಜದ ಕೂಗನ್ನ, ಕನಸುಗಳನ್ನ ಸಮರ್ಥವಾಗಿ ಪ್ರಧಾನಿಗೆ ಮುಟ್ಟಿಸುವ ಶಕ್ತಿ"ಯಾಗಿ ಸಂಘಟನೆಯೊಂದರ ಅವಶ್ಯಕತೆಯೂ ಇತ್ತು.                 
     ಇವೆಲ್ಲದರ ಫಲವಾಗಿ ಜನ್ಮ ತಾಳಿದ್ದು, 'ಯುವಾ ಬ್ರಿಗೇಡ್'. ಯುವಾ ಬ್ರಿಗೇಡ್ ಆರಂಭದಲ್ಲೇ ಎಷ್ಟು ಯೋಜಿತವಾಗಿ ರೂಪುಗೊಂಡಿತ್ತು ಅಂದರೆ, ಯುವಜನಾಂಗದಲ್ಲಿ ಇರಬೇಕಾದ ದೂರದೃಷಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಒಂದೊಂದಕ್ಕೂ ಒಂದೊಂದು ಪ್ರತ್ಯೇಕ ಶಾಖೆಯನ್ನೇ ನೀಡಲಾಗಿತ್ತು. ಮಹಾರಕ್ಷಕ್, ಡಿಜಿಟಲ್ ಸನ್ಸ್ಕಾರ್, ವಿತ್ತಶಕ್ತಿ, ಮತ್ತು ಸದ್ಭಾವನಾ ಎಂದು.  ತನ್ನ ಕುಟುಂಬವನ್ನು ತ್ಯಜಿಸಿ ನಮಗಾಗಿ ಹಗಲಿರುಳು ಬಾಂಬು ಗ್ರೆನೇಡ್ ಗಳ ನೀರೀಕ್ಷೆಯಲ್ಲಿ ಗಡಿಯಲ್ಲಿ ನಿಂತಿರುವ ಸೈನಿಕನ ಕುಟುಂಬಕ್ಕೆ "ನಿಮಗಾಗಿ ನಾವಿದ್ದೇವೆ" ಅಂತ ಹೇಳುವುದು ಮಹಾರಕ್ಷಕರ ಕೆಲಸ. ಸೇವೆ ಮಾಡಿಬಂದ ಸೈನಿಕರಿಗೆ ಗೌರವ ಅರ್ಪಿಸುವುದು ಕೂಡ. ವಿತ್ತಶಕ್ತಿ ಮತ್ತು ಸದ್ಭಾವನಾ ಸಮಿತಿಗಳು ಯುವಜನತೆಯಲ್ಲಿ entrepreneurship ಅನ್ನು ಬೆಳೆಸುವ ಮುಖ್ಯ ಗುರಿ ಹೊಂದಿದ್ದವು. ಯಾರದೋ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ತನ್ನ ಕಾಲಮೇಲೆ ತಾನು ನಿಲ್ಲುವಂತೆ ಯುವಶಕ್ತಿಯನ್ನು ರೂಪುಗೊಳಿಸುವಿಕೆಗೆ ಈ ತಂಡ ಮೀಸಲು. ಹೊಸ ಅನ್ವೇಷಣೆಗಳನ್ನ ಪ್ರೋತ್ಸಾಹಿಸಿ, ಅದಕ್ಕೆ ಬೇಕಾದ ಪೇಟೆಂಟ್, ಕಾಪಿರೈಟ್ ಗಳಿಗೆ ಸಹಕರಿಸಿ, ಕಿಂಗ್ ಮೇಕರ್ ಆಗಿ ಅದು ಕೆಲಸ ಮಾಡಬೇಕು. ಇನ್ನು ಹೆಸರೇ ಹೇಳುವಂತೆ ಡಿಜಿಟಲ್ ಸನ್ಸ್ಕಾರ್ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಸಮಾಜದ ಅಭಿಪ್ರಾಯವನ್ನು ರೂಪಿಸಲು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯತ್ನಿಸುವ ಜವಾಬ್ದಾರಿ. ಆ ಮೂಲಕ ರಾಷ್ಟ್ರೀಯತೆಯನ್ನು ಪಸರಿಸುವ ಪ್ರಯತ್ನ.
ಇವೆಲ್ಲ ಆ ನಾಲ್ಕು ಶಾಖೆಗಳ ಸ್ಥೂಲ ಪರಿಚಯ. ನಮಗೆ ಯುವಾ ಬ್ರಿಗೇಡ್ ಇಷ್ಟವಾಗೋದು ಆ ಕಾರಣಕ್ಕೆ! ಗುರಿಯನ್ನು ನಿರ್ಧರಿಸಲಾರದವ, ಅದನ್ನು ಸಾಧಿಸಲಾರ ಕೂಡ.

ಚಕ್ರವರ್ತಿ ಅಣ್ಣನವರ ನೇತೃತ್ವ ಅಂದಮೇಲೆ, ಆ ಸಂಘಟನೆ ಜನರಲ್ಲಿ consciousness ಮೂಡಿಸುವಲ್ಲಿ ಕೊಡುಗೆ ನೀಡಲೇಬೇಕು.  ಅವರು ಪತ್ರಿಕೆಗಳಿಗೆ ಬರೆಯುವ ಅಂಕಣಗಳಿಂದ ಹಿಡಿದು ಜಾಗೊ ಭಾರತ್ ನ ವರೆಗೆ ಎಲ್ಲವೂ ಜನಜಾಗೃತಿಯನ್ನೇ ಜೀವಾಳ ಮಾಡಿಕೊಂಡಿರುವ ಚಟುವಟಿಕೆಗಳು. ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪಿಸುವ ಸಲುವಾಗಿ ಯುವಾ ಬ್ರಿಗೇಡ್ ಹಮ್ಮಿಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಆ ತಂಡ ಪಟ್ಟ ಶ್ರಮ ಎರಡೂ ಅಮೋಘವಾದವು. ಸರ್ಕಾರ ಉದ್ದೇಶಪೂರ್ವಕವಾಗಿ ಬೇಡವೆಂದು 'ಮರೆತಿದ್ದ' ಕಾರ್ಗಿಲ್ ವಿಜಯ ದಿವಸದಿಂದ ಹಿಡಿದು ಸ್ವಂತದ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ಮಣ್ಣಿಗಾಗಿ ರಕ್ತ ಕೊಟ್ಟ ಹುತಾತ್ಮರ ದಿನಾಚರಣೆ-ಜಯಂತಿಗಳವರೆಗೂ ವಿಜೃಂಭಿಸಿದ್ದು ದೇಶಭಕ್ತಿಯೇ! ಯುವದಿನ ಎಂದು ಆಚರಿಸಲ್ಪಡುವ ವಿವೇಕಾನಂದರ ಜಯಂತಿಯಂದು, ಪ್ರತೀ ಊರಿನಲ್ಲೂ ಯುವಜನರನ್ನು ಒಗ್ಗೂಡಿಸಿ, ಅವರಲ್ಲಿ ಸ್ಫೂರ್ತಿ ತುಂಬಿ, ಅವರವರ ಊರುಗಳಲ್ಲಿ ವಿವೇಕಾನಂದರ ಕುರಿತು ಉಪನ್ಯಾಸ ನೀಡುವಂತೆ ಮಾಡಿತ್ತು ಯುವಾ ಬ್ರಿಗೇಡ್. " ಈ ಜಗತ್ತಿನಲ್ಲಿ, ಕೊನೆಯ ಮಾನವ ತಾನೂ ದೇವರಲ್ಲೊಂದು ಅಂತ ತಿಳಿಯುವವರೆಗೆ, ನಾನು ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುತ್ತೇನೆ" ಎಂದು ಹೇಳಿದ್ದ ಯೋಗಿವರ್ಯನ ಮಾತು ಅಷ್ಟರ ಮಟ್ಟಿಗೆ ಸಾರ್ಥಕ್ಯ ಕಂಡಿತ್ತು!
    "ಎಲ್ಲರೂ ಹೇಳುತ್ತಾರೆ, ಆದರೆ ನಾವು ಮಾಡಿ ತೋರಿಸುತ್ತೇವೆ" ಎಂಬುದು ಯುವ ಬ್ರಿಗೇಡ್ ನ ಗುಣಲಕ್ಷಣಗಳಲ್ಲಿ ಒಂದು. ಕೆರೆಬತ್ತಿಸಿ ಸೈಟು ಮಾಡುವ, ನುಂಗಿ ನೀರ್ಕುಡಿದು ನಂತರ ಅಂತರ್ಜಲಕ್ಕೇ ಕನ್ನ ಹಾಕುವ ಕೊಳವೆಬಾವಿಗಳನ್ನು ತೋಡುವ ಈ ಸಮಾಜದ ಮಧ್ಯೆ ಯುವಾ ಬ್ರಿಗೇಡ್ ಕೊಂಚ ಪ್ರೌಢವಾಗಿ ವರ್ತಿಸಿತು.  ಬೇಸಿಗೆಯಲ್ಲಿ ಹೂಳು ತೆಗೆಯದೇ, ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ, ನಂತರ ಬೇಸಿಗೆಯಲ್ಲಿ ನೀರಿಲ್ಲ ಅನ್ನುವ ಗ್ರಾಮ ಪಂಚಾಯಿತಿ, ಮುನ್ಸಿಪಾಲಿಟಿಗಳು ಮಾಡಲಾಗದ ಕನಸನ್ನು ಯುವಾ ಬ್ರಿಗೇಡ್ ನ ಯುವಶಕ್ತಿ ಶುರುಹಚ್ಚಿಕೊಂಡಿತು! #ಜಲಜೀವನ ಎಂಬ ಅಭಿಯಾನ ಶುರುಮಾಡಿ, ಅದೇ ಊರಿನ ಹುಡುಗರ ಒಗ್ಗೂಡಿಸಿ ಊರಿನ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಶುರುವಿಟ್ಟುಕೊಂಡಿತು. ಹೋಬಳಿ,ತಾಲೂಕು, ಜಿಲ್ಲೆ ಎಂಬ ಭೇದವಿಲ್ಲದೆ , ಅಭಿಯಾನ ವೇಗ ಕಂಡುಕೊಂಡಿತು. ಯುವಾ ಬ್ರಿಗೇಡ್ ನ ಪ್ರೋತ್ಸಾಹ ಎಷ್ಟಿತ್ತು ಅಂದರೆ, ಯಾವ ಯುವಕರು ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದರೋ, ಅವರು ನಾ ಮುಂದು ತಾ ಮುಂದು ಅಂತ ಬಂದು ಊರ ಕೆರೆಯಲ್ಲಿ ಮಣ್ಣು ಹೊತ್ತರು. ಸರ್ಕಾರಕ್ಕಿಂತ ಚೆನ್ನಾಗಿ ಸಾವರ್ಜನಿಕರು ಕೆಲಸ ಮಾಡಬಲ್ಲರು ಎಂದು ತೋರಿಸಿಕೊಟ್ಟಿತು ಯುವಾ ಬ್ರಿಗೇಡ್. Don't underestimate the power of the common man ಅನ್ನುವ ರೀಲ್ ಡೈಲಾಗ್ ಅನ್ನು, ರಿಯಲ್ ಆಗೂ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿದರ್ಶನದ ಸಮೇತ ತೋರಿಸಿತು. ಯುವಾ ಬ್ರಿಗೇಡ್ ಸ್ವಚ್ಛಮಾಡುವ ಮುನ್ನ "ಇದೂ ಒಂದು ಕಲ್ಯಾಣಿನಾ?" ಅಂತ ಕೇಳಬಹುದಾಗಿದ್ದ ಕಲ್ಯಾಣಿಗಳಲೂ ಈಗ ನೀರಿನ ಪಸೆಯೊಡೆದಿದೆ. ಜನಗಳ ಕಣ್ಣಲ್ಲಿ ಖುಷಿ ಜಿನುಗಿದೆ. ಯುವಾ ಬ್ರಿಗೇಡ್ ನ ಕೆಲಸ ಸ್ವತಃ ಮೋದಿಯವರನ್ನೂ ಮೋಡಿ ಮಾಡಿದೆ.
ಇದೇ ಸಾಲಿಗೆ ಸೇರುವ ಕೆಲಸಗಳಲ್ಲಿ ಸಸಿ ನೆಡುವ ಯೋಜನೆ ಕೂಡ ಒಂದು.
       ನರೇಂದ್ರಮೋದಿಯವರ ಕನಸಿಗೆ ಹೆಗಲುಕೊಡುವುದು ಅಂದರೆ ಬರಿ ಕಾಂಗ್ರೆಸ್ ಅನ್ನು ನಿಂದಿಸುತ್ತಾ ಕೂರುವುದಲ್ಲ. ಫೇಸ್ ಬುಕ್ ನಲ್ಲಿ ತಾಸಿಗೊಂದು ಸ್ಟೇಟಸ್ ಅಪ್ಲೋಡ್ ಮಾಡುವುದೂ ಅಲ್ಲ ಎಂಬುದನ್ನು ಯುವಾ ಬ್ರಿಗೇಡ್ ಸಮರ್ಥವಾಗಿ ತೋರಿಸಿಕೊಟ್ಟಿದೆ. ನಮಗೆ ಯುವಾ ಬ್ರಿಗೇಡ್ ಆಪ್ತವಾಗೋದೇ ಅದರ ಸಮಾಜಮುಖೀ ಧೋರಣೆಗೆ, ಅದರ intense ಚಟುವಟಿಕೆಗೆ, ಅದರ ಅರ್ಪಿಸಿಕೊಳ್ಳುವಿಕೆಗೆ, ಅದರ ನಿಸ್ವಾರ್ಥ ನಿಲುವಿಗೆ. ಇವೆಲ್ಲಾ ಕಾರಣಗಳಿಗಾಗಿಯೇ,ನಮೋ ಬ್ರಿಗೇಡ್ ಕೂಡ ಸೆಳೆಯಲಾಗದ ನನ್ನನ್ನು, ಯುವಾ ಬ್ರಿಗೇಡ್ ಸೆಳೆದಿದೆ! You don't need power to make it happen, what you need is just the 'Will' ಎಂಬುದನ್ನ ರುಜುಮಾಡಿ ನಮ್ಮ ಕಣ್ಣ ಮುಂದಿಟ್ಟಿದೆ.

         ನಾನೇನನ್ನು ಕೊನೆಯಲ್ಲಿ ಹೇಳಬೆಕಿತ್ತೋ, ಅದನ್ನ ಮೊದಲೇ ಹೇಳಿಬಿಟ್ಟಿದ್ದೇನೆ. ಯುವಾ ಬ್ರಿಗೇಡ್ ಒಂದು ರಾಜಕೀಯ ಸಂಘಟನೆ ಅಲ್ಲ. ಸರ್ಕಾರೇತರ ಅಂತ ಬಾಯಲ್ಲಿ ಹೇಳಿಕೊಂಡು, ಬರೀ ರಾಜಕಾರವನ್ನೇ ಮಾಡುವಂತಹ ಕೆಲವು ಎನ್ ಜಿ ಒ ಗಳ ಜಾತಿಯೂ ಅಲ್ಲ. ಭಾರತ ವಿಶ್ವಗುರು ಆಗಬೇಕಾದರೆ, ಅದರ ಯುವಪುತ್ರರು ಎದ್ದು ನಿಲ್ಲಬೇಕು, ಅವರಿಗೆಲ್ಲ ಒಂದು ಅದಮ್ಯ ಸ್ಫೂರ್ತಿ ಬೇಕು ಎಂಬ ಕಾರಣಕ್ಕೆ ಸ್ಥಾಪಿತವಾದದ್ದು. ಪ್ರತಿಯೊಬ್ಬನೂ ದೇಶದ ಭಾರವೆಲ್ಲ ತನ್ನ ಮೇಲೆ ಬಿದ್ದಿದೆ ಎಂಬ ಭಾವನೆಯಿಂದ ಕೆಲಸ ಮಾಡಿದರೆ, ದೇಶ ವಿಶ್ವಗುರುವಾಗುತ್ತೆ ಎಂದು ನುಡಿದಿದ್ದರು ವಿವೇಕಾನಂದರು. ಪ್ರತಿಯೊಬ್ಬನಲ್ಲೂ ಅಂಥ ಭಾವನೆ ಮೂಡಿಸಬೇಕು ಅಂತ ಶ್ರಮಿಸುತ್ತಿರುವ ಸಂಸ್ಥೆ. "ಸೇವೆ ಮುಗಿಸಿದ ಯೋಧನೊಬ್ಬನನ್ನು ಅವನ ಊರಿನ ಜನರ ಮುಂದೆ ಸನ್ಮಾನಿಸಿದರೆ, ಅವನಿಗೆ ಎಷ್ಟು ಹೆಮ್ಮೆ ಆಗುತ್ತೆ ಅಲ್ವಾ?" ಅಂತ ಚಕ್ರವರ್ತಿ ಅವರು ಯುವಾ ಬ್ರಿಗೇಡ್ ನ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು. ಅದೇ ರೀತಿ, ರಾಷ್ಟ್ರಕ್ಕಾಗಿ ನಾವು ಅರ್ಪಿತ ಎಂದು ಹಗಲಿರುಳು ದುಡಿಯುತ್ತಿರುವ ಗುಂಪೊಂದಕ್ಕೆ, "ನಿಮ್ಮ ಅರ್ಪಣೆಗೆ, ನಮ್ಮ ಹೃತ್ಪೂರ್ವಕ ಧನ್ಯವಾದ" ಅಂತ ಹೇಳಿದ್ರೆಅವರಿಗೆ ಎಷ್ಟು ಹೆಮ್ಮೆಯಾಗುತ್ತೆ ಅಲ್ವಾ? ಅದಕ್ಕೇ, ಈ ಲೇಖನ!
                                      ~ಸಂಕೇತ್ ಡಿ ಹೆಗಡೆ
                                                        Twitter:@SankethHutgar
Facebook: Facebook.com/SankethDHegde
   

Sunday, May 8, 2016

ಅದೇ ಶಬ್ದ, ಒಂದೇ ಶಬ್ದ, "ಅಮ್ಮ..ಅಮ್ಮ..ಅಮ್ಮಾ.."                   

ಅಮ್ಮನ ಹುಟ್ಟಿದಹಬ್ಬಕ್ಕಾಗಿ ಒಂದು ಕವನ ಬರೆದಿದ್ದೆ. ತಾಯ್ತನವನ್ನು ಒಬ್ಬ ಮಗನಾಗಿ ಎಷ್ಟು ಸಾಧ್ಯವೋ ಅಷ್ಟು ಅರ್ಥಪೂರ್ಣವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇನೆ. Mother's Day ಸಲುವಾಗಿ ನಿಮಗೂ ತೋರಿಸೋಣ ಅನ್ನಿಸಿತು. ಸಣ್ಣ ಕವನ. ಓದಿ, ಅಭಿಪ್ರಾಯ ತಿಳಿಸಿ.

*******       *******     ********     ********

ಹುಟ್ಟಿದ ಮಗುವು ಹಾಡು ಕೇಳಿತು
ನೀನೇ ಹಾಡಿದೆ ಅಮ್ಮಾ
ಹಸಿದ ಹಸುಳೆ ಬಿಕ್ಕಿ ಅತ್ತಿತು
ಹಾಲನು ಕೊಟ್ಟೆ ಅಮ್ಮಾ.

ತೊದಲಿದ ಮಗುವು ಬಾಯಿ ಒಡೆಯಿತು
ಮೊದಲ ಪದವೇ "ಅಮ್ಮಾ"
ನಡೆಯುತ ಮಗುವು ಎಡವಿ ಬಿದ್ದಿತು
ನೋವಲಿ ಚೀರಿತು "ಅಮ್ಮಾ.."

ಬೆಳೆದ ಮಗುವಿಗೆ ಶಾಲೆ ಕರೆಯಿತು
ಬಿಟ್ಟು ಬಂದಳು ಅಮ್ಮ
ಗುರುವು ತೋರಿದ ಗುರಿಯೆಡೆ ಸಾಗಲು
ಮಗುವು ಆಸರಿಸಿದ ಮರ ಅಮ್ಮ

ತನ್ನ ಬದುಕಿನ ಗುರಿಯನು ಸರಿಸಿ
ನನ್ನ ಬದುಕನು ಎತ್ತಿಹಿಡಿದಳು ಅಮ್ಮ
ನನ್ನ ಗೆಲುವು ಸೋಲುಗಳು ತನ್ನದೆಂದೇ ಅರಿತಳು
ನನ್ನ ಸುಖದಲಿ ತಾನೂ ಹರ್ಷಿಸಿ, ತನ್ನ ಸುಖವನೇ ಮರೆತಳು.

ವಯಸು ತಂದಿತು ಸಿಟ್ಟು-ರೋಷ ಮಗುವಿನೊಳಗೆ ಹಾಗೆ
ಅಮ್ಮ ಹೇಳಿದನು ಕೇಳಲಾರದು, ಹುಚ್ಚು ಹರೆಯವು ಹಾಗೇ!
ತಿರುಗಿ ಹೇಳಲು ಬಾಯಿ ತುಡಿವುದು, ನನ್ನ ಒಪ್ಪಿಗೆ ಇರದೇ
ಕೋಪ ಆಕೆಯದು ತೀರ ಕ್ಷಣಿಕ, ಪ್ರೀತಿಯು ಮತ್ತೆ ಉಕ್ಕಿ ಬರದೇ?

ತುಂಬು ಜಗದಲಿ ಸೋತು ನಿಂತೆ, ಕಷ್ಟ ಬಂದಿತು ಕಂತೆ ಕಂತೆ,
ದೂರ ಹೋಯಿತೆ ಬಳಗವು?
ಅಮ್ಮ ತಾನು ಚೂರೂ ಕದಲದೆ ಅಪ್ಪಿ ಹಿಡಿದಳು ನನ್ನನು
ಅವಳ ಮನಸಿನ ತುಂಬು ಅಂದಕೆ, ನಾಚಿ ನಿಂತನು ಚಂದ್ರನು!

ಗೆಲುವು ಬಂದಿತು ಬಂದೇ ಬಂದಿತು
ಜೀವನ ಎಲ್ಲವ ಕೊಡುವುದು.
ಎಂದೂ ಮರೆಯದ ತುಂಬು ಸಾರ್ಥಕ ಆಕೆ ಮುಖವನೆ ತುಂಬಿತು,
ಇದೇ ಕ್ಷಣಕೆ ರಾತ್ರಿಹಗಲು ದುಡಿದ ಮನವು ಕುಣಿದು ಜಿಗಿದಾಡಿತು!

ವಿಧಿಯು ತಾನು ಕಠಿಣದೊಂದು ಗುದ್ದು ನೀಡಲು ಬಂದಿತು
ಮನಸು ಕರೆಯಿತು, ಹೃದಯ ಬಡಿಯಿತು, ಏರು ಧ್ವನಿಯಲಿ "ಅಮ್ಮಾ.."
ತೀರ ಕಾಣಲು ದೋಣಿ ಎಡವಲು, ಜೀವ ತಂದಿತು ಸ್ಮರಣೆಗೆ
ಅದೇ ಶಬ್ದ, ಒಂದೇ ಶಬ್ದ, "ಅಮ್ಮ..ಅಮ್ಮ..ಅಮ್ಮಾss.."
                  
                                         ~ಸಂಕೇತ್ ಡಿ ಹೆಗಡೆ.