Powered By Blogger

Friday, October 16, 2015

”..........ಕೆಸರಲ್ಲೂ ಕನಸು ಮೊಗೆದಳು, ಮೊಗೆದ ಕನಸು ಕೊಳಗೇರಿಯಲ್ಲಿ ನನಸಾಗಿತ್ತು !”

        (An article based on the information in ‘Girl in the mirror’ of ‘I have A dream’ by Rashmi Bansal on       SHAHEEN MISTRI)
  
       ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ Singham Returns ನಂತಹ ಒಂದು Action Thriller ಅನ್ನು ನೋಡಬೇಕು. ಅಥವಾ ಇನ್ಯಾವುದೋ ಸ್ಲಮ್ಮಿನ ಜೀವನದ ಬಗ್ಗೆ, ಅವರ ತೊಳಲಾಟದ ಬಗ್ಗೆ ಇರುವ ಕ್ಲಾಸಿಕ್ ಸಾಕ್ಷ್ಯಚಿತ್ರವೊಂದನ್ನು ವೀಕ್ಷಿಸಬೇಕು. ಏನು ಮಾಡುತ್ತೀರಿ? ನನ್ನ ಆಯ್ಕೆಯಂತೂ ಮೊದಲನೆಯದು. ವಾವ್, ಕಪ್ಪಗಿನ ಬಟ್ಟೆಯಲ್ಲಿ,  BMW ಬೈಕಿನಲ್ಲಿ  ಹಾರಿಸಿ - ಹೂಂಕರಿಸಿ ಬಂದ ಸೂಪರ್ ಹೀರೋ, ಎಲ್ಲ ಕಡೆಯಿಂದ ಸುತ್ತುವರಿಯುವ ವಿಲನ್‍ಗಳಿಗೆ ಮಣ್ಣುಮುಕ್ಕಿಸುವಾಗ ಆಗುವ ರೋಮಾಂಚನದೆದುರಿಗೆ, 50 ಜನರನ್ನು ಒಬ್ಬನೇ ಹೊಡೆದು ಬಿಸಾಕಿಬಿಡುವಾಗ ಆಗುವ ಪುಳಕದ ಮುಂದೆ, ಆ ಸ್ಲಮ್ಮುಗಿಮ್ಮನ್ನು ನಾನ್ಯಾಕೆ ನೋಡಬೇಕು? ನನಗೆ ಮಂಡೆ ಸಮಾ ಇದೆ ಮಾರಾಯರೇ...... ಆದರೆ ಕೆಲವರಿರುತ್ತಾರೆ. ಅವರಿಗೆ ಈ ‘ಮಂಡೆ ಸಮಾ’ ಇರುವುದಿಲ್ಲ. ಬಿಲ್‍ಕುಲ್! ಮತ್ತೇನು? ಅವರಿಗೆ ಸಮಾಜ, ದೇಶದ ಬಗ್ಗೆ ಚಿಂತೆ, ಅದರ ಜನರ ಚಿಂತೆ, ಅದರ ಸ್ಥಿತಿಯ ಚಿಂತೆ! ಅಂಬಾನಿಯಾಗುವ ಕನಸು ಕಾಣುವುದ ಬಿಟ್ಟು, ಸ್ವಪ್ನದಲ್ಲೂ ಸಮಾಜದ ಏಳ್ಗೆಯನ್ನೇ ಧ್ಯಾನಿಸುತ್ತಾರೆ. ಊರಿನ ಉಸಾಬರಿಯೆಲ್ಲ ತಮಗೇ ಬೇಕು ಎನ್ನುತ್ತಾರೆ.
    ಹ್ಞ, ನಾನು ಬರೆಯಹೊರಟಿರುವುದು ಶಿಕ್ಷಕಿಯಾಗಲಿಚ್ಛಿಸಿದ ಮಹಿಳೆಯೊಬ್ಬರ ಬಗ್ಗೆ. ಯಾವುದಾದರೂ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕರಾಗುವುದು ಬಿಟ್ಟು, ಸ್ಲಮ್ಮಿನ ಮಕ್ಕಳಿಗೆ ಹೇಳಿಕೊಡಲು ಹೋದವರ ಬಗ್ಗೆ. ಅದೇ, ಮೇಲೆ ಹೇಳಿದ ಜಾತಿಗೆ ಸೇರಿದವರು ...!
    ಆಕೆಯ ತಂದೆ ಒಬ್ಬ Citibanker.  ಸ್ಥಳದಿಂದ ಸ್ಥಳಕ್ಕೆ ಶಿಪ್ಟ್ ಆಗುತ್ತಿರುವಾತ. ಶಹೀನ್ ಮಿಸ್ತ್ರಿ ಹುಟ್ಟಿದ್ದು ಮುಂಬೈನಲ್ಲಿ. ಆಕೆ ಹುಟ್ಟಿದ ಕೆಲವೇ ದಿನಗಳಲ್ಲಿ ಲೆಬನಾನ್‍ಗೆ ದೇಶಾಂತರ ಮಾಡಿತು ಆ ಕುಟುಂಬ. ಒಮ್ಮೆ ಗ್ರೀಸ್ ದೇಶಕ್ಕೆ ರಜೆಗೆಂದು ಹೋಗಿದ್ದ ಪರಿವಾರ ಲೆಬನಾನ್‍ನಲ್ಲಿ ಯುದ್ಧ ಘೋಷಣೆಯಾಗಿದ್ದನ್ನು ಕೇಳಿ ವಾಪಾಸ್ಸಾಗದೆ ಅಲ್ಲೇ ಉಳಿದುಕೊಂಡಿತು. ನಂತರ ಮತ್ತೆ ಜಕಾರ್ತಾಗೆ ತೆರಳಿದರು. ಸ್ವಲ್ಪ ವರ್ಷಗಳ ಬಳಿಕ ಮತ್ತೆ ವರ್ಗಾವಣೆ ಅಮೇರಿಕಾಕ್ಕೆ.  ಆದ್ದರಿಂದ ರಶ್ಮಿ ಬನ್ಸಾಲ್ ಬರೆಯುತ್ತಾರೆ  “Shaheen was a child of no fixed address!” ಎಂದು. ಏನೇ ಇರಲಿ, ಎರಡು ವರ್ಷಕ್ಕೊಮ್ಮೆಯಾದರೂ ಕುಟುಂಬ ಭಾರತಕ್ಕೆ ಬಂದು ಹೋಗುತ್ತಿತ್ತು. ಹೀಗೆ ಒಮ್ಮೆ ಮನೆಗೆ ಬಂದ ಸಮಯ. ಆಗ ಶಹೀನ್ ಅಮೇರಿಕೆಯ Tufts ವಿಶ್ವವಿದ್ಯಾಲಯದಲ್ಲಿ  ಓದುತ್ತಿದ್ದಳು. ಆಕೆಯ ತಾಯಿ ಕಿವಿದೋಷವಿರುವ ಮಕ್ಕಳ ಶಾಲೆ “ಇಂಖ”ನ ಸಹಸಂಸ್ಥಾಪಕಿಯಾಗಿದ್ದರು. ಆ ಮಕ್ಕಳ ಮೂಕನೋಟ ಈಕೆಯ ಮನಸ್ಸಿಗೆ ನಾಟಿತ್ತು. ಸಮಾಜಸೇವೆಯ ಪ್ರೇರಣೆಗೆ ಇಷ್ಟು ಸಾಕಿತ್ತು. ಏನನ್ನಿಸಿತೋ ಏನೋ ಆಕೆ ಮರಳಿ ಅಮೇರಿಕೆಗೆ ಹೋಗುವುದನ್ನು ಕೈಬಿಟ್ಟಿದ್ದಳು !
    ತಾನು ಭಾರತದಲ್ಲೇ ಒಂದು ಕಾಲೇಜಿಗೆ ಸೇರುವುದಾಗಿ ಹೇಳಿ, ಮುಂಬೈನ ಕ್ಸೇವಿಯರ್ ಕಾಲೇಜಿಗೆ ಸೇರಿದಳು. ಇಂಟರೆಸ್ಟಿಂಗ್ ಆಗಿರುವುದು ಇಲ್ಲಿಂದ ಮುಂದಿನ ಕಥೆ ! ಅನೇಕ ದೇಶಗಳ ಐಷಾರಾಮುಗಳಿಗೆ ಒಗ್ಗಿದ್ದ ಜೀವಕ್ಕೆ ಭಾರತ ಏನೆಂಬುದು ಅರ್ಥವಾಗಿರಲಿಲ್ಲ. ಇದ್ದದ್ದು ಅರ್ಥವಾಗಿಸಿಕೊಳ್ಳುವ ಕುತೂಹಲ ಮಾತ್ರ. ಅದಕ್ಕಾಗಿ ‘TOI’ ನ ಒಬ್ಬ ವರದಿಗಾರನನ್ನು ಪರಿಚಯಿಸಿಕೊಂಡ ಆಕೆ ಮುಂಬೈನ ಸುತ್ತ-ಮುತ್ತ ಪಟ್ಟಣಗಳನ್ನು, ಹಳ್ಳಿಗಳನ್ನು, ಕೊಳಗೇರಿಗಳನ್ನು ಅಲೆದಾಡಿದಳು. ಜಸ್ಟ್ ಆಕೆಗೆ ಏನನ್ನಾದರೂ ಮಾಡಬೇಕಿತ್ತು.
    “The secret of getting ahead is getting started” ಎಂಬ ಮಾತಿದೆ. ‘’ಅಂಬೇಡ್ಕರ್ ನಗರ’’ ಎಂಬ ಸ್ಲಮ್ಮಿನ ಗೆಳತಿಯ ಮನೆಯೊಂದರಲ್ಲಿ ಕಾಲೇಜಿನ ಅವಧಿಯ ನಂತರ ಚಿಕ್ಕಮಕ್ಕಳಿಗೆ ಪಾಠ ಮಾಡುತ್ತಿದ್ದಳು. ಅದು 1989ರ ಸಮಯ. ತಾನು ಇಲ್ಲಿ ಹೊಂದಿಕೊಳ್ಳದಿದ್ದರೆ ಅಮೇರಿಕೆಗೆ ವರ್ಷದ ನಂತರ ಮರಳುವ ಯೋಚನೆಯಿತ್ತು. ಆದರೀಗ ಆ ಯೋಚನೆಯನ್ನು ಕೈಬಿಟ್ಟಿದ್ದಳು. ಮುಂದಿದ್ದಿದ್ದು ಯೋಜನೆ ಮಾತ್ರ ! ಆಕೆ ಅದಾಗಲೇ ಅಲ್ಲಿಯ 400-500 ಮನೆಯವರಿಂದ ಅಗತ್ಯತೆಗಳ ಬಗೆಗಿನ ಅಭಿಪ್ರಾಯ ಸಂಗ್ರಹಿಸಿದ್ದಳು. ಸ್ಲಮ್ಮಿನಲ್ಲಿ ಪಾಠ ಮಾಡುವಾಗ, ಇವತ್ತು ಬಂದ ಮಗು ನಾಳೆ ಬರದಿರಬಹುದು. ನಾಳೆ ಇದ್ದಕ್ಕಿಂದಂತೆ ಇನ್ನಿಬ್ಬರು ಬಂದು ಸೇರಬಹುದು. ಕೆಲಸ ಅಷ್ಟು ಸುಲಭವಿರಲಿಲ್ಲ ! ಹಿಡಿದಿಡಲೊಂದು ತರಗತಿ ಬೇಕಿತ್ತು. ಶಿಕ್ಷಕರಾಗಿ ಒಂದಿಷ್ಟು ಮಂದಿ ಸ್ವಯಂ ಸೇವಕರು ಬೇಕಿತ್ತು. ಆದರೆ ತನ್ನ ಸಹಪಾಠಿಗಳ ಮುಂದೆ ಆಕೆ ತನ್ನ ಯೋಜನೆಯನ್ನು ಹರವಿಟ್ಟಿಕೊಂಡಾಗ ಸ್ವತಃ ಆಕೆಯೇ ತಬ್ಬಿಬ್ಬಾಗುವಂತೆ ಅಲ್ಲಿ ನೆರೆದಿದ್ದ 98% ಜನ ಸ್ವಯಂ ಸೇವಕರಾಗಲು ಮುಂದೆ ಬಂದಿದ್ದರು ! ಮಿಡಿತ ಸಾರ್ವಜನಿಕರಲ್ಲಿರುತ್ತದೆ. ಧೈರ್ಯ ತುಂಬುವ ನಾಯಕತ್ವ ಬೇಕು ! ನಿಮ್ಮ ಶಾಲಾ ವೇಳೆ ಮುಗಿದ ನಂತರ ನಮಗೊಂದು ತರಗತಿ ಕೋಡ್ರಪೋ ಎಂದು ಅನಾಮತ್ತು 20 ಶಾಲೆಗಳನ್ನು ಅಲೆದಿದ್ದಳು ಶಹೀನ್. ಅವುಗಳಲ್ಲಿ ಒಂದು ಶಾಲೆಯಂತೂ ನಿಮ್ಮ ಮಕ್ಕಳು ಧರಿಸುವ ಬಳೆ ನಮ್ಮ ಬೆಂಚುಗಳನ್ನು ತರೆಯುತ್ತದೆ ಎಂದು ಸಾಗ ಹಾಕಿತ್ತು ! ಕೈಚೆಲ್ಲಿ ಕುಳಿತಾಳ ಶಹೀನ್ ?  “Wont take no as an answer - this is the hallmark of an entrepreneur” ಎಂದವಳು ಆಕೆ, ಕೊನೆಗೆ 21ನೇ ಶಾಲೆ ಆಕೆಗೆ ಅಂದಿತು ಓಕೆ! ಖರೆ ಹೇಳಬೇಕೆಂದರೆ ಆಕೆಯ ಶಾಲೆಯ ಮುಖ್ಯ ಉದ್ದೇಶ ಕಲಿಸುವಿಕೆಯಲ್ಲ. ಅವಕಾಶಗಳಿಂದ ವಂಚಿತವಾದ ಕಂದಮ್ಮಗಳಿಗೆ ಬಾಲ್ಯವನ್ನು ಅದಿದ್ದಹಾಗೆಯೇ ಕೊಡುವುದಾಗಿತ್ತು. 1991ರ ಹೊತ್ತಿಗೆ ಶಾಲೆ ‘ಆಕಾಂಕ್ಷಾ’ ಎಂಬ ಸ್ಪಷ್ಟ ರೂಪ ತಳೆಯಿತು. ಅಷ್ಟರಲ್ಲಿ ಶಹೀನ್  Masters in Education ಮಾಡಲು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಕ್ಕೆ ಹೊರಟು ನಿಂತಳು. ಆಗ ಈ ಯೋಜನೆಯ ನಾಯಕತ್ವವನ್ನು ಆರತಿ ಎಂಬಾಕೆ ತೆಗೆದುಕೊಂಡರು.
    ಸ್ವಯಂ ಸೇವಕರು ಹೇಗೆ ಅರ್ಪಿಸಿಕೊಂಡಿದ್ದರೆಂದರೆ ಕೆಲವೊಮ್ಮೆ ಮಕ್ಕಳನ್ನು ಕರೆದುಕೊಂಡು ಬರಲು ಅವರ ಸ್ನಾನ ಮಾಡಿಸುವ, ಬಟ್ಟೆ ಹಾಕುವ ಸರ್ಕಸ್ಸನ್ನೆಲ್ಲ ಮಾಡುತ್ತಿದ್ದರು. 1993ರಲ್ಲಿ ಶಹೀನ್ ಭಾರತಕ್ಕೆ ಮರಳಿದರು. ಸಂಪೂರ್ಣ ಸ್ವಯಂಸೇವಕರ ಮೇಲೆಯೇ ಅವಲಂಬಿತವಾಗಿರುವುದು ಪ್ರಾಯೋಗಿಕ ಯೋಚನೆಯಲ್ಲ. ವೃತ್ತಿಪರ ಶಿಕ್ಷಕರು ಬೇಕು. ಅವರಿಗೆ ಸಂಬಳ ನೀಡಬೇಕು. ಅದಕ್ಕೆ ದುಡ್ಡು...ಹೇಗೆ? ಎಲ್ಲಿಂದ? ಆಗ ರೂಪುಗೊಂಡಿತು ‘Sponsor a centre’ ಎಂಬ ಯೋಜನೆ. 15 ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡುತ್ತಿದ್ದ ಇವರ ಟೀಮ್, 1998ರ ಹೊತ್ತಿಗೆ 480 ಮಕ್ಕಳಿಗೆ 8 ಕೇಂದ್ರಗಳಲ್ಲಿ ಕಲಿಸುವಷ್ಟು ಬೆಳೆಯಿತು. 2002 ರಲ್ಲಿ ಪುಣೆಯಲ್ಲೂ ಕಣ್ಬಿಟ್ಟಿತು ‘ಆಕಾಂಕ್ಷಾ!
    ಆಕಾಂಕ್ಷಾ ಒಂದು Dedicated ಚಟುವಟಿಕೆ.“”ಏನೋ, ನನ್ನ ಕೈಲಾದಷ್ಟು ಮಾಡುತ್ತೇನೆ”” ಎಂಬ ಅಸಹಾಯಕತೆಗೆ ಬಹಷ್ಕಾರವೆಸಗಿ ಕೈಮೀರಿದ್ದನ್ನು ಮಾಡಿದ್ದಕ್ಕೆ ಆಪ್ತವಾದ ಸಂಸ್ಥೆ. ಕೊಳಗೇರಿಯ ಜನರ ”ಸಾಧ್ಯವಾದರೆ ಕಳುಹಿಸುತ್ತೇವೆ” ಎಂಬ ಧೋರಣೆಯನ್ನು ಒಪ್ಪಲಾಗದು. ಏನು ಮಾಡೋಣ? ವ್ಯವಸ್ಥೆಯೊಳಗೆ ಹೊಕ್ಕು ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಯೋಚನೆ ಬಂದದ್ದು ಆಗ. ಹೀಗೆ ಒಟ್ಟು ದತ್ತು ತೆಗೆದುಕೊಂಡ ಶಾಲೆಗಳ ಸಂಖ್ಯೆ 6. ಆಕಾಂಕ್ಷಾಕ್ಕೆ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು. “ಹೊರಚೆಲ್ಲುವಷ್ಟು ಹಣಕೊಡಿ, ನಿಮ್ಮ ಮಕ್ಕಳಿಗೆ ಅದ್ಭುತ ಕಲಿಕೆಯನ್ನು ನೀಡುತ್ತೇವೆ" ಎನ್ನುವ ಹರಕತ್ತು ಆ ಸಂಸ್ಥೆಗಿರಲಿಲ್ಲ.  ಸರ್ಕಾರ ಕಲಿಕೆಗೆ ನೀಡುವ ಹಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದು ಅದರ strategy! ಸಂಸ್ಥೆಯ ಮಂದಿ ಆಗಾಗ ಸಭೆ ಸೇರಿ ಹೇಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಲಿಸುವುದು  ಎಂಬುದನ್ನು ಕಂಡುಕೊಳ್ಳುತ್ತಿದ್ದರು.
    ಕಲಿಸುವುದು passion ಆಗಿದ್ದ ಅಲ್ಲಿಯ ಶಿಕ್ಷಕರಿಗೆ ಉಡುಗೊರೆಯಂತೆ ಅಲ್ಲಿಯ 87% ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಪಾಸಾಗಿದ್ದರು ! “ಅದರಲ್ಲಿ 58% ಜನ ಕಾಲೇಜಿಗೂ ಹೋಗುತ್ತಾರೆ. ಅವರಿಗೆ ಅವಶ್ಯಕತೆ ಇರುವುದರಿಂದ ಪಾರ್ಟ್ ಟೈಮ್ ಕೆಲಸಕ್ಕೂ ಹೋಗುತ್ತಾರೆ. 15 ರಿಂದ 20 ಸಾವಿರ ರೂಪಾಯಿ ಸಂಪಾದಿಸುತ್ತಾರೆ” ಎಂದು ಹೇಳುವಾಗ ಶಹೀನರ ಕಣ್ಣಲ್ಲಿ ಹೆಮ್ಮೆಯ ಹೊಳಪು. ದೀಪದಲ್ಲಿ ಹೊಳಪಿರುವುದರಲ್ಲೇನು ವಿಶೇಷತೆ? 60 ಆಕಾಂಕ್ಷಗಳಲ್ಲಿ ಬರೋಬ್ಬರಿ 700 ಮಂದಿ ಕಲಿಸುತ್ತಾರೆ, 350 ರೆಗ್ಯುಲರ್ ಸ್ವಯಂಸೇವಕರಿದ್ದಾರೆ. ಸರಿ, ಹೌದು, ಸಂಸ್ಥೆ ಕೆಲವು ಸಾವಿರ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ. ಆದರೆ ಸಮಸ್ಯೆ ಪರಿಹಾರವಾದಂತಾ? ಪವಾಡ ಮಾಡಿ ಸಮಸ್ಯೆಯ ಹೆಡೆಮುರಿಕಟ್ಟಬಹುದಾ? ಮತ್ತೆ ಶಹೀನ್ ಸಹಿಸಲಾರಳು.‘ಹಾಸಿಗೆಯಿದ್ದಷ್ಟು ಕಾಲುಚಾಚೆಂದರೆ “”ಯಾಕೆ, ಹಾಸಿಗೆಯನ್ನೇ ಉದ್ದ ಮಾಡುತ್ತೇನೆ”” ಎಂಬುದು ಆಕೆಯ  smart answer! ‘’Teach for America’’  ಎಂಬ ಅಭಿಯಾನದಿಂದ ಪ್ರೇರೇಪಿತವಾಗಿ ಹುಟ್ಟಿಕೊಂಡಿದ್ದ ‘’Teach for India’’ ಎಂಬ ಯೋಜನೆಯ ಕದ ತಟ್ಟಿದರು ಶಹೀನ್.
    ಈ ಯೋಜನೆಯಲ್ಲಿ ಕೆಲಸಕ್ಕೆ ಸೇರುವ ಮೊದಲು ಸ್ವಲ್ಪ ತಿಂಗಳು ಯುವಜನತೆ ಮಕ್ಕಳಿಗೆ ಕಲಿಸುವ ಕೆಲಸ ಮಾಡುತ್ತಾರೆ. ನಂತರ ಬೇರೆ ಬೇರೆ ರಂಗಗಳಲ್ಲಿ ಕೆಲಸ ಮಾಡುವ ಅವರಿಗೆ ಇಲ್ಲಿನ ಸಮಸ್ಯೆಗಳ ಅರಿವಿರುವುದರಿಂದ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡಾರು ಎಂಬುದು ಆಲೋಚನೆ. ಕರೆದಾಗ ಬಂದ 8000 ಅರ್ಜಿಗಳಲ್ಲಿ 237 ಜನರನ್ನು ಆಯ್ದುಕೊಳ್ಳಲಾಯಿತು. ಕಡಿಮೆ ಸಂಬಳಕ್ಕೆ ಮುಂಬೈ - ಪುಣೆಗಳಲ್ಲಿನ ಶಾಲೆಗಳಲ್ಲಿ ಅವರು ಕಲಿಸಬೇಕಿತ್ತು. ಅಷ್ಟು ಜನಕ್ಕೆ ರೂ. 20,000 ದಂತೆ ಸಂಬಳ ನೀಡಲು ಸಂಸ್ಥೆಗೆ ಮತ್ತೆ ಹಣದ ಅವಶ್ಯಕತೆ ಬಂತು. ಶಹೀನ್‍ರದ್ದು ಬಡಕುಟುಂವೇನು ಅಲ್ಲ. ಆ ಕುಟುಂಬಕ್ಕಿದ್ದ ಶ್ರೀಮಂತ contactಗಳಿಂದ ಮೊದಲು ಹಣ ಸಂಗ್ರಹವಾಯಿತು. ನಮ್ಮವರಲ್ಲೊಬ್ಬಳು ಯಾರೂ ತುಳಿಯದ ಹಾದಿ ತುಳಿಯುತ್ತಿದ್ದಾಳಲ್ಲ ಎಂಬ ಪ್ರೀತಿಯಿಂದ ! ದಾನಿಗಳಿಗೆ “”ಸಮರ್ಥನಾಯಕರ ಮುಂದಿನ ಪೀಳಿಗೆಯನ್ನು ತರಗತಿಯಲ್ಲಿ ಕಟ್ಟೋಣ ಬನ್ನಿ ” ಎಂದು ಕರೆಕೊಟ್ಟರು. ‘Sponser a fellow’  ಎಂಬ ಯೋಜನೆಯಡಿ ದೇಣಿಗೆ ಸಂಗ್ರಹಿಸಿದರು.
    ಅದಾಗಲೇ ಆಕಾಂಕ್ಷಕ್ಕೊಂದು ‘ಬ್ರ್ಯಾಂಡ್ ವಾಲ್ಯೂ’ ಬಂದಿತ್ತು. 3500 ಮಕ್ಕಳನ್ನೊಳಗೊಂಡಿದ್ದ ಸಾಧಾರಣ ದೊಡ್ಡ ಆಕಾಂಕ್ಷಾಗೆ ಅಸಾಧಾರಣ ಖ್ಯಾತಿ ತಂದುಕೊಟ್ಟಿದ್ದು ಅದರ ಗುಣಮಟ್ಟ. ಶಹೀನ್‍ರೇ ಹೇಳುವ ಪ್ರಕಾರ ಗಳಿಸಿದ ವರ್ಚಸ್ಸನ್ನು ಸಂಭಾಳಿಸುವುದು ಅದನ್ನು ಗಳಿಸುವುದಕ್ಕಿಂತ ಕಷ್ಟ. ಆದರೆ, ಸಂಸ್ಥೆಗೆ ಹೊಂದುವ ಶಿಕ್ಷಕರನ್ನು ಆಯ್ದು ಅವರ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಬಿಟ್ಟರೆ, ಅವರ ಕೆಲಸದ ಪ್ರತಿಫಲವನ್ನು ಮನದಟ್ಟು ಮಾಡಿಬಿಟ್ಟರೆ, ಅತ್ಯಂತ ಗುಣಮಟ್ಟದ ಸೇವೆಯನ್ನು ಅವರು ಕೊಡುತ್ತಾರೆ. ಆಕಾಂಕ್ಷಾ ಬೆಳೆಯುತ್ತಿರುವ ಸಂಸ್ಥೆ, ಬೆಳೆಸಲು ಅನೇಕ ಜನರು ಬೇಕು. ಅವರಿಗೆಲ್ಲ ಒಳ್ಳೆಯ ಸಂಬಳವನ್ನೇ ನೀಡಬೇಕು. ಆದರೆ” ಎಷ್ಟೇ ಕಷ್ಟ ಇದ್ದರೂ “Let’s keep working on it” ಎಂಬುದು ಶಹೀನರ ಸಿದ್ದಾಂತ.
    ಸಮಾಜದ ಹಿತಕ್ಕಾಗಿ ಮುಡಿಪಾಗಿಟ್ಟರೂ ಶಹೀನ್‍ಗೆ ತಮ್ಮದು ಎಂದು ಒಂದು ಬದುಕಿರುತ್ತದಲ್ಲವಾ? ಒಳ್ಳೆಯ ಸಂಬಳವನ್ನೇ ಪಡೆಯುವ ಶಹೀನ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಾನಾ ಮತ್ತು ಸಮರಾ. ಆಕೆಯ ಜೀವನದಲ್ಲಿ ಎಲ್ಲವೂ ಸರಿಯಿದೆಯೆಂದುಕೊಳ್ಳಬೇಡಿ. ಆರು ತಿಂಗಳ ಗರ್ಭಿಣಿಯಾಗಿದ್ದಾಗ ಆಕೆ ವಿವಾಹವಿಚ್ಛೇದನ ಎದುರಿಸಬೇಕಾಯಿತು.
    ಆಕೆಯ “work culture’ ಎಂಥದ್ದು ಎಂದರೆ, ಡೆಲಿವರಿಯಾಗುವ ಹಿಂದಿನ ದಿನದವರೆಗೂ ಆಕೆ ಆಕಾಂಕ್ಷಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವರ ಮಾತುಗಳಲ್ಲೇ ಕೇಳಿ: “I really literally was in a meeting when I went into labour and I went to the hospital. And I think a week after I returned home, I started working again” ಈಗೇನನ್ನುತ್ತೀರಿ..? ಬೆಳಿಗ್ಗೆ ಮಕ್ಕಳನ್ನು ಅವರೇ ರೆಡಿ ಮಾಡುತ್ತಾರಂತೆ. “”ಸಂಜೆ ಶಾಲೆಯಿಂದ ಆ ಮಕ್ಕಳಿಬ್ಬರು ಅಜ್ಜಿ ಮನೆಗೆ ಹೋಗುತ್ತಾರೆ. ಬರುವಷ್ಟರಲ್ಲಿ ರಾತ್ರಿ ಏಳುವರೆ ಆಗಿರುತ್ತದೆ.  ಅಷ್ಟರಲ್ಲಿ ನಾನೂ ಬರುತ್ತೇನೆ. ಮನೆಯಲ್ಲಿದ್ದಾಗ ರಾತ್ರಿ ಹೊರಹೋಗುವ ಕೆಲಸವೇನು ಬರುವುದಿಲ್ಲ. ಹೊರ ಊರಿಗೆ ಹೋದಾಗ ಕಸಿನ್/ಗೆಳೆಯರ್ಯಾರಾದರು ಮಕ್ಕಳನ್ನು ನೋಡಿಕೊಳ್ಳುತ್ತಾರೆ” ಎನ್ನುತ್ತಾರೆ ಶಹೀನ್, Manageable only to her!
    ಜೀನ್ಸ್, ಹಾಲ್ಟರ್ - ಟಾಪ್ ತೊಡುವ ಶಹೀನ್, ನೋಡಿದ ಕ್ಷಣಕ್ಕೆ ನಿಮಗೆ ಸಮಾಜ ಸೇವಕಿಯಂತೆ ಕಾಣಲಾರರು! ಒಮ್ಮೆ ಕಾಲೇಜಿನಲ್ಲಿದ್ದಾಗ, ಖಾದಿ ಸೀರೆ ಉಟ್ಟುಹೋದಾಗ ಗೆಳತಿಯೊಬ್ಬರು ಇವರನ್ನು ಪ್ರೊಫೆಸರ್ ಎಂದು ತಿಳಿದು ಮಾಡಾಡಿಸಿದ್ದರಂತೆ ! “You don’t look like a social worker”  ಎಂದು ರಶ್ಮಿ ಬನ್ಸಾಲ್ ಕೇಳಿದಾಗ ಹೀಗೆ
    ಸಮಾಜಸೇವೆ ಬೇಡುವುದು ಕಾಳಜಿಯನ್ನಷ್ಟೇ ಅಲ್ಲ, ದೃಢ ಮನಸ್ಸನ್ನು ಕೂಡ! ಸಾಮಾನ್ಯರಾದ ನಮ್ಮಲ್ಲಿ ಕಾಳಜಿಯಿರಬಹುದು, ಬದಲಾವಣೆ ನನ್ನಿಂದಾಗಲಿ ಎಂಬ ದೃಢ ಮನಸ್ಸಲ್ಲ! ಅಷ್ಟಕ್ಕೂ ಶಹೀನ್‍ಗೆ ಇದೆಲ್ಲ ಅವಶ್ಯಕತೆ ಇರಲಿಲ್ಲ. ಆಕೆಯ ಬಳಿ ಹೋಗಿ “ಸಹಾಯ ಮಾಡು” ಎಂದು ಭಾರತ ಸರ್ಕಾರವೇನು ಗೋಗರೆದಿರಲಿಲ್ಲ. ಅಮೇರಿಕೆಯಲ್ಲಿ ಓದು ಮುಗಿಸಿ, ಇಂಗ್ಲೆಂಡಿನಲ್ಲಿ ಕೆಲಸ ಮಾಡಿ, ನಿವೃತ್ತಿ ಜೀವನವನ್ನು ಆಸ್ಟ್ರೇಲಿಯಾದಲ್ಲಿ ಕಳೆಯಬಹುದಿತ್ತು. ಆಕೆಯನ್ನು ಯಾರೂ ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಆಕೆಯ ಮುಂದಿದ್ದದೂ ಅದೇ ಸಮಾಜ, ನಮ್ಮ ಮುಂದಿರುವುದೂ ಅದೇ ಸಮಾಜ. ಆದರೆ ಆಕೆಯಲ್ಲಿ ಸ್ಫುರಿಸಿತ್ತು ಬದಲಿಸುವ ಇಚ್ಛಾಶಕ್ತಿ! ಕೈಚೆಲ್ಲಿ ಕೂರದೇ ಕ್ರಾಂತಿ ಮಾಡುತ್ತಾರಲ್ಲ, ಇವರಿಗೆಲ್ಲ ದೇವರೇನಾದರೂ ಎಕ್ಸ್ಟ್ರಾ ಪವರ್ ಕೊಟ್ಟಿದ್ದಾನಾ? ದಿನಕ್ಕೆ 24 ಗಂಟೆಗಿಂತ ಹೆಚ್ಚನ್ನು ಗುಟ್ಟಾಗಿ ಕೊಟ್ಟಿದ್ದಾನಾ? ದುರವಸ್ಥೆಗೆಲ್ಲ ಸರ್ಕಾರ, ರಾಜಕಾರಣಿಗಳನ್ನು ದೂರುವ ನಾವು, ನಮಗ್ಯಾಕೆ ತ್ರಿವಿಕ್ರಮ ಸಾಧಿಸಿದ ಶಹೀನ್‍ನಂಥವರು ನಮ್ಮನಿಮ್ಮಲ್ಲೊಬ್ಬರೆಂಬುದು ಅರ್ಥವಾಗುವುದಿಲ್ಲ? ಬದುಕಿನ ಪ್ರತಿಹೆಜ್ಜೆಯಲ್ಲೂ ಅಸಹಾಯಕರಾಗುವ, ವ್ಯವಸ್ಥೆ ಮೇಲೆ ಹರಿಹಾಯುವ ನಮಗೆ, ನಾವೂ ಇದೇ ವ್ಯವಸ್ಥೆಯ ತುಂಡೆಂಬುದು ತಡವಾಗಿಯೂ ಹೊಳೆಯುವುದಿಲ್ಲವಲ್ಲ? “ಶಹೀನ್ ಮಾತ್ರ ‘ಕೆಸರಲ್ಲೂ ಕನಸು ಮೊಗೆದಿದ್ದರು, ಮೊಗೆದ ಕನಸು ಕೊಳಗೇರಿಯಲ್ಲಿ ನನಸಾಗಿತ್ತು’!”

                               -ಸಂಕೇತ್ ಡಿ ಹೆಗಡೆ,
                            
ಕಾರಣವಿವರಿಸಿದ್ದರು ಶಹೀನ್.
   ಸಾಗರ.

1 comment: