Powered By Blogger

Monday, February 6, 2017

'ಯುವಾ"- 218 ಮನೆಗಳನ್ನು ಬೆಳಗಿರುವ 18ರ ಪೋರರಿವರು..!!

 ಸಾಮಾನ್ಯವಾಗಿ ಆ ವಯಸ್ಸು ಇಂಥವುಕ್ಕೆಲ್ಲ ಎಡೆ ಮಾಡಿಕೊಡುವುದಿಲ್ಲ! ಹೌದು, ಅದು ಜಗತ್ತು ಬಣ್ಣ ಬಣ್ಣವಾಗಿ ಕಾಣುವ ವಯಸ್ಸು. ಆದಷ್ಟು ಮನರಂಜನೆಯ ಅರಸುವ, ಗೆಳೆತನದಲ್ಲಿ ಬಂಧಿಯಾಗಿ ಮೋಜನನುಭವಿಸುವ ವಯಸ್ಸು. ಸಿನೆಮಾ ಗಿನೇಮಾ ಡೈಲಾಗ್ ಗಳನ್ನು ಕ್ರೇಜಲ್ಲಿ ಗಟ್ಟುಹೊಡೆದು, ಸ್ಟೈಲಾಗಿ ಆಗಾಗಿ ಹೊಡೆಯುತ್ತಿರುವ ವಯಸ್ಸು. Actually ಇವೆಲ್ಲ ಶುರುವಾದಾಗ, ಅವರಿಗೆ ಇಂಥದ್ದರಲ್ಲೂ ಸ್ಪಷ್ಟತೆ ಮೂಡದ, ಪ್ರೌಢಿಮೆ ಇರದ ವಯಸ್ಸು. ಅವರಾಗ ಮುಗಿಸಿದ್ದಿದ್ದು ಹತ್ತನೆಯ ತರಗತಿಯನ್ನಷ್ಟೇ!
     ಅವರಿಗೆ ಅಂಥದ್ದೇನಾಯಿತು ಅನ್ನುವ ಪ್ರಶ್ನೆಯೇ? ಚಿಕ್ಕದೊಂದು ಸ್ಫುರಣೆಯಾಯಿತು! ಹತ್ತನೇ ಕ್ಲಾಸು ಮುಗಿದಿದ್ದ ರಜೆಯ ಮೋಜಿನ ಸಮಯವದು. ರಜೆಯನ್ನು ಕಳೆಯಲು ಅವರಲ್ಲೊಬ್ಬನ ಮೂಲವಾದ, ದಕ್ಷಿಣ ಕನ್ನಡದ ಪುತ್ತೂರಿನ ಬಳಿಯ ಒಂದು ಕುಗ್ರಾಮಕ್ಕೆ ಬಂದಿದ್ದರು! ಕರಾವಳಿಯ ಪ್ರಕೃತಿ ಸೊಗಡು. ಹಚ್ಚ ಹಸಿರಿನ, ಗದ್ದೆ-ತೋಟಗಳ, ಕಾನುಕೋಟಲೆಗಳ ಪರಿಸರ. ಹಗಲೆಲ್ಲ ಮನಸಃ ಪೂರ್ವಕವಾಗಿ ಆಡಿ ಕುಣಿದರು. ಊರೆಲ್ಲ ತಿರುಗಿ ಬಸವಳಿದು ಸಂಜೆಯಾಗುವಷ್ಟರಲ್ಲಿ ಹಳ್ಳಿಯ ಅವರು ಉಳಿದಿದ್ದ ಮನೆಗೆ ಬಂದರು. ಇವರೆಲ್ಲ ಒರಗಿ ವಿಶ್ರಾಂತಿ ಪಡೆಯುತ್ತಿದ್ದಂತೆ, ಸೂರ್ಯನೂ ವಿಶ್ರಾಂತಿಗೆಂದು ಬಾನಂಚಿಗೆ ಸಮೀಪಿಸತೊಡಗಿದ. ಕೊನೆಗೊಮ್ಮೆ ಮುಳುಗಿಹೋದ.
      ಇವರೆಲ್ಲ ಮೈಸೂರಿನಂತಹ ಪಟ್ಟಣದಲ್ಲಿ ಬೆಳೆದವರು. ಇಷ್ಟೊತ್ತಿಗೆಲ್ಲ ಅವಶ್ಯಕತೆ ಇದ್ದರೂ ಇಲ್ಲದಿದ್ದರೂ, ಮನೆಯ ತುಂಬೆಲ್ಲ ಟ್ಯೂಬ್ ಲೈಟ್ ಹಾಕಿ ಅಭ್ಯಾಸ. ಇಲ್ಲಿ ಯಾವ ಲೈಟನ್ನೂ ಯಾರೂ ಹಾಕಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತಲ್ಲಿ ಸಂಪೂರ್ಣ ಕತ್ತಲಾಗತ್ತೆ, ಆಗ ಹಾಕುತ್ತಾರೆ ಅಂತ ಸುಮ್ಮನಾದರು. ಅವರಲ್ಲೊಬ್ಬ ಧರಂ ವೀರ್ ಸಿಂಗ್. ಆತನಿಗೋ, ಕತ್ತಲ ಕಂಡರೆ ಎಲ್ಲಿಲ್ಲದ ಭಯ.
ಹೊತ್ತಾಯಿತು, ಕತ್ತಲಾಯಿತು, ಊಹೂಂ, ಯಾವ ಲೈಟೂ ಬೆಳಗಲಿಲ್ಲ. ಕಾರಣ ವಿಚಾರಿಸಿದಾಗ ಆ ಹಳ್ಳಿಯ ಜನ ಇನ್ನೂ ಕರೆಂಟ್ ನ ಮುಖವನ್ನು ನೋಡೇ ಇಲ್ಲ ಅಂತ ಗೊತ್ತಾಯಿತು!
       ಅದು ಉತ್ಸಾಹೀ ವಯಸ್ಸು. ಅದು ಸಾಹಸಪ್ರಿಯ ವಯಸ್ಸು ನೋಡಿ. ಆದರೆ ದುರಂತ ಏನೆಂದರೆ ನಮ್ಮ ಯುವ ಸಾಹಸ-ಉತ್ಸಾಹಗಳೆಲ್ಲ ಬೇಡದ್ದರಲ್ಲಿ ವಿನಿಯೋಗವಾಗಿ ದಿಕ್ಕು ತಪ್ಪಿಬಿಡುತ್ತವೆ. ಇಲ್ಲಿ ಹಾಗಾಗಲಿಲ್ಲ. ಭಂಡ ಧೈರ್ಯ ಮಾಡಿ, ಈ ಗೆಳೆಯರು ಕೂಡಿ ಇವರಿಗೆಲ್ಲ ಬೆಳಕಾಗಬೇಕು ಅಂತ ತೀರ್ಮಾನಿಸಿಯೇ ಬಿಟ್ಟರು!
        ಅದೇ ಈಗ YUVA(Youth United for a Vision to Achieve) ಅನ್ನೋ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯ ಶೈಶವಾವಸ್ಥೆ! ಅಂದು ನಾಲ್ವರಿದ್ದದ್ದು, ಇವತ್ತು ತೊಂಬತ್ತಾರು ಜನರಿರುವ ತಂಡವಾಗಿ ಬೆಳೆದಿದೆ. ಆವತ್ತು ಆ ಮನೆಯನ್ನು ಬೆಳಗಿದ್ದು, ಇವತ್ತು ಬರೋಬ್ಬರಿ 218 ಮನೆಗಳಿಗೆ ಬೆಳಕು ನೀಡಿರುವ ಸಂಸ್ಥೆಯಾಗಿ ಬೆಳೆದಿದೆ! ಆವತ್ತು ಅಂಬೆಗಾಲಿಟ್ಟಿದ್ದ ತಂಡ, ಇವತ್ತು ಎಂಟು ಪ್ರಾಜೆಕ್ಟ್ ಗಳನ್ನು ಮಾಡಿ ಮುಗಿಸಿದೆ! ಆವತ್ತು ಕತ್ತಲಿಗೆ ಹೆದರಿದ್ದ ಪೋರರು, ಇವತ್ತು ಕತ್ತಲಲ್ಲಿದ್ದವರಿಗೆ ಒಂದು ಹಿಡಿಯಷ್ಟಾದರೂ ಬೆಳಕನ್ನು ಕೊಡುವ ಸಾರ್ಥಕ್ಯ ಮೆರೆದಿದ್ದಾರೆ! ಆವತ್ತು ಹಸಿ ಮನಸ್ಸಿನ ಹುಚ್ಚು ಕನಸು ಅನ್ನಿಸಿಕೊಂಡಿದ್ದು, ಇವತ್ತು ಸಮಾಜಕ್ಕೆ ಬಿಸಿರಕ್ತ ತಂಪೆರೆದ ಆಶಾಕಿರಣದಂತೆ ಭಾಸವಾಗಿದೆ. What A Journey!


      

( ಯುವಾ ಒಂದು ರಿಜಿಸ್ಟರ್ಡ್ ಎನ್ ಜಿ ಒ. ಕಾಗದ ಪತ್ರದ ಚಿತ್ರ ಮೇಲಿದೆ)

ಪೋರರೇ ತುಂಬಿದ್ದ 'ಯುವಾ' ಪ್ರಥಮ ದೊಡ್ಡ ಹೆಜ್ಜೆ ಇಟ್ಟಿದ್ದು ಪುತ್ತೂರಿನಲ್ಲಿ. ಯುವಾದ ಸ್ಥೂಲ ಪ್ಲಾನ್ ಇರುವುದೇ. "ಅತ್ಯುತ್ಕೃಷ್ಟ ಸೋಲಾರ್ ಕಿಟ್ ಗಳನ್ನು ಖರೀದಿಸಿ, ಇನ್ನೂ ಕರೆಂಟ್ ಲೈನ್ ಗಳು ಬಾರದ, ತೀರಾ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ, ಅಲ್ಲಿಯ ಮನೆಗಳಿಗೆ ಅಳವಡಿಸುವುದು". ಇಂತಹ ಪ್ರತೀ ಸೋಲಾರ್ ಕಿಟ್ ಗೂ 3500 ರೂಪಾಯಿಗಳ ಖರ್ಚಾಗುತ್ತಿತ್ತು. ಒಂದೇ ವಾರದಲ್ಲಿ ಶತಾಯುಗತಾಯು ಪ್ರಯತ್ನಿಸಿ 76,800 ರೂಪಾಯಿಗಳನ್ನು ಮೈಸೂರಿನಲ್ಲಿ ಜನರಿಂದ ಒಟ್ಟು ಮಾಡಿದ ಯುವಾ ತಂಡ, ಪುತ್ತೂರಿನ ಬಳಿಯ ಬೆಳಕು ಕಾಣದಿದ್ದ 'ಸೆನಾ' ಎಂಬ ಹಳ್ಳಿಗೆ ಬಂದಿಳಿದು, ಮೂವತ್ತೈದು ಮನೆಗಳಿಗೆ ತಮ್ಮ ಸೋಲಾರ್ ಕಿಟ್ ಅನ್ನು ಅಳವಡಿಸಿ, ಅಲ್ಲಿಯ ಜನ ಪ್ರಥಮಬಾರಿಗೆ ರಾತ್ರಿಯಲ್ಲೂ ಸ್ಪಷ್ಟವಾಗಿ ಕಾಣುವಂತೆ ಮಾಡಿದರು. ಅಷ್ಟರಲ್ಲೇ, ಹೆಚ್ಡಿ ಕೋಟೆ, ಪುತ್ತೂರು ಮತ್ತು ಹುಣಸೂರಿನ ಮೂವತ್ತು ಮನೆಗಳನ್ನೂ ಸೋಲಾರ್ ದೀಪಗಳಿಂದ ಬೆಳಗಿಸಿ, ಗೆಲುವಿನ ನಗೆ ಬೀರಿದರು. ಅಲ್ಲಿಂದ ಶುರುವಾಯಿತು ನೋಡಿ, ಈ ತರುಣ-ತರುಣಿಯರ ನಾಗಾಲೋಟ!
     "ಒಂದು ಚಾಲೆಂಜ್, ಅದಕ್ಕೆ ನಾವು ಪಟ್ಟ ಕಷ್ಟಗಳು, ಮತ್ತು ಕೊನೆಗೆ ಅದಕ್ಕೆ ಸಿಕ್ಕ ಜಯ" ಇದು ನಮ್ಮ ಕೈಕಾಲುಗಳಲ್ಲಿ ನವ ಹುರುಪೊಂದೊಂದನ್ನು ತುಂಬುತ್ತದೆ.  ಇಷ್ಟು ಮಾಡುವಷ್ಟರಲ್ಲಿ ಗುಂಪಿಗೆ, "ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಅನ್ನುವ ಭಂಡ ಧೈರ್ಯ, ಛಲ ಜೊತೆಯಾಯಿತು. ತಮ್ಮೊಂದಿಗೆ ಇನ್ನಷ್ಟು ಸಾಹಸಿ, ಆಸಕ್ತ ತರುಣ/ಣಿ ಯರನ್ನು ಸೇರಿಸಿಕೊಳ್ಳತೊದಗಿದರು. ಮೈಸೂರು ಮತ್ತು ಬೆಂಗಳೂರಿನಲ್ಲಿ "ಯುವಾ' ಸಂಸ್ಥೆಯ ಅಧಿಕೃತ ಎರಡು ಬ್ರಾಂಚ್ ಗಳನ್ನು ತೆಗೆದರು. ಇಂಥ ಕೆಲಸಗಳನ್ನು ಮಾಡುವಾಗ ಎದುರಾಗುವ ಅತಿದೊಡ್ಡ ತಲೆನೋವು, Funding. ಹಣ ಹೊಂದಿಸುವಿಕೆ. ಇವರುಗಳೋ ಇನ್ನೂ ಓದುತ್ತಿರುವ ವಿದ್ಯಾರ್ಥಿಗಳು, ದುದಿಯುವವರಲ್ಲ. "ಅಪ್ಪಾ ಸಮಾಜ ಸೇವೆ ಮಾದುತ್ತೇವೆ, ಒಂದಷ್ತು ಲಕ್ಷ ದುಡ್ದು ಕೊಡಿ" ಅಂತ ಮನೆಯಲ್ಲಿ ಕೇಳುವುದು ಬಾಲಿಶ. ಸಮಾಜಕ್ಕೆಲ್ಲ್ಲ ಹಂಚಬಹುದಾದಷ್ಟು ದುಡ್ಡು ಹೊಂದಿದ ಶ್ರೀಮಂತ ಕುತುಂಬ ಇವರದ್ಯಾರದ್ದೂ ಆಗಿರಲಿಲ್ಲ. ಆದ್ದರಿಂದ, ಸಮಾಜದಿಂದಲೇ ವಿವಿಧ ವಿಧಾನಗಳಿಂದ ಹಣ ಸಂಗ್ರಹಿಸಿ, ಅದನ್ನು ಸಮಾಜಕ್ಕೆ ಸಮರ್ಥವಾಗಿ ಹಿಂದಿರುಗಿಸುವ ಶ್ಲಾಘನೀಯ ನಿರ್ಧಾರ ಇವರದ್ದು.

img
    
 Gudville ಅನ್ನುವ ಸಂಸ್ಥೆ, ಇಂತಹ ಎನ್ ಜಿ ಒ ಗಳಿಗೆ, ಆನ್ಲೈನ್ ಮಾಧ್ಯಮದಲ್ಲಿ ಹಣ ಸಂಗ್ರಹಿಸಲು ವೇದಿಕೆ ಒದಗಿಸಿಕೊಡುತ್ತದೆ. ಅದು ನಡೆಸಿದ ಸ್ಪರ್ಧೆಗಳಲ್ಲಿ ಯುವಾ ತಲಾ ಎರಡು ಬಾರಿ ವಿನ್ನರ್ ಹಾಗೂ ರನ್ನರ್ ಅಪ್ ಆಗುವ ಮೂಲಕ 2.5 ಲಕ್ಷ ರೂಪಾಯಿಗಳನ್ನು ಗೆದ್ದಿತು. ಯುವಾಗೆ ಕಸುವು ಬಂದಂತಾಯಿತು.
      ಪ್ರಾರಂಭದಲ್ಲಿ 3500 ರೂಗಳಷ್ಟಾಗುತ್ತಿದ್ದ ಉಪಕರಣ ವ್ಯಚ್ಚ, ಈಗ 2200ಕ್ಕೆ ಇಳಿದಿತ್ತು. ಅದಾಗಲೆ ಯುವಾ ಮತ್ತೆರಡು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡಾಗಿತ್ತು. ಅದು ಕಾರವಾರ ತಾಲೂಕಿನ ಕರ್ತೋಲಿ ಗ್ರಾಮ, ಸಣಕೆ ವಾಸೆ, ಮತ್ತು ಕದ್ರಾ ಬಳಿಯ ಕೆಲವು ಹಳ್ಳಿಗಳು. ಯುವಾ ತಂಡ ಬಂದು ಬೀಡುಬಿಟ್ಟಿತು. ಶುರುವಾಯಿತು ನೋದಿ Light-Up Revolution-1. ತಂಡದ ಬದ್ಧತೆ ಹೇಗಿತ್ತೆಂದರೆ, ಕೇವಲ ಇಪ್ಪತ್ನಾಲ್ಕು ಗಂಟೆಯೊಳಗೆ ಅಲ್ಲಿಯ 63 ಮನೆಗಳು ಸೋಲಾರ್ ಬೆಳಕಿನಿಂದ ಪ್ರಜ್ವಲಿಸತೊಡಗಿದವು. ಅದರಲ್ಲಿಯೂ 'ಸಣಕೆ ವಾಸೆ" ಸಮರ್ಪಕ ರಸ್ತೆ ಸಂಪರ್ಕವೂ ಇರದ, ಅನಾಮತ್ತು ಇಪ್ಪತ್ತು ಕಿಲೋಮೀಟರ್ ಗಳನ್ನು ನಡೆದುಕೊಂಡೇ ತಲುಪಬೇಕಾದ ಗಮ್ಯ! ಇವರೊಂದೇ ನಡೆದು ಹೋಗುವುದಲ್ಲ, ಕಿಟ್ ಸಹಿತ ಎಲ್ಲ ಉಪಕರಣಗಳನ್ನೂ ನಡೆದೇ ಸಾಗಿಸಬೇಕು! ಅಲ್ಲಿಯ ಜನರಲ್ಲಿ ಮಂದಹಾಸ, ಈ ಯುವಶಕ್ತಿಯ ಮೈಗಳಲ್ಲಿ ರೋಮಾಂಚನ. ಅಷ್ಟರಲ್ಲೆ Light-Up Revolution-2 ಕೂಡ ನಡೆದುಹೋಯಿತು. ಅದರ ಅಡಿಯಲ್ಲಿ ಪೆಂಜನಹಳ್ಳಿ ಮತ್ತು ಹೆಚ್ಡಿ ಕೋಟೆಗಳ ಹದಿನಾರು ಮನೆಗಳು ದೀಪ ಕಂಡವು.

img
       ಅದು ಜನವರಿ, 2015. ಸರ್ಕಾರ ಕಣ್ಣಿಗೂ ಈ ಯುವಶಕ್ತಿ ಬಿತ್ತು. ಸ್ವತಃ  ಗವರ್ನ್ಮೆಂಟೇ ಎಪ್ಪತ್ತೈದು ಮನೆಗಳಿಗೆ ಕಿಟ್ ಅಳವಡಿಸಲು ಹಣ ಮಂಜೂರು ಮಾಡಿತು. LightUp Revolution-2 ಅಡಿಯಲ್ಲಿ, ರಂಗಾಯಣ ಕೊಪ್ಲು ಮತ್ತು ಹುಣಸೂರಿನ ಬಳಿಯ 75 ಮನೆಗಳೂ ಬೆಳಕು ಕಂಡವು. ಈಗ ಮಾಧ್ಯಮಗಳಿಗೆ ಗಮನ ಕೊದದೇ ಬೆರೆ ವಿಧಿಯೇ ಇರಲಿಲ್ಲ! ರೇಡಿಯೋ ಚಾನೆಲ್ಗಳು, ಸುದ್ದಿ ವಾಹಿನಿಗಳು ಯುವಾದ ಪ್ರಮುಖರನ್ನು ಸಂದರ್ಶಿಸಿ ಪ್ರಸಾರ ಮಾಡಿದವು.
       ಆವತ್ತು ಹತ್ತನೆ ತರಗತಿಯಲ್ಲಿದ್ದವರು, ಇವತ್ತು ಇಂಜಿನಿಯರಿಂಗ್, ಮೆಡಿಕಲ್ ಮುಗಿಸುವ ಹಂತದಲ್ಲಿದ್ದಾರೆ. ಬೆಂಗಳೂರಿನ ನಾಲ್ಕು ಮತ್ತು ಮೈಸೂರಿನ ಎರಡು ಕಾಲೇಜುಗಳಲ್ಲಿ ಯುವಾದ ಪಡೆಗಳೇ ಇವೆ. "Our Youth are not useless, they are usedless" ಅಂದಿದ್ದರು ವಿವೇಕಾನಂದರು. ಆದರೆ ಇಂತಹ ಯುವ ಜನತೆ, ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಸೇವೆಗೆ ಟೊಂಕ ಕಟ್ಟಿ ನಿಂತಿದೆ! ಸಮಾಜದ ಕಷ್ಟಕೋಟಲೆಗಳ ವಿರುದ್ಧ 'ನಾವೊಂದು ಕೈ ನೋಡೇ ಬಿಡ್ತೀವಿ ನನ್ಮಗಂದ್, ಯಾಕ್ ಸರಿ ಆಗಲ್ಲ?" ಅಂತ ತೊಡೆ ತಟ್ಟಿ ನಿಂತಿದೆ. ದೇಶದ ತುಂಬಾ ನಾವು ಮಾಡಿಕೊಂಡಿರುವ ಗಲೀಜಿಗೆ, "ಥೂ ಈ ದೇಶದ್ ಹಣೆಬರಹನೇ ಇಷ್ಟು" ಅಂತೆಲ್ಲ ದೇಶವನ್ನೆ ಬಯ್ಯುತ್ತಿರುತ್ತೇವೆ. ಅಂತಹುದರಲ್ಲಿ "ಬದಲಾವಣೆ ಶುರಾಗುವುದಾದರೆ ಅದು ನಮ್ಮಿಂದಾಗಲಿ" ಅಂತ ಎದೆಯುಬ್ಬಿಸುವ ಈ ಯುವಕರಿಗೆ ನಾವು ಸಪೋರ್ಟ್ ಮಾಡಬೇಕು ಅಲ್ಲವೇ?
       "ಯುವಾ" ನಾಡಿದ್ದು ಫೆಬ್ರುವರಿ 14ರಿಂದ ಮೂರುದಿನ ಉತ್ತರಕನ್ನಡದ, ಯಲ್ಲಾಪುರ ಮತ್ತು ಜೊಯಿಡಾ ಬಳಿಯ ಹಳ್ಳಿಗಳಿಗೆ BLUR-2 ಎಂಬ ಪ್ರಾಜೆಕ್ಟ್ ಅಡಿ ಮನೆಗಳನ್ನು ಬೆಳಗಲು ಹೊರಟು ನಿಂತಿದೆ. ಆದರೆ, ಕೊನೆಯ ಸಮಯದಲ್ಲಿ ಕೊಂಚ ಹಣಕಾಸು ಸಮಸ್ಯೆ ಉದ್ಭವಿಸಿದೆ. ನಮಗೆ ಡೈರೆಕ್ಟ್ ಆಗಿ ಹೋಗಿ ಹಿಂದುಳಿದ ಸಮಾಜಕ್ಕೆ ಬೆಳಕು ನೀಡಲು ಸಾಧ್ಯವಿಲ್ಲ. ಇವರಿಗಾದರೂ ಕೊಂಚವಾದರೂ, ಕೈಲಾದಷ್ಟಾದರೂ ನೆರವಾಗಿ, ನಮ್ಮ ಪಾಲಿನ ಪುಣ್ಯ ಪಡೆಯಬಹುದು.

ನೀವು ಈ ವಿದ್ಯಾರ್ಥಿಗಳೇ ಕಟ್ಟಿ ಬೆಳೆಸಿದ ಸಂಸ್ಥೆಯ ಬಗ್ಗೆ ಆಸಕ್ತರಾಗಿದ್ದರೆ ಅವರ ವೆಬ್ಸೈಟ್ iamyuva.org ನೋಡಬಹುದು.

ಇವರಿಗೆ ನಿಮಗೆ ಇಷ್ಟಬಂದಷ್ಟು, ಕೊಂಚವಾದರೂ ಹಣ ಸಹಾಯ ಮಾಡುವ ಇಚ್ಛೆಯಾದರೆ ಕೆಳಗಿನ ಲಿಂಕ್ ಮೂಲಕ ಅವರ ಅಧಿಕೃತ ಖಾತೆಗೆ ವರ್ಗಾಯಿಸಬಹುದು.
http://www.milaap.org/fundraisers/yuvablur2

ಅಥವಾ ಈ QR code ಅನ್ನು ಸ್ಕ್ಯಾನ್ ಮಾಡಿ.