Powered By Blogger

Sunday, March 6, 2016

"ನನಗೆ ಅಜಾದಿ ಬೇಕು" ಎಂಬ ಆಕರ್ಷಕ ಅಪ್ರಬುದ್ಧತೆ!!


    ಫೇಸ್ಬುಕ್ಕಿನಲ್ಲಿ ಸುಮ್ಮನೆ ಜಾಲಾಡುತ್ತಿದ್ದಾಗ ವಾಕ್ಯವೊಂದು ಎಡತಾಕಿತು. "Strict parents raise best liars" ಅಂತ. ತೀರಾ ಸ್ಟ್ರಿಕ್ಟ್ ಪೋಷಕರ ಮಕ್ಕಳು ಅತ್ಯುತ್ತಮ ಸುಳ್ಳುಗಾರರಾಗುತ್ತಾರೆ ಅಂತ. ಸತ್ಯ. ಮಕ್ಕಳು ಸ್ವಚ್ಚಂದವಾಗಿ ಸ್ವತಂತ್ರ್ಯವಾಗಿ  ಅವರಷ್ಟಕ್ಕೆ ಬೆಳೆಯಲು ಬಿಡದಿದ್ದರೆ, ಅವರು ತಪ್ಪಿಸಿಕೊಳ್ಳಲು ಅದ್ಭುತ ಸುಳ್ಳುಗಳನ್ನು ಹೆಣೆಯಬಲ್ಲ ಪ್ರತಿಭಾವಂತರಾಗಿಬಿಡುತ್ತಾರೆ! ಮನುಷ್ಯ ಅಂತ ಅಲ್ಲ, ಸ್ವಾತಂತ್ರ್ಯ ಪ್ರತಿ ಜೀವಿಯ ಮೂಲಭೂತ ಹಕ್ಕು. ಆದರೆ... ತನ್ನ ಮಗುವಿಗೆ ಸ್ವಾತಂತ್ರ್ಯ ಕೊಡಬೇಕೆಂದು ತಾಯಿ ಮಗುವಿಗೆ ಸಂಪೂರ್ಣ ತನ್ನಷ್ಟಕ್ಕೆ ಬೆಳೆಯಲು ಬಿಟ್ಟರೆ ಏನಾಗುತ್ತೆ? ತನ್ನ ಮಗು ಸರ್ವತೋಮುಖವಾಗಿ ಬೆಳೆಯಬೇಕೆಂದು ತಂದೆ ಮಗುವನ್ನು ಸಂಪೂರ್ಣ ಸ್ವೇಚ್ಛೆಗೆ ಬಿಟ್ಟುಬಿಟ್ಟರೆ ಏನಾಗುತ್ತೆ? ಮಗು ಹಾದಿತಪ್ಪದೆ ಉಳಿದೀತೇನು? ಆಜಾದಿ ಸರಿ, ಆದರೆ ಅದು ಆರೋಗ್ಯಪೂರ್ಣ ಆಜಾದಿ ಆದರೆ ಮಾತ್ರ ಚಂದ. ಸುಮ್ಮನೆ ಬೀದಿತಪ್ಪಿದ ನಾಲ್ಕು ಹುಡುಗರು ಹಾದಿತಪ್ಪಿದ ಹಳೆಯ ಸಿದ್ದಾಂತವೊಂದನ್ನು ನಂಬಿ, ಮತ್ತೂ ನಾಲ್ಕು ಕುರಿಗಳನ್ನ ಸೇರಿಸಿ ಕೆಲಸಕ್ಕೆ ಬಾರದ so called ಕ್ರಾಂತಿ ಮಾಡುತ್ತೇವೆ, ಆಜಾದಿ ತರುತ್ತೇವೆ ಅಂತೆಲ್ಲ ಕೂಗಿದರೆ ಚಂದವಲ್ಲ, ಭಂಗ. ಅವರು ಕೇಳುತ್ತಿರುವುದು ಖಂಡಿತವಾಗಿಯೂ ಸ್ವಾತಂತ್ರ್ಯವನ್ನಲ್ಲ, ಸ್ವೇಚ್ಛೆಯನ್ನ, ಅರಾಜಕತೆ ತಂದಿಡುವ ಸ್ವೇಚ್ಛೆಯನ್ನ. ಅದನ್ನೇ ಸ್ವಲ್ಪ ಆಕರ್ಷಣೀಯವಾಗಿ "ನಮಗೆ ಭಾರತದಿಂದ ಸ್ವಾತಂತ್ರ್ಯ ಬೇಡ. ಭಾರತದಲ್ಲಿ ಬೇಕು" ಅಂತ ಕೇಳುತ್ತಿರುವುದು. ಪ್ರಥಮ ಬಾರಿಗೆ ಕೇಳುತ್ತಿರುವವನಿಗೆ "ಎಷ್ಟು ಸೊಗಸಾಗಿ ಮಾತಾಡ್ತಾನಪಾ" ಅನ್ನಿಸಬೇಕು.
    ನನಗೆ ತೀರಾ ನಿಗೂಢವಾಗಿ ಕಾಣುವ ವಿಷಯ ಅಂದರೆ ಈ ಎಡಪಂಥೀಯ ಚಿಂತನೆ ಉಳ್ಳ ಬುದ್ಧಿಜೀವಿಗಳು, ಕನ್ನಯ್ಯನಂತವರೆಲ್ಲ ಯಾಕೆ ಹೀಗೆ ರಾಷ್ಟ್ರಿಯತೆಗೆ ವಿರೋಧವಾಗಿರುವ ಸಂಗತಿಗಳನ್ನೇ ಇಷ್ಟಪಟ್ಟು ಪಸರಿಸುತ್ತಾರೆ ಎಂಬುದು. ಅವರಿಗೇನು ನಿಜವಾಗಿಯೂ ಸತ್ಯ ಗೊತ್ತಿಲ್ಲವ? ಭಾರತ ತನ್ನ ಪ್ರಜೆಗಳಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ಕೊಟ್ಟಿದೆ ಎಂಬುದು. ನಾವು ನೀವು ಇರುವುದೂ ಒಂದೇ ಭೂಮಿಯಲ್ಲಿ, ಅಂಥವರಿರುವುದೂ ಒಂದೇ ಭೂಮಿಯಲ್ಲಿ, ಅಂಥದ್ದರಲ್ಲಿ ನಮಗೆ ಕಣ್ಣಿಗೆ ಹೊಡೆಯುವ ಸತ್ಯ ಅವರ ಕಣ್ಣಿಗೆ ಮಸುಬಾಗಿಯೂ ಕಾಣದೇನು? ಯಾಕೀ ಪೂರ್ವಗ್ರಹಪೀಡಿತ ರೋಗಗ್ರಸ್ಥ ಮನಸ್ಸು? ಖ್ಯಾತಿಯ ಚಿಂತೆಯಾ? ವೋಟಿನ ಚಿಂತೆಯಾ? ಕಾಸಿನ ಚಿಂತೆಯಾ? ಅಸ್ತಿತ್ವದ ಚಿಂತೆಯಾ? ಅಥವಾ ಪೊಳ್ಳು ಭ್ರಮೆಯನ್ನೇ ತಾನೂ ನಂಬಿ ಪರರನ್ನೂ ನಂಬಿಸುವುದು ಒಂದು ಮಾನಸಿಕ ಖಾಯಿಲೆಯಾ?
    ನಿಜ ಹೇಳುವುದಾದರೆ, ಭಾರತದಲ್ಲಿ ಸ್ವಾತಂತ್ರ್ಯ ಅವಶ್ಯಕತೆಗಿಂತ ತುಸು ಹೆಚ್ಚೇ ಇದೆ. ಅವರುಗಳು ದಿನ ಬೆಳಗಾದರೆ ಬೊಬ್ಬಿರಿಯುವ ಅಭಿವ್ಯಕ್ತಿ ಸ್ವಾತಂತ್ರ್ಯವಂತೂ ಸಾಕುಬೇಕಷ್ಟು ಇದೆ. ಭಾರತದಲ್ಲಿ ಬಹುಸಂಖ್ಯಾತ ಧರ್ಮವೊಂದರ ಪವಿತ್ರ ಗ್ರಂಥವನ್ನೇ ಸುಟ್ಟುಹಾಕುತ್ತೇನೆ ಅನ್ನಬಹುದು! ಮರ್ಯಾದಾ ಪುರುಷೋತ್ತಮ ಅಂತ ಗೌರವಿಸಿ ಪೂಜಿಸುವ ರಾಮನ ಬಗ್ಗೆ ಇಲ್ಲಸಲ್ಲದ ಮಾತನಾಡಬಹುದು. ಆ ಧರ್ಮವನ್ನು ಹೀಯಾಳಿಸಿ ಚಿತ್ರಗಳನ್ನು ತೆಗೆದು ನೂರಾರು ಕೋಟಿ ಸಂಪಾದಿಸಬಹುದು. ತಾನು ಏನೋ ದೊಡ್ಡದನ್ನು ಕಡಿದಿಟ್ಟ ಜ್ಞಾನಿಯಂತೆ ಪವಿತ್ರ ಗ್ರಂಥಗಳನ್ನೇ ಸುಳ್ಳೆಂದು ಪ್ರತಿಪಾದಿಸಿ counter theory ಬರೆಯಬಹುದು. ಪಠ್ಯಪುಸ್ತಕಗಳಲ್ಲೆ ಇತಿಹಾಸವನ್ನು ತಿರುಚಿ ವೈರಿಗಳನ್ನೇ ಹೀರೊಗಳನ್ನಾಗಿ ಮಾಡಿಬಿಡಬಹುದು. ರಕ್ತ ಕುಡಿದು ಹೋದ ಭಯೋತ್ಪಾದಕರ ಸ್ಮರಣೆ ಮಾಡಬಹುದು, ಅವರಿಗೆಲ್ಲ ಸ್ಮಾರಕ ಕಟ್ಟಬಹುದು. ಶಿಕ್ಷಿಸಿದ್ದಕ್ಕೆ ನ್ಯಾಯಾಂಗವನ್ನೇ ಮನಃಪೂರ್ವಕವಾಗಿ ಬೈದು, Black day for Indian Democracy ಅಂದುಬಿಡಬಹುದು. ಯಾವುದೋ ಸಾವನ್ನು ಚಾಣಾಕ್ಷ್ಯವಾಗಿ ಮಿಸ್ ಲೀಡ್ ಮಾಡಿ, ಭಾರತದ ಸಮಾಜದಲ್ಲಿ ಮಾನವೀಯತೆಯೇ ಇಲ್ಲ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಕಳೆದುಬಿಡಬಹುದು. ಬಹುಸಂಖ್ಯಾತರು ನಂಬಿ ಪೂಜಿಸುವ ದೈವತೆಗಳ ಕುರಿತೇ ಕಟ್ಟದಾಗಿ ಮಾತಾಡಬಹುದು. ಕೊನೆಗೆ ತುಟಿ ಪಿಟಕ್ ಅನ್ನದೇ ಎಲ್ಲವನ್ನೂ ಸಹಿಸಿಕೊಂಡಿದ್ದರೂ "ಇದು ಅಸಹಿಷ್ಣು ರಾಷ್ಟ್ರ" ಅಂತ ಅದ್ಭುತ ಷರಾ ಬರೆದುಬಿಡಬಹುದು.
ಮೇಲೆ ಹೆಳಿದ್ದನ್ನೆಲ್ಲ ಮಾಡಿದವರು ಈ ಕ್ಷಣದಲ್ಲೂ ಇದೇ ದೇಶದ ರಸ್ತೆಗಳಲ್ಲಿ  ಸ್ವತಂತ್ರವಾಗೇ ಓಡಾಡಿಕೊಂಡಿದ್ದಾರೆ. ಮತ್ತೆ ದಾರಿಯಲ್ಲೆಲ್ಲಾದರೂ ಮೈಕ್ ಸಿಕ್ಕರೆ ಮತ್ತೆ ಇವುಗಳನ್ನೆಲ್ಲ ಅಭಿವ್ಯಕ್ತಿಸಲು ಕಾತರದಿಂದಿದ್ದಾರೆ. ಕನ್ನಯ್ಯನಿಗೆ ಮತ್ತೆ ಈ ದೇಶದಲ್ಲಿ ಆಜಾದಿ ಬೇಕಂತೆ, ಪಾಪ.
     ತಪ್ಪು ಕನ್ನಯ್ಯನದಲ್ಲ. ದೇವರದ್ದು!  ಉಸಿರಾಡಲೂ ಅಧ್ಯಕ್ಷನ ಕೇಳಬೇಕಿರುವ ಉತ್ತರ ಕೊರಿಯಾದಲ್ಲೊ, ದೇಶದ್ರೊಹಿಗಳನ್ನ ಶಿಕ್ಷಿಸಿದಾಗ ಬೀದಿಗಿಳಿದು ಸಂಭ್ರಮಿಸುವ ಅಮೆರಿಕೆಯಲ್ಲೋ, ದೇಶಕ್ಕೆ ಎರವಾದವರ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳುವ ಜರ್ಮನಿ, ಫ್ರಾನ್ಸ್ನಲ್ಲೊ , ಇಂಥವರನ್ನೆಲ್ಲ ಸಮರ್ಥಿಸಲು ಒಬ್ಬರೂ ಸಿಗದ ಇಂಗ್ಲೆಂಡಿನಲ್ಲೊ, ಮಾತೆತ್ತಿದರೆ ಹೆಡೆಮುರಿಕಟ್ಟುವ ಇವರದೇ ಕಮ್ಮ್ಯುನಿಸ್ಟ್ ಚೀನಾದಲ್ಲೊ ಇವನನ್ನ ಹುಟ್ಟಿಸಬೇಕಿತ್ತು. ಭಾರತ ಕೊಟ್ಟ ಆಜಾದಿಯ ಬೆಲೆ ಅರ್ಥವಾಗುತ್ತಿತ್ತು. ಇವರ "ಲಾಲ್ ಸಲಾಮ್" ಚೀನಾ ಒಮ್ಮೆ ಏನು ಮಾಡಿತ್ತು ಗೊತ್ತೇನು?
     ಅದು 1989ರ ಏಪ್ರಿಲ್ ತಿಂಗಳು. ಪ್ರಜಾಪ್ರಭುತ್ವ ಪರ ಸಂಘಟನೆಗಳೆಲ್ಲ ಸೇರಿ ಬೀಜಿಂಗ್ ನ ಟಿಯಾನ್ ಮನ್ ಸ್ಕ್ವೆರ್ ನಲ್ಲಿ ದೊಡ್ಡ ಪ್ರತಿಭಟನೆಯನ್ನು ಏರ್ಪಡಿಸಿದ್ದವು. ಮುಖ್ಯವಾಗಿ ವಿದ್ಯಾರ್ಥಿಗಳ ಪ್ರತಿಭಟನೆಯಾಗಿದ್ದ ಇದಕ್ಕೆ ನಾಗರಿಕರೂ ತೀವ್ರ ಬೆಂಬಲ ನೀಡಿದ್ದರು. ಇತರ ನೂರಾರು ಪಟ್ಟಣಗಳಿಗೂ ಕ್ರಾಂತಿಯ ಕಿಡಿ ಪಸರಿಸಿತು. ಪರಿಸ್ಥಿತಿ ಕೈಮೀರಿದ್ದನ್ನು ನೋಡಿ, ಚೀನಾ ಸರ್ಕಾರ martial law ಜಾರಿ ಮಾಡಿತು. ಪ್ರತಿಭಟನೆಯ ಸ್ಥಳಕ್ಕೆ ಸೇನೆ ಬಂತು. ಯುದ್ಧ ಟ್ಯಾಂಕರ್ ಗಳು ಬಂದವು. ಪ್ರತಿಭಟನಾಕಾರರು ನಿರಾಯುಧ ಜನಸಾಮಾನ್ಯರು. ಸೇನೆ ಅವರೆಡೆಗೆ ಗುಂಡು-ಮದ್ದುಗಳ ಮಳೆಗರೆಯಿತು. ನೋಡು ನೋಡುತ್ತಿದ್ದಂತೆ, ಪ್ರತಿಭಟನಾಕಾರರು ಸತ್ತುಬೀಳತೊಡಗಿದರು. ವಿದ್ಯಾರ್ಥಿಗಳಿದ್ದರು, ಪ್ರೊಫೆಸ್ಸರುಗಳಿದ್ದರು, ವೃದ್ಧರಿದ್ದರು, ಮಹಿಳೆಯರಿದ್ದರು, ಮಕ್ಕಳಿದ್ದರು, ಅಮಾಯಕ ನಾಗರೀಕರಿದ್ದರು. ಆದರೆ ಎಲ್ಲರೂ ಸತ್ತುಬಿದ್ದಿದ್ದರು. ಸರ್ಕಾರೀ ವರದಿಗಳು ಮುನ್ನೂರು ಜನ ಸತ್ತರು ಅಂದವು. ರೆಡ್ ಕ್ರಾಸ್ ಸಂಸ್ಥೆ 2600 ಜನ ಅಸುನೀಗಿದರು ಅಂದಿತು. ಲೆಕ್ಕ ಇವತ್ತಿಗೂ ಗೊಂದಲ. ಸಂಶೋಧಿಸಲು ಸರ್ಕಾರ ಯಾರನ್ನಾದರೂ ಬಿಟ್ಟರೆ ತಾನೆ?
     ಭಾರತ ಹಾಗಾಗಲು ಸಾಧ್ಯವಿಲ್ಲ. ಅದು ಇಲ್ಲಿಯ ಸಂಸ್ಕೃತಿ ಖಂಡಿತ ಅಲ್ಲ. ಹಾಗಾಗಲೂ ಬಾರದು. ನನ್ನ ದೇಶ ಮಾನವೀಯ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ತನ್ನ ಪ್ರತೀ ಪ್ರಜೆಗೂ ಸ್ವಾತಂತ್ರ್ಯ ಕೊಟ್ಟ ಅದ್ಭುತ ದೇಶ ಎಂಬ ಕೀರ್ತಿ ಅದಕ್ಕಿದೆ. ಆದರೂ ಯಾಕೆ ಹೀಗೆ ಮಾಡುತ್ತೀರಿ? ನಿಮಗೇನು ಕಮ್ಮಿ ಮಾಡಿದೆ ಈ ದೇಶ? ನೀವು ಓದುತ್ತಿರುವ ಆ JNU ವನ್ನು ಕಟ್ಟುಕೊಟ್ಟಿದ್ದು, ಈಗ ನಿಮ್ಮನ್ನು ದುಡ್ಡು ಕೊಟ್ಟು ಓದಿಸುತ್ತಿರುವುದು ಇದೇ ದೆಶವಲ್ಲವಾ? No, please, I just don't want to get lost until I come to know, why this happened to my country.
    ಪ್ರಿಯ ಕನ್ನಯ್ಯ, ನಿಮಗೆ ದೇಶಕ್ಕೆ ಒಳಿತು ಮಾಡುವ ಕಲ್ಪನೆಯಿದ್ದರೆ ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳಲು ಸಾಕುಬೇಕಷ್ಟು ವಿಷಯಗಳಿವೆ. ಈ ಬೇಡದ ಟೊಳ್ಳು misconceptionಗಳ ಬೆನ್ನು ಬಿದ್ದು ಭವಿಷ್ಯ ಹಾಳುಗೆಡವಿಕೊಳ್ಳಬೇಡಿ. ಒಂದು ತಿಂಗಳ cheap popularity ದಕ್ಕೀತಷ್ಟೆ. ದೇಶಕ್ಕೇನೂ ಲಾಭವಿಲ್ಲ. ಬದಲು ಸಮಾಜದ ಮುಖ್ಯವಾಹಿನಿಗಿಳಿದು, ಅದರ ನಿಜವಾದ ನೋವು ನಲಿವುಗಳನ್ನ ಅರಿತು, ಕಷ್ಟ ಕ್ಲೀಷೆಗಳನ್ನು ಬಗೆಹರಿಸುವ ಕುರಿತು ಕಾರ್ಯೋನ್ಮುಖವಾದರೆ ಜೀವನ ಸಾರ್ಥಕವಾಗುತ್ತೆ. ಭಾರತ ತನ್ನೊಳಗೆ ನಮಗೆಲ್ಲ ಸಾಕಷ್ಟು ಸ್ವಾತಂತ್ರ್ಯವನ್ನು ಕೊಟ್ಟಿದೆ. ನನ್ನ ದೇಶ ನನ್ನನ್ನು ನನ್ನ ಹಾಗಿರಲು ಬಿಟ್ಟ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ಎಲ್ಲವನ್ನೂ ಸಹಿಸಿಕೊಂಡೂ ಸದೃಢವಾಗಿರುವ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ನಿಮ್ಮಂತವರ ವ್ಯರ್ಥ ಪ್ರಯತ್ನಗಳನ್ನೆಲ್ಲ ಮೆಟ್ಟಿನಿಲ್ಲಲು ಸಶಕ್ತವಾದ ದೇಶ ಎಂಬ ಹೆಮ್ಮೆ ನನಗಿದೆ. ಧನ್ಯವಾದ.
   

No comments:

Post a Comment