Powered By Blogger

Saturday, June 11, 2016

'ಕೋಟಿ ಮನಸ್ಸು, ಒಂದು ಕನಸು'ಗಳಿಗೆ ಒಂದು ದಿಕ್ಕೂ ಸಿಕ್ಕು, ಅದಾಗಲೇ ಎರಡು ವರ್ಷ..!

    ಒಪ್ಪಿಕೊಳ್ಳೋಣ! ಇವತ್ತು ಚೀನಾ ಅಮೆರಿಕಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಬೆಳೆದುನಿಂತಿದೆ. ಹಿರಿಯಣ್ಣನಿಗೊಂದು ಪರ್ಯಾಯ ಶಕ್ತಿಯಾಗಿ ಸೆಡ್ಡು ಹೊಡೆದಿದೆ. ಆದರೂ ಅದಕ್ಕೆ ಭಾರತದ ಬಗ್ಗೆ ಒಂದು ದೊಡ್ಡ ಹೂಟ್ಟೆಕಿಚ್ಚಿದೆ! ಜಗತ್ತೂ ಅಷ್ಟೇ, ಭಾರತದ ಮೇಲೆ ಒಂದು ಹಿಡಿ ಹೆಚ್ಚು ಭರವಸೆ ಇಟ್ಟಿದೆ, ಭಾರತದ ಕನಸುಗಳ ಮೇಲೆ ತುಸು ಜಾಸ್ತಿಯೇ ನಂಬಿಕೆ ಇಟ್ಟುಕೊಂಡಿದೆ! ಯಾಕೆ ಗೊತ್ತೇನು? The Human Resource, ಮಾನವ ಸಂಪನ್ಮೂಲ. ಚೀನಾದಲ್ಲೇನು ಕಮ್ಮಿ ಜನ ಇದ್ದಾರೆಯೇ? ಅಂತ ನಗಬೇಡಿ, ಇಲ್ಲ ಅಂತ ಯಾರು ಹೇಳಿದ್ದು? ಆದರೆ ಭಾರತದಲ್ಲಿ ಯುವ ಜನಾಂಗ ಅಧಿಕವಾಗಿದೆ. That makes all the difference. ಚೀನಾ ತನ್ನ ಕುಟುಂಬ ಯೋಜನೆಯ ಕಠಿಣ ನಿರ್ಧಾರದ ಒಂದು ಅಡ್ಡ ಪರಿಣಾಮವಾಗಿ, ವೃದ್ಧರ ದೇಶವಾಗಿ ಕುಂತಿದೆ. ಇತ್ತ ಭಾರತ ಯುವಶಕ್ತಿಯ ಕಾಮನಬಿಲ್ಲಾಗಿ  ಹೊಂಗನಸು ಬೀರುತ್ತಿದೆ. ಆದರೆ ಸೃಷ್ಟಿಯ ವಿಪರ್ಯಾಸವೆಂಬಂತೆ ಯುವ ಜನಾಂಗ ಬಿಸಿರಕ್ತದ ಮದದಲ್ಲಿ ದಾರಿ ತಪ್ಪುವ ಸಂದರ್ಭ ಹೆಚ್ಚು. ದೇಶವೊಂದಕ್ಕೆ ತನ್ನ ಯುವ ಜನಾಂಗ ಪೂರಕವೂ ಆಗಬಹುದು, ಮಾರಕವೂ ಆಗಬಹುದು. "ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗಿತ್ತು ವೀರದಂಡು" ಎಂಬಂತೆ, ಮುಂದಿರುವ ಗುರಿಯಕಡೆ ಮುಖಮಾಡಿಸಬಲ್ಲಂತ ಗುರುವೊಂದು ಯುವಶಕ್ತಿಗೆ ದಕ್ಕಿಬಿಟ್ಟರೆ, ಆಗ ಶಕ್ತಿಯ ನಾಗಾಲಾಟವನ್ನು ಹಿಡಿಯಲು ಯಾವುದಕ್ಕೂ ಸಾಧ್ಯವಾಗುವುದಿಲ್ಲ. ಕರ್ನಾಟಕದ ಕೆಲವು ಪ್ರಬುದ್ಧ ಯುವಮನಸ್ಸುಗಳಿಗೆ ಹೀಗನಿಸಿದ್ದೇ ತಡ, ಒಂದು ರಾಷ್ಟ್ರೀಯ ಬದ್ಧತೆಯ, ರಾಷ್ಟ್ರವಾದೀ ಧ್ಯೇಯಗಳ ಸಂಘಟನೆ ಒಂದು ರೂಪುತಾಳಿತು, 'ದಿ ಯುವಾ ಬ್ರಿಗೇಡ್"!.  ನೋಡುನೋಡುತ್ತಿದ್ದಂತೆ ಆ ಶುಭ್ರ ಮನಸ್ಸಿನ, ಶ್ರೇಷ್ಠ ಕನಸಿನ ಆ ಹಸುಗೂಸಿಗೆ ಮೊನ್ನೆ ಎರಡು ವರ್ಷವಾಗಿಬಿಟ್ಟಿತು.
       ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಮಾಡುವಲ್ಲಿ ಶ್ರಮಿಸಲು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 'ನಮೋ ಬ್ರಿಗೇಡ್' ರಚನೆಯಾಗಿತ್ತು. ಸೂಲಿಬೆಲೆ ಅವರೇ ಹೇಳುವ ಪ್ರಕಾರ, ಅದು "ಹುಟ್ಟುವಾಗಲೇ ಎಂದು ಸಾಯಬೇಕೆಂದು ನಿರ್ಧಾರ ಮಾಡಿದ್ದ ಕೂಸು". ನಮೋ ಪ್ರಮಾಣವಚನ ಸ್ವೀಕರಿಸಿ ಅಧಿಕೃತವಾಗಿ 'ಭಾರತದ ಪ್ರಧಾನಿ' ಎಂದು ಘೋಷಣೆಯಾದ ಮೇಲೆ, ಬ್ರಿಗೇಡ್ ನ "Mission Completed". ನಮೋ ಬ್ರಿಗೇಡ್ ನ ವಿಸರ್ಜಿಸುವ ಯೋಚನೆಯಲ್ಲಿದ್ದಾಗ ಚಕ್ರವರ್ತಿ ಅವರಿಗೆ ಆಪ್ತ ರಾಜಕಾರಣಿಯೊಬ್ಬರು ಕರೆ ಮಾಡಿ " ನೀವು ಯುವಕರಲ್ಲಿ ಒಮ್ಮೆ ಸಂಘಟನೆಯ ಉತ್ಸಾಹ ಮೂಡಿಸಿ, ಹೀಗೆ ನಡು ನೀರಿನಲ್ಲಿ ಕೈ ಬಿಡುತ್ತಿರುವುದು ಸರಿಯಲ್ಲ" ಅಂದರಂತೆ. ಅದಕ್ಕೂ ಮೊದಲೂ ಈ ಯೋಚನೆ ತಂಡದಲ್ಲಿ ಹೊಳೆದಿತ್ತು. ಅಲ್ಲದೇ "ಸಮಾಜದ ಕೂಗನ್ನ, ಕನಸುಗಳನ್ನ ಸಮರ್ಥವಾಗಿ ಪ್ರಧಾನಿಗೆ ಮುಟ್ಟಿಸುವ ಶಕ್ತಿ"ಯಾಗಿ ಸಂಘಟನೆಯೊಂದರ ಅವಶ್ಯಕತೆಯೂ ಇತ್ತು.                 
     ಇವೆಲ್ಲದರ ಫಲವಾಗಿ ಜನ್ಮ ತಾಳಿದ್ದು, 'ಯುವಾ ಬ್ರಿಗೇಡ್'. ಯುವಾ ಬ್ರಿಗೇಡ್ ಆರಂಭದಲ್ಲೇ ಎಷ್ಟು ಯೋಜಿತವಾಗಿ ರೂಪುಗೊಂಡಿತ್ತು ಅಂದರೆ, ಯುವಜನಾಂಗದಲ್ಲಿ ಇರಬೇಕಾದ ದೂರದೃಷಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಒಂದೊಂದಕ್ಕೂ ಒಂದೊಂದು ಪ್ರತ್ಯೇಕ ಶಾಖೆಯನ್ನೇ ನೀಡಲಾಗಿತ್ತು. ಮಹಾರಕ್ಷಕ್, ಡಿಜಿಟಲ್ ಸನ್ಸ್ಕಾರ್, ವಿತ್ತಶಕ್ತಿ, ಮತ್ತು ಸದ್ಭಾವನಾ ಎಂದು.  ತನ್ನ ಕುಟುಂಬವನ್ನು ತ್ಯಜಿಸಿ ನಮಗಾಗಿ ಹಗಲಿರುಳು ಬಾಂಬು ಗ್ರೆನೇಡ್ ಗಳ ನೀರೀಕ್ಷೆಯಲ್ಲಿ ಗಡಿಯಲ್ಲಿ ನಿಂತಿರುವ ಸೈನಿಕನ ಕುಟುಂಬಕ್ಕೆ "ನಿಮಗಾಗಿ ನಾವಿದ್ದೇವೆ" ಅಂತ ಹೇಳುವುದು ಮಹಾರಕ್ಷಕರ ಕೆಲಸ. ಸೇವೆ ಮಾಡಿಬಂದ ಸೈನಿಕರಿಗೆ ಗೌರವ ಅರ್ಪಿಸುವುದು ಕೂಡ. ವಿತ್ತಶಕ್ತಿ ಮತ್ತು ಸದ್ಭಾವನಾ ಸಮಿತಿಗಳು ಯುವಜನತೆಯಲ್ಲಿ entrepreneurship ಅನ್ನು ಬೆಳೆಸುವ ಮುಖ್ಯ ಗುರಿ ಹೊಂದಿದ್ದವು. ಯಾರದೋ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ತನ್ನ ಕಾಲಮೇಲೆ ತಾನು ನಿಲ್ಲುವಂತೆ ಯುವಶಕ್ತಿಯನ್ನು ರೂಪುಗೊಳಿಸುವಿಕೆಗೆ ಈ ತಂಡ ಮೀಸಲು. ಹೊಸ ಅನ್ವೇಷಣೆಗಳನ್ನ ಪ್ರೋತ್ಸಾಹಿಸಿ, ಅದಕ್ಕೆ ಬೇಕಾದ ಪೇಟೆಂಟ್, ಕಾಪಿರೈಟ್ ಗಳಿಗೆ ಸಹಕರಿಸಿ, ಕಿಂಗ್ ಮೇಕರ್ ಆಗಿ ಅದು ಕೆಲಸ ಮಾಡಬೇಕು. ಇನ್ನು ಹೆಸರೇ ಹೇಳುವಂತೆ ಡಿಜಿಟಲ್ ಸನ್ಸ್ಕಾರ್ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಸಮಾಜದ ಅಭಿಪ್ರಾಯವನ್ನು ರೂಪಿಸಲು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯತ್ನಿಸುವ ಜವಾಬ್ದಾರಿ. ಆ ಮೂಲಕ ರಾಷ್ಟ್ರೀಯತೆಯನ್ನು ಪಸರಿಸುವ ಪ್ರಯತ್ನ.
ಇವೆಲ್ಲ ಆ ನಾಲ್ಕು ಶಾಖೆಗಳ ಸ್ಥೂಲ ಪರಿಚಯ. ನಮಗೆ ಯುವಾ ಬ್ರಿಗೇಡ್ ಇಷ್ಟವಾಗೋದು ಆ ಕಾರಣಕ್ಕೆ! ಗುರಿಯನ್ನು ನಿರ್ಧರಿಸಲಾರದವ, ಅದನ್ನು ಸಾಧಿಸಲಾರ ಕೂಡ.

ಚಕ್ರವರ್ತಿ ಅಣ್ಣನವರ ನೇತೃತ್ವ ಅಂದಮೇಲೆ, ಆ ಸಂಘಟನೆ ಜನರಲ್ಲಿ consciousness ಮೂಡಿಸುವಲ್ಲಿ ಕೊಡುಗೆ ನೀಡಲೇಬೇಕು.  ಅವರು ಪತ್ರಿಕೆಗಳಿಗೆ ಬರೆಯುವ ಅಂಕಣಗಳಿಂದ ಹಿಡಿದು ಜಾಗೊ ಭಾರತ್ ನ ವರೆಗೆ ಎಲ್ಲವೂ ಜನಜಾಗೃತಿಯನ್ನೇ ಜೀವಾಳ ಮಾಡಿಕೊಂಡಿರುವ ಚಟುವಟಿಕೆಗಳು. ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪಿಸುವ ಸಲುವಾಗಿ ಯುವಾ ಬ್ರಿಗೇಡ್ ಹಮ್ಮಿಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಆ ತಂಡ ಪಟ್ಟ ಶ್ರಮ ಎರಡೂ ಅಮೋಘವಾದವು. ಸರ್ಕಾರ ಉದ್ದೇಶಪೂರ್ವಕವಾಗಿ ಬೇಡವೆಂದು 'ಮರೆತಿದ್ದ' ಕಾರ್ಗಿಲ್ ವಿಜಯ ದಿವಸದಿಂದ ಹಿಡಿದು ಸ್ವಂತದ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ಮಣ್ಣಿಗಾಗಿ ರಕ್ತ ಕೊಟ್ಟ ಹುತಾತ್ಮರ ದಿನಾಚರಣೆ-ಜಯಂತಿಗಳವರೆಗೂ ವಿಜೃಂಭಿಸಿದ್ದು ದೇಶಭಕ್ತಿಯೇ! ಯುವದಿನ ಎಂದು ಆಚರಿಸಲ್ಪಡುವ ವಿವೇಕಾನಂದರ ಜಯಂತಿಯಂದು, ಪ್ರತೀ ಊರಿನಲ್ಲೂ ಯುವಜನರನ್ನು ಒಗ್ಗೂಡಿಸಿ, ಅವರಲ್ಲಿ ಸ್ಫೂರ್ತಿ ತುಂಬಿ, ಅವರವರ ಊರುಗಳಲ್ಲಿ ವಿವೇಕಾನಂದರ ಕುರಿತು ಉಪನ್ಯಾಸ ನೀಡುವಂತೆ ಮಾಡಿತ್ತು ಯುವಾ ಬ್ರಿಗೇಡ್. " ಈ ಜಗತ್ತಿನಲ್ಲಿ, ಕೊನೆಯ ಮಾನವ ತಾನೂ ದೇವರಲ್ಲೊಂದು ಅಂತ ತಿಳಿಯುವವರೆಗೆ, ನಾನು ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುತ್ತೇನೆ" ಎಂದು ಹೇಳಿದ್ದ ಯೋಗಿವರ್ಯನ ಮಾತು ಅಷ್ಟರ ಮಟ್ಟಿಗೆ ಸಾರ್ಥಕ್ಯ ಕಂಡಿತ್ತು!
    "ಎಲ್ಲರೂ ಹೇಳುತ್ತಾರೆ, ಆದರೆ ನಾವು ಮಾಡಿ ತೋರಿಸುತ್ತೇವೆ" ಎಂಬುದು ಯುವ ಬ್ರಿಗೇಡ್ ನ ಗುಣಲಕ್ಷಣಗಳಲ್ಲಿ ಒಂದು. ಕೆರೆಬತ್ತಿಸಿ ಸೈಟು ಮಾಡುವ, ನುಂಗಿ ನೀರ್ಕುಡಿದು ನಂತರ ಅಂತರ್ಜಲಕ್ಕೇ ಕನ್ನ ಹಾಕುವ ಕೊಳವೆಬಾವಿಗಳನ್ನು ತೋಡುವ ಈ ಸಮಾಜದ ಮಧ್ಯೆ ಯುವಾ ಬ್ರಿಗೇಡ್ ಕೊಂಚ ಪ್ರೌಢವಾಗಿ ವರ್ತಿಸಿತು.  ಬೇಸಿಗೆಯಲ್ಲಿ ಹೂಳು ತೆಗೆಯದೇ, ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ, ನಂತರ ಬೇಸಿಗೆಯಲ್ಲಿ ನೀರಿಲ್ಲ ಅನ್ನುವ ಗ್ರಾಮ ಪಂಚಾಯಿತಿ, ಮುನ್ಸಿಪಾಲಿಟಿಗಳು ಮಾಡಲಾಗದ ಕನಸನ್ನು ಯುವಾ ಬ್ರಿಗೇಡ್ ನ ಯುವಶಕ್ತಿ ಶುರುಹಚ್ಚಿಕೊಂಡಿತು! #ಜಲಜೀವನ ಎಂಬ ಅಭಿಯಾನ ಶುರುಮಾಡಿ, ಅದೇ ಊರಿನ ಹುಡುಗರ ಒಗ್ಗೂಡಿಸಿ ಊರಿನ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಶುರುವಿಟ್ಟುಕೊಂಡಿತು. ಹೋಬಳಿ,ತಾಲೂಕು, ಜಿಲ್ಲೆ ಎಂಬ ಭೇದವಿಲ್ಲದೆ , ಅಭಿಯಾನ ವೇಗ ಕಂಡುಕೊಂಡಿತು. ಯುವಾ ಬ್ರಿಗೇಡ್ ನ ಪ್ರೋತ್ಸಾಹ ಎಷ್ಟಿತ್ತು ಅಂದರೆ, ಯಾವ ಯುವಕರು ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದರೋ, ಅವರು ನಾ ಮುಂದು ತಾ ಮುಂದು ಅಂತ ಬಂದು ಊರ ಕೆರೆಯಲ್ಲಿ ಮಣ್ಣು ಹೊತ್ತರು. ಸರ್ಕಾರಕ್ಕಿಂತ ಚೆನ್ನಾಗಿ ಸಾವರ್ಜನಿಕರು ಕೆಲಸ ಮಾಡಬಲ್ಲರು ಎಂದು ತೋರಿಸಿಕೊಟ್ಟಿತು ಯುವಾ ಬ್ರಿಗೇಡ್. Don't underestimate the power of the common man ಅನ್ನುವ ರೀಲ್ ಡೈಲಾಗ್ ಅನ್ನು, ರಿಯಲ್ ಆಗೂ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿದರ್ಶನದ ಸಮೇತ ತೋರಿಸಿತು. ಯುವಾ ಬ್ರಿಗೇಡ್ ಸ್ವಚ್ಛಮಾಡುವ ಮುನ್ನ "ಇದೂ ಒಂದು ಕಲ್ಯಾಣಿನಾ?" ಅಂತ ಕೇಳಬಹುದಾಗಿದ್ದ ಕಲ್ಯಾಣಿಗಳಲೂ ಈಗ ನೀರಿನ ಪಸೆಯೊಡೆದಿದೆ. ಜನಗಳ ಕಣ್ಣಲ್ಲಿ ಖುಷಿ ಜಿನುಗಿದೆ. ಯುವಾ ಬ್ರಿಗೇಡ್ ನ ಕೆಲಸ ಸ್ವತಃ ಮೋದಿಯವರನ್ನೂ ಮೋಡಿ ಮಾಡಿದೆ.
ಇದೇ ಸಾಲಿಗೆ ಸೇರುವ ಕೆಲಸಗಳಲ್ಲಿ ಸಸಿ ನೆಡುವ ಯೋಜನೆ ಕೂಡ ಒಂದು.
       ನರೇಂದ್ರಮೋದಿಯವರ ಕನಸಿಗೆ ಹೆಗಲುಕೊಡುವುದು ಅಂದರೆ ಬರಿ ಕಾಂಗ್ರೆಸ್ ಅನ್ನು ನಿಂದಿಸುತ್ತಾ ಕೂರುವುದಲ್ಲ. ಫೇಸ್ ಬುಕ್ ನಲ್ಲಿ ತಾಸಿಗೊಂದು ಸ್ಟೇಟಸ್ ಅಪ್ಲೋಡ್ ಮಾಡುವುದೂ ಅಲ್ಲ ಎಂಬುದನ್ನು ಯುವಾ ಬ್ರಿಗೇಡ್ ಸಮರ್ಥವಾಗಿ ತೋರಿಸಿಕೊಟ್ಟಿದೆ. ನಮಗೆ ಯುವಾ ಬ್ರಿಗೇಡ್ ಆಪ್ತವಾಗೋದೇ ಅದರ ಸಮಾಜಮುಖೀ ಧೋರಣೆಗೆ, ಅದರ intense ಚಟುವಟಿಕೆಗೆ, ಅದರ ಅರ್ಪಿಸಿಕೊಳ್ಳುವಿಕೆಗೆ, ಅದರ ನಿಸ್ವಾರ್ಥ ನಿಲುವಿಗೆ. ಇವೆಲ್ಲಾ ಕಾರಣಗಳಿಗಾಗಿಯೇ,ನಮೋ ಬ್ರಿಗೇಡ್ ಕೂಡ ಸೆಳೆಯಲಾಗದ ನನ್ನನ್ನು, ಯುವಾ ಬ್ರಿಗೇಡ್ ಸೆಳೆದಿದೆ! You don't need power to make it happen, what you need is just the 'Will' ಎಂಬುದನ್ನ ರುಜುಮಾಡಿ ನಮ್ಮ ಕಣ್ಣ ಮುಂದಿಟ್ಟಿದೆ.

         ನಾನೇನನ್ನು ಕೊನೆಯಲ್ಲಿ ಹೇಳಬೆಕಿತ್ತೋ, ಅದನ್ನ ಮೊದಲೇ ಹೇಳಿಬಿಟ್ಟಿದ್ದೇನೆ. ಯುವಾ ಬ್ರಿಗೇಡ್ ಒಂದು ರಾಜಕೀಯ ಸಂಘಟನೆ ಅಲ್ಲ. ಸರ್ಕಾರೇತರ ಅಂತ ಬಾಯಲ್ಲಿ ಹೇಳಿಕೊಂಡು, ಬರೀ ರಾಜಕಾರವನ್ನೇ ಮಾಡುವಂತಹ ಕೆಲವು ಎನ್ ಜಿ ಒ ಗಳ ಜಾತಿಯೂ ಅಲ್ಲ. ಭಾರತ ವಿಶ್ವಗುರು ಆಗಬೇಕಾದರೆ, ಅದರ ಯುವಪುತ್ರರು ಎದ್ದು ನಿಲ್ಲಬೇಕು, ಅವರಿಗೆಲ್ಲ ಒಂದು ಅದಮ್ಯ ಸ್ಫೂರ್ತಿ ಬೇಕು ಎಂಬ ಕಾರಣಕ್ಕೆ ಸ್ಥಾಪಿತವಾದದ್ದು. ಪ್ರತಿಯೊಬ್ಬನೂ ದೇಶದ ಭಾರವೆಲ್ಲ ತನ್ನ ಮೇಲೆ ಬಿದ್ದಿದೆ ಎಂಬ ಭಾವನೆಯಿಂದ ಕೆಲಸ ಮಾಡಿದರೆ, ದೇಶ ವಿಶ್ವಗುರುವಾಗುತ್ತೆ ಎಂದು ನುಡಿದಿದ್ದರು ವಿವೇಕಾನಂದರು. ಪ್ರತಿಯೊಬ್ಬನಲ್ಲೂ ಅಂಥ ಭಾವನೆ ಮೂಡಿಸಬೇಕು ಅಂತ ಶ್ರಮಿಸುತ್ತಿರುವ ಸಂಸ್ಥೆ. "ಸೇವೆ ಮುಗಿಸಿದ ಯೋಧನೊಬ್ಬನನ್ನು ಅವನ ಊರಿನ ಜನರ ಮುಂದೆ ಸನ್ಮಾನಿಸಿದರೆ, ಅವನಿಗೆ ಎಷ್ಟು ಹೆಮ್ಮೆ ಆಗುತ್ತೆ ಅಲ್ವಾ?" ಅಂತ ಚಕ್ರವರ್ತಿ ಅವರು ಯುವಾ ಬ್ರಿಗೇಡ್ ನ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು. ಅದೇ ರೀತಿ, ರಾಷ್ಟ್ರಕ್ಕಾಗಿ ನಾವು ಅರ್ಪಿತ ಎಂದು ಹಗಲಿರುಳು ದುಡಿಯುತ್ತಿರುವ ಗುಂಪೊಂದಕ್ಕೆ, "ನಿಮ್ಮ ಅರ್ಪಣೆಗೆ, ನಮ್ಮ ಹೃತ್ಪೂರ್ವಕ ಧನ್ಯವಾದ" ಅಂತ ಹೇಳಿದ್ರೆಅವರಿಗೆ ಎಷ್ಟು ಹೆಮ್ಮೆಯಾಗುತ್ತೆ ಅಲ್ವಾ? ಅದಕ್ಕೇ, ಈ ಲೇಖನ!
                                      ~ಸಂಕೇತ್ ಡಿ ಹೆಗಡೆ
                                                        Twitter:@SankethHutgar
Facebook: Facebook.com/SankethDHegde