Powered By Blogger

Thursday, January 19, 2017

ಚಾರಿತ್ರ್ಯದ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ (ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ)

     "ಮಾನವನಲ್ಲಿ ಮೊದಲೇ ಇರುವ ಪರಿಪೂರ್ಣತೆಯನ್ನ ಹೊರೆತೆಗೆದು, ಅದಕ್ಕೊಂದು ರೂಪಕೊಡುವ ಪ್ರಕ್ರಿಯೆಯೇ ಶಿಕ್ಷಣ" ಅನ್ನುವುದು ವಿವೇಕಾನಂದರ ಅತ್ಯಂತ ಜನಪ್ರಿಯ ಹೇಳಿಕೆ. ಪ್ರತೀ ಮಗುವೂ ಹುಟ್ಟುವಾಗ ಹತ್ತಿಯ ಮುದ್ದೆಯಂತೆ. ಹತ್ತಿಯ ಮುದ್ದೆಯನ್ನು ನಾವು ಶುದ್ಧ ನೀರಿನಲ್ಲಿ ಹಾಕಿದರೆ, ಅದು ಶುದ್ಧ ನೀರನ್ನು ಹೀರಿಕೊಳ್ಳುತ್ತದೆ. ಕೊಳಕಿನಲ್ಲಿ ಹಾಕಿದರೆ ಕೊಳಕನ್ನು ಅಂಟಿಸಿಕೊಳ್ಳುತ್ತದೆ. ಹಾಗೆಯೇ ಮಗುವಿನಲ್ಲಿ ನಾವು ತುಂಬುವ ವಿಚಾರಗಳು ಹಾಗೂ ಕೊಡುವ ಸಂಸ್ಕೃತಿ ಒಳ್ಳೆಯದೋ ಕೆಟ್ಟದ್ದೋ ಎಂಬುದರ ಮೇಲೆ, ಮಗುವಿನ ವ್ಯಕ್ತಿತ್ವ ರೂಪುತಳೆಯುತ್ತದೆ. ದೇಶಕ್ಕೆ ಜೀವ ಅಂತ ಇರುವುದು ಭಾವನಾತ್ಮಕವಾಗಿ ಮಾತ್ರ, ನಿಜವಾಗಿಯೂ ಜೀವವಿರುವುದು ದೇಶದಲ್ಲಿರುವ ಜನರಿಗೆ. ಆದ್ದರಿಂದ ನಾವು ದೇಶಕ್ಕೆ ಏನು ಟ್ರೀಟ್ ಮೆಂಟ್ ಕೊಡಬೇಕು ಅಂದುಕೊಳ್ಳುತ್ತೇವೋ, ಅದನ್ನು ಕೊಡಬೇಕಿರುವುದು ಅಲ್ಲಿಯ ಜನಕ್ಕೆ. ಬೆಳೆಯುವ ಸಿರಿ ಮೊಳಕೆಯಲ್ಲಾದ್ದರಿಂದ, ನಾವು ಚಾರಿತ್ರ್ಯವನ್ನು ನಿರ್ಮಾಣ ಮಾಡಬೇಕಿರುವುದು ಮಕ್ಕಳದ್ದು. ವಿವೇಕಾನಂದರ ದೃಷ್ಟಿಯಲ್ಲಿ, "ಚಾರಿತ್ರ್ಯದ ನಿರ್ಮಾಣದ ಮೂಲಕ ದೇಶದ ನಿರ್ಮಾಣ" ಹೆಗೆ? ಏನು? ಎತ್ತ? ಅಂತೊಮ್ಮೆ ಕಣ್ಣಾಡಿಸೋಣ.

     "ಚಾರಿತ್ರ್ಯ" ಎಂಬುದು ಒಂದು ಗುಣವಲ್ಲ. ಅದು ಗುಣ ಸಮೂಹ. ವ್ಯಕ್ತಿಯೊಬ್ಬನ ಸುಗುಣ-ದುರ್ಗುಣಗಳೆರಡೂ ಸೇರಿ, ಆತನ ಒಟ್ಟೂ ಗುಣ ಏನು? ಎಂಬ ಪ್ರಶ್ನೆಗೆ ಉತ್ತರವೇ, ಆತನ "ಚಾರಿತ್ರ್ಯ"! ಚಾರಿತ್ರ್ಯ ಎಂಬುದು ಸಾಧಿಸಲ್ಪಡುವುದು ಅಥವಾ ಬಾಧಿಸಲ್ಪಡುವುದು, ಒಂದೆರಡು ಸಂಗತಿಗಳಿಂದಲ್ಲ. ಮಗುವೊಂದು ಬೆಳೆಯುತ್ತಿರುವ ಪರಿಸರ, ಮಾತನಾಡುತ್ತಿರುವ ಭಾಷೆ, ವಾಸವಿರುವ ಸ್ಥಳ ಹಾಗೂ ಭೌಗೋಳಿಕ ಪ್ರದೇಶ, ಅದರ ತಂದೆ ತಾಯಿಯರ ಸಂಸ್ಕೃತಿ, ರೀತಿ ರಿವಾಜು, ಅದು ಹೋಗುವ ಶಾಲೆ, ಅಲ್ಲಿಯ ಮೇಷ್ಟ್ರು, ಸಹಪಾಠಿಗಳು ಹೀಗೇ.... ಇವೆಲ್ಲವೂ ಸೇರಿ ಮಗುವೊಂದರ ಚಾರಿತ್ರ್ಯವನ್ನು ನಿರ್ಮಿಸುತ್ತಿರುತ್ತವೆ. "ಚಾರಿತ್ರ್ಯ ನಿರ್ಮಾಣದ ಮೂಲಕವೇ ರಾಷ್ಟ್ರ ನಿರ್ಮಾಣ ಸಾಧ್ಯ" ಅಂತ ಇಲ್ಲೇ ರುಜುವಾಗುವುದು ಹೇಗೆಂದರೆ, ಮಗುವೊಂದು ಬೆಳೆಯುತ್ತಿರುವ ರಾಷ್ಟ್ರದಲ್ಲಿನ ಪರಿಸರವೇ ಮಗುವಿನೊಳಗಿನ ಚಾರಿತ್ರ್ಯವನ್ನು ಪೋಷಿಸುತ್ತಿರುವುದು! ಹಾಗಾಗಿ "ಅದು ಚೆನ್ನಾಗಿದ್ದರೆ ಅದು ಚೆಂದ ಮತ್ತು ಇದು ಚೆನ್ನಾಗಿದ್ದರೆ ಅದು ಚೆನ್ನ" ಅನ್ನುವಂತ ಅವಿನಾಭಾವ ಸಂಬಂಧ ಇವೆರಡರದ್ದು!

"ಒಂದು ದೇಶ ಉನ್ನತಿ ಹಾಗೂ ಅವನತಿ ಇವೆರಡನ್ನೂ ಸಾಧಿಸುವುದು ಅಲ್ಲಿಯ ತಾಯಂದಿರ ಕೈಯಲ್ಲಿರುತ್ತದೆ. ದೇಶ ಹಿರಿಯಣ್ಣನಾದರೂ ಅವರೇ ಕಾರಣ, ಅಧೋಗತಿಗಿಳಿದರೂ ಅವರೇ ಕಾರಣ" ಅನ್ನುವುದು ಸ್ವಾಮೀ ವಿವೇಕಾನಂದರ ನುಡಿ. ಮಕ್ಕಳ ಚಾರಿತ್ರ್ಯವನ್ನು ನಿರ್ಮಿಸುವುದು ಮುಖ್ಯವಾಗಿ ತಾಯಂದಿರು. ಅವರು ತಮ್ಮ ಮಗುವನ್ನ ಸಚ್ಚಾರಿತ್ರ್ಯವಂತರನ್ನಾಗಿ ಮಾಡುತ್ತಾರೋ ಅಥವಾ ಪೋಕರಿಗಳನ್ನಾಗಿ ಮಾಡುತ್ತಾರೋ ಅನ್ನುವುದರ ಮೇಲೆ ದೇಶ ಅಭಿವೃದ್ಧಿ ಹೊಂದುತ್ತದೆ ಅಥವಾ ಅಧಃಪತನಕ್ಕಿಳಿಯುತ್ತದೆ ಎಂಬುದು ಅದರ ಸಾರಾಂಶ.
ಶಿಕ್ಷಣ ಅನ್ನುವುದು ಮಗುವೊಂದರ ಚಾರಿತ್ರ್ಯವನ್ನು ರೂಪಿಸದಿದ್ದರೆ, ಅದು ಎಷ್ತೇ ಜ್ಞಾನವನ್ನು ಮಗುವಿನೊಳಗೆ ತುಂಬಿದ್ದರೂ, ಪುಡಿಗಾಸಿನ ಪ್ರಯೋಜನವೂ ಇಲ್ಲ. "ಶಿಕ್ಷಣ ವೆಂದರೆ ಒಂದಷ್ತು ಮಾಹಿತಿಗಳನ್ನು ತಲೆ ಒಳಗೆ ಬಿಟ್ಟುಕೊಂಡು, ಆಮೇಲೆ ಅವುಗಳೇ ಒಳಗೆ ಕಿತ್ತಾಡಿಕೊಳ್ಳುವಂತೆ ಮಾಡುವ ಗೊಂದಲಕಾರಿ ಪ್ರಕ್ರಿಯೆ ಅಲ್ಲ. ನೀನು ಐದೇ ಐದು ಸುಗುಣಗಳ್ಳನ್ನು ನಿನ್ನ ಚಾರಿತ್ರ್ಯದಲ್ಲಿ ಅಳವಡಿಸಿಕೊಂಡಿದ್ದರೂ, ಸಚ್ಚಾರಿತ್ರ್ಯವಿಲ್ಲದೇ ಕೇವಲ ಉರು ಹೊಡೆಯುವ, ಸಂಪೂರ್ಣ ಗ್ರಂಥಾಲಯವನ್ನೇ ಗಟ್ಟುಹೊಡೆದು ಕುಳಿತಿರುವ ಮನುಷ್ಯನಿಗಿಂತ ನೀನು ಹೆಚ್ಚು ವಿದ್ಯಾವಂತ" ಅನ್ನುವ ಛಾತಿ ವಿವೇಕಾನಂದರದ್ದು! ಜಗತ್ತನ್ನು ತಲ್ಲಣಗೊಳಿಸಿದ ಉಗ್ರಗಾಮಿಗಳಲ್ಲಿ ಅನೇಕರು ಯೂನಿವರ್ಸಿಟಿ ಟಾಪರ್ಗಳು, ಆದರೆ ಅವರೆಲ್ಲ ಮಡಿದ್ದು ಅನಾಹುತವನ್ನೇ ಹೊರತು, ಉಪಕಾರವ್ನ್ನಲ್ಲ. ಅದ್ದರಿಂದ ನಿರ್ಮಿಸಬೇಕಿರುವುದು ಚಾರಿತ್ರ್ಯವನ್ನೇ ಹೊರತು, ಕೇವಲ ಮಾಹಿತಿಗಳ ಗಟ್ಟು ಹೊಡೆದು ಪಡೆದ ಡಿಗ್ರಿ ಹೋಲ್ಡರ್ಗಳನ್ನಲ್ಲ. "ಉಕ್ಕಿನ ನರಗಳುಳ್ಳ, ಕಬ್ಬಿಣದ ಮಾಂಸಖಂಡಗಳನ್ನುಳ್ಳ, ತೀಕ್ಷ್ಣ ಬುದ್ಧಿಮತ್ತೆಯ ನೂರೇ ನೂರು ಯುವಕರನ್ನು ಕೊಡಿ. ಇಡೀ ಜಗತ್ತಿನಲ್ಲೇ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆ" ಅಂತ ಹೆಳಿದ್ದ ವೀರಸಂನ್ಯಾಸಿ, ವಿವೇಕಾನಂದ. ವಿವೇಕಾನಂದರ ಪ್ರಕಾರ ಮಕ್ಕಳಲ್ಲಿ ಅಂತ ಚಾರಿತ್ರ್ಯವನ್ನು ಬೆಳೆಸಬೇಕು! ಅಳುವ, ನೈಗೊರೆಯುವ, ಬಲಹೀನದ ಚಾರಿತ್ರ್ಯವನ್ನಲ್ಲ! ಚಾರಿತ್ಯವನ್ನು ನಿರ್ಮಿಸುವಾಗ ಸಂವೇದನೆಗಳನ್ನು ಸೂಕ್ಷ್ಮವಾಗಿಯೂ, ಮನಸ್ಥಿತಿಯನ್ನು ಬಂಡೆಯಂಥಹ ಗಟ್ಟಿಯದ್ದಾಗಿಯೂ ಬೆಳೆಸಬೇಕು.

ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾ ಹೋದಾಗ, ಮನುಷ್ಯ ಒಳ್ಳೆಯದನ್ನೇ ಮಾಡುತ್ತಾ ಹೋಗುತ್ತಾನೆ. ಕೆಟ್ಟದ್ದನ್ನು ಮಾಡಲು ಶುರುಮಾಡಿದರೆ, ಅನಾಹುತಗಳು ಒಂದೊಂದಾಗಿ ಜರುಗುತ್ತವೆ ಅನ್ನುವ ಕಲ್ಪನೆ ಚಾರಿತ್ರ್ಯದಲ್ಲಿ ಪಡಿಯಚ್ಚು ಮೂಡಿಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. "ಫೂಟ್ ಬಾಲ್ ಆಡುವುದು ಭಗವದ್ಗೀತೆ ಓದುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಭಗವಂತನ ಬಳಿ ಕರೆದೊಯ್ಯುತ್ತದೆ. ಇವು ಕಠಿಣ ಪದಗಳು. ಆದರೆ ನಾನು ಹೇಳಲೇಬೇಕಾಗಿದೆ. ಏಕೆಂದರೆ ನಾನು ನಿಮ್ಮನ್ನೆಲ್ಲ ಅದಮ್ಯವಾಗಿ ಪ್ರೀತಿಸುತ್ತೇನೆ. ಗಟ್ಟಿ ಎದೆಯ, ಬಲಾಢ್ಯ ದೇಹದ ಯುವಕರಾಗಿ ನೀವು ಭಗವದ್ಗೀತೆಯ ಸಾಲುಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುವಿರಿ" ಅಂತೊಮ್ಮೆ ಹೇಳಿದ್ದರು ವಿವೇಕರು. ದೇಹ ಮತ್ತು ಮನಸ್ಸು ಒಂದರ ಮೆಲೊಂದು ಪರಿಣಾಮಗಳನ್ನು ಬೀರುತ್ತವೆ. ಗಟ್ಟಿ ಚಾರಿತ್ರ್ಯ ರೂಪುಗೊಳ್ಳುವ ಮೊದಲು ಗಟ್ಟಿ ದೇಹ ರೂಪುಗೊಳ್ಳಬೇಕಾಗುತ್ತೆ. ಆಗ ಮಾತ್ರ ಗಟ್ಟಿ ದೇಶದ ನಿರ್ಮಾಣ ಕೂಡ ಸಾಧ್ಯ!

ಜ್ಞಾನ ಮನುಷ್ಯನಿಗೆ ಭೂಷಣ. ಆದರೆ ವಿನಯ ಜ್ಞಾನಕ್ಕೇ ಭೂಷಣ. ಈ ವಿನಯವನ್ನು ರೊಪಿಸದ, ಚಾರಿತ್ರ್ಯವನ್ನು ರೂಪಿಸದ ವಿದ್ಯಾಭ್ಯಾಸ ನಿಷ್ಪ್ರಯೋಜಕ. ಅದರಿಂದ ಜೊಳ್ಳುಗಳನ್ನು ನಿರ್ಮಿಸಬಹುದೇ ವಿನಃ, ರಾಷ್ಟ್ರ ನಿರ್ಮಿಸುವ ಚೈತನ್ಯಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ವಿವೇಕಾನಂದರು ಚಾರಿತ್ರ್ಯ ನಿರ್ಮಾಣದ ಒಂದು ಭಾಗವಾಗಿ, ಯುವಕರಿಗೆ "ತಮ್ಮನ್ನು ತಾವೇ ಬಲವಾಗಿ ನಂಬುವುದನ್ನು" ಹೇಳಿಕೊಡುವುದನ್ನು ಬಲವಾಗಿ ಪ್ರತಿಪಾದಿಸಿದ್ದರು. ತನ್ನನ್ನೇ ತಾನು ನಂಬದವ, ರಾಷ್ಟ್ರವನ್ನು ನಿರ್ಮಿಸಿಯಾನೆ? "ನಿಮ್ಮ ಮೇಲೆ ನಿಮಗೊಂದು ಅದಮ್ಯ ನಂಬಿಕೆ ಇರಲಿ. ನರೇಂದ್ರ ಚಿಕ್ಕವನಿರುವಾಗಿನಿಂದಲೂ ತನ್ನ ಮೇಲೆ ಇಟ್ಟುಕೊಂಡಿರುವ ನಂಬಿಕೆ ಇದೆಯಲ್ಲ? ಅದೇ ಇವತ್ತು ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿರುವುದು. ನೀವೂ ನಿಮ್ಮ ಮೇಲೆ ಅಂಥದ್ದೊಂದು ಬಲವಾದ ನಂಬಿಕೆಯನ್ನು ಇಟ್ಟುಕೊಳ್ಳಿ. ಮಹಾತ್ಮರು ತಾವು ಮಹಾತ್ಮರಾಗಬೇಕಾಗಿರುವವರು ಎಂಬ ಪ್ರಜ್ಞೆ ಹುಟ್ಟಿದಾಗಿನಿಂದ ಬೆಳೆಸಿಕೊಂಡಿರುತ್ತಾರೆ. ಆದ್ದರಿಂದ ಮುಂದೆ ನಿಜವಾಗಿಯೂ ಮಹಾತ್ಮರಾಗುತ್ತಾರೆ" ಅಂತ ಪ್ರತಿಪಾದಿಸಿದ್ದರು ವಿವೇಕಾನಂದರು. ಅಂಥದ್ದೊಂದು ಚಾರಿತ್ರ್ಯ ನಮ್ಮದಾಗಬೇಕು.

ಆವತ್ತು ವಿವೇಕರು ಇದ್ದ ಕಾಲದಲ್ಲಿ ಭಾರತ ದಾಸ್ಯ, ಬಡತನ, ರೋಗ ರುಜಿನಗಳಿಂದ ಬಳಲಿ ನಿತ್ರಾಣವಾಗಿತ್ತು. ಬಹುಪಾಲು ಜನಸಮೂಹ ನಂಬಿಕೆ ಕಳೆದುಕೊಂಡು, ಬೇಸತ್ತುಹೋಗಿದ್ದರು. ಅವರನ್ನೆಲ್ಲ ಬಡಿದೆಬ್ಬಿಸುವ ಕೆಲಸವನ್ನ ವಿವೇಕರು ಮಾಡಿದರು. ಇವತ್ತಿಗೆ ಭಾರತಕ್ಕೆ ಆ ತರಹದ ಸಂಕಟಗಳಿಲ್ಲದಿದ್ದರೂ, ಪರಿಸ್ಥಿತಿ ಭಿನ್ನವಾಗಿ ಏನೂ ಇಲ್ಲ. ಮತ್ತೊಂದಿಷ್ಟು ಸಂಕೋಲೆಗಳು ದೇಶವನ್ನ ಬಂಧಿಸಿಟ್ಟಿವೆ. ವಿವೇಕರ ಚಿಂತನೆಗಳ ನೆಲೆಗಟ್ಟಿನಲ್ಲಿ ಚಾರಿತ್ರ್ಯವನ್ನು ನಿರ್ಮಿಸಿಕೊಂಡು, ಆ ಮೂಲಕ ದೇಶವನ್ನು ಮತ್ತೆ ಹಳೆಯ ವೈಭವಕ್ಕೆ ಕರೆದೊಯ್ಯಬೇಕಿರುವುದು ನಮ್ಮೆಲ್ಲರ ಕರ್ತವ್ಯ! ಬಡತನ, ನಿರುದ್ಯೋಗ ಮುಂತಾದ ಆಂತರಿಕ ಸಮಸ್ಯೆಗಳು ಒಂದೆಡೆಯಾದರೆ, ಯುದ್ಧ, ಭಯೋತ್ಪಾದನೆಯಂಥ ಪ್ರಚೋದಿತ ಸಂಕಟಗಳು. ಭ್ರಷ್ಟಾಚಾರದಂತಹ ಕ್ಯಾನ್ಸರ್ ಇನ್ನೊಂದೆಡೆ. ಇವೆಲ್ಲವನ್ನೂ ಮೆಟ್ಟಿನಿಂತು ಘರ್ಜಿಸುವ ತಾಕತ್ತುಳ್ಳ ಯುವಸಮೂಹವೊಂದು ತಯಾರಾಗಬೇಕು. ತಯಾರಾಗಬೇಕು ಅಂದರೆ, ಅಂಥ ಚಾರಿತ್ರ್ಯವನ್ನು ನಾವು ಹೊಸಪೀಳಿಗೆಯಲ್ಲಿ ಬೆಳೆಸಬೇಕು. "ನಾನು ನನ್ನ ದೇಹವನ್ನು ಒಂದು ಉಪಯೋಗಿಸಿದ ಬಟ್ಟೆಯಂತೆ ತೆಗೆದಿಟ್ಟು ಹೋಗಬಹುದು, ಆದರೆ ಆತ್ಮವಾಗಿ ಜಗತ್ತಿನ ಪ್ರತೀ ಜೀವಿಯೂ ತಾನು ಪರಮಾತ್ಮನಲ್ಲಿ ಒಂದು ಎಂದು ಅರಿಯುವವರಿಗೂ ಕೆಲಸ ಮಾಡುತ್ತಿರುತ್ತೇನೆ" ಅಂತ ಹೇಳಿದ್ದ ವಿವೇಕರು ನಮಗೆಲ್ಲ ಸ್ಫೂರ್ತಿಯಾಗಿ ಬೆನ್ನಿಗೆ ನಿಂತೇ ನಿಂತಿರುತ್ತಾರೆ. ಅದನ್ನರಿತು ಚಾರಿತ್ರ್ಯ ನಿರ್ಮಿಸೊಂಡರೆ, ಶೀಘ್ರದಲ್ಲಿ ವಿವೇಕರ ಕನಸಿನ "ವಿಶ್ವಗುರು ಭಾರತ" ವನ್ನು ನಾವು ಕಾಣಬಹುದು!

ಜೈ ಹಿಂದ್






No comments:

Post a Comment