Powered By Blogger

Saturday, December 31, 2016

ಕಾಲೇಜು ದಿನಗಳ ಮೆರವಣಿಗೆಯಿದು, ಉಘೇ ಕಿರಿಕ್ ಪಾರ್ಟಿ!

ಲಾಸ್ಟ್ ಬೆಂಚರ್ಸ್ ಹಾಗೂ ಫಸ್ಟ್ ಬೆಂಚರ್ಸ್! ಬಹುಶಃ ಇದು ಕಾಲೇಜುಗಳು ಶುರುವಾದ ದಿನದಿಂದಲೇ ಶುರುವಾದ  ಕ್ಲಾಸಿಫಿಕೇಶನ್ನು. ಉದಾಹರಿಸಲು ಅಪವಾದಗಳು  ಸಿಕ್ಕರೂ, ಸಾಮಾನ್ಯವಾಗಿ ಲಾಸ್ಟ್ ಬೆಂಚರ್ಗಳು ಅಂದರೆ ತರ್ಲೆ, ತುಂಟ, ಘಾಟಿ, ಬೇಜವಾಬ್ದಾರಿಯುತ, ಕ್ರೇಜಿ ವ್ಯಕ್ತಿತ್ವಗಳು ಅಂತ ವಾಡಿಕೆ. ಈ ಲಾಸ್ಟ್ ಬೆಂಚರ್ ಗಳ ಜೀವನವನ್ನು ವಸ್ತುವಾಗಿಟ್ಟುಕೊಂಡು, ಪ್ರೇಕ್ಷಕ ಚಿತ್ರದ ಬಹುಪಾಲು ಸಮಯ ಮೊಗದಲ್ಲೊಂದು ದೊಡ್ಡ ನಗೆಯನ್ನು ಇಟ್ಟುಕೊಂಡು ಕಳೆಯುವಂತೆ ಮಾಡಿರುವ ಚಿತ್ರ ಕಿರಿಕ್ ಪಾರ್ಟಿ.
   ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವುದು ಅವರ ಕ್ರಿಯಾಶೀಲತೆಗೆ. ಆ ಕಾರಣಕ್ಕೆ, ಈ ಚಿತ್ರ ಅವರಿಗೆ ಯಾವ ನಿರಾಸೆಯನ್ನೂ ಮೂಡಿಸುವುದಿಲ್ಲ. ಕಮರ್ಷಿಯಲ್ ದೃಷ್ಟಿಕೋನದಿಂದ ನುಸುಳಿರುವ ಕೆಲ ಫೈಟ್ಗಳು ಇವೆಯಾದರೂ, ಅವು ನೈಜತೆಯ ಟ್ರ್ಯಾಕ್ ಅನ್ನು ಬಿಟ್ಟು ದೂರವೇನು ಓಡಿಹೋಗದಿರುವುದು ಸಮಾಧಾನ. ಈ ಚಿತ್ರದ ಮತ್ತೊಂದು ಅದ್ಭುತ ಸಂಗತಿ ಅಂದರೆ, ಇಲ್ಲಿನ ನಟರು ಹಾಗು ಅವರು ಆಯ್ಕೆಯಾಗಿರುವ ವಿಧಾನ. ಇಲ್ಲಿ ರಕ್ಷಿತ್, ರಿಷಬ್ ಮತ್ತು ಇನ್ನೊಂದಿಬ್ಬರನ್ನು ಬಿಟ್ಟರೆ ನಿಮಗೆ ಹಳೆ ಮುಖಗಳ್ಯಾರು ಕಾಣುವುದಿಲ್ಲ, ಆದರೆ “ಇವ್ರನ್ನೆಲ್ಲ ಎಲ್ಲಿಂದ ಹಿಡ್ಕೊಂಡು ಬಂದ್ರಪಾ... ಆಕ್ಟಿಂಗೇ ಬರಲ್ಲ” ಅಂತ ಒಮ್ಮೆಯೂ ನಿಮಗೆ ಅನ್ನಿಸಲ್ಲ. ಅಷ್ಟು ಜಾಗರೂಕವಾಗಿ, ಅಷ್ಟು ಮುತುವರ್ಜಿ ವಹಿಸಿ ಕಿರಿಕ್ ಪಾರ್ಟಿ ಟೀಮ್ ದೊಡ್ಡ ಆಡಿಶನ್ ನಡೆಸಿ, ಹೀರೋ ಇನ್ ಗಳಿಂದ ಹಿಡಿದು ಎಲ್ಲರನ್ನೂ ಆಯ್ಕೆ ಮಾಡಿದೆ. ನನ್ನ ಪ್ರಕಾರ, ಇಂಥದ್ದೊಂದು ಕಥೆ ಮಾಡಿ ಜನರ ಮುಂದೆ ಇಟ್ಟಿದ್ದಕ್ಕಿಂತ, ಟೀಮಿನ ಈ ಸಾಹಸಕ್ಕೆ ಹೆಚ್ಚು ಚಪ್ಪಾಳೆಗಳು, ಶಿಳ್ಳೆಗಳು ಬೀಳಬೇಕು! ಇದೇ ಕಾರಣಕ್ಕೆ ಬಹಳ ನೈಸರ್ಗಿಕವಾಗಿ, ಕಿಂಚಿತ್ತೂ ಕೃತಕತೆ ಇಲ್ಲದೆ ಸಿನೆಮಾ ಮೂಡಿಬಂದಿದೆ. ಇದು ರಕ್ಷಿತ್, ರಿಷಬ್ ಮತ್ತು ತಂಡದ ಕ್ರಿಯೇಟಿವಿಟಿಗೆ ಬಹುದೊಡ್ಡ ಸಾಕ್ಷಿ.
   ಒಂದು ಕಾಮಿಡಿ ಹಾಗೂ ಮ್ಯೂಸಿಕಲ್ ಚಿತ್ರವನ್ನಾಗಿ ಮಾಡುತ್ತೇವೆ ಅಂತ ರಕ್ಷಿತ್ ಹೋದಲ್ಲೆಲ್ಲ ಹೇಳಿದ್ದುಂಟು. ಈ ಮಾತನ್ನು ಉಳಿಸಿಕೊಂಡಿದ್ದಾರೆ. ಹಾಡುಗಳೆಲ್ಲ ಬಹಳ ಕ್ಯೂಟ್ ಆಗಿ ಮೂಡಿಬಂದಿವೆ. ಹದಿಹರೆಯದ ಅಪ್ರಬುದ್ಧತೆ, ಸರಸ, ವಿರಸ, ಪ್ರೀತಿ, ಹುಚ್ಚು, ಮುಗ್ಧತೆಗಳನ್ನೆಲ್ಲ ಅತ್ಯಂತ ಸಮರ್ಥವಾಗಿ ಹಾಡುಗಳು ಸೆರೆಹಿಡಿದಿವೆ. ಅಜನೀಶ್ ಅವರ ಮ್ಯೂಸಿಕ್, ಇಂಥವುಗಳಿಗೆ ಹೇಳಿ ಮಾಡಿಸಿದ ಹಾಗೆ ಚೇತೋಹಾರಿಯಾಗಿ ಪ್ರತಿಧ್ವನಿಸಿದೆ. ಕ್ಯಾಮೆರಾ ವರ್ಕಿನಲ್ಲಿ ಕುಂದು ಕೊರತೆಗಳೆನೂ ಮೇಲ್ನೋಟಕ್ಕೆ ಕಂಡುಬಂದಿಲ್ಲ. ಕಥೆಯನ್ನ ಹೇಳುವುದರಲ್ಲಿ ಕರಮ್ ಚಾವ್ಲಾ ಕೂಡ ಮೆಚ್ಚಲೇಬೇಕಾದ ಕ್ರಿಯಾಶೀಲತೆ ತೋರಿದೆ ಎಂದು ಹೇಳಲಡ್ಡಿಯಿಲ್ಲ. ಇವೆಲ್ಲದರ ಮಧ್ಯೆ, ಸಮಾಜ ನಿಕೃಷ್ಟ ಅಂತ ನೋಡುವ ಒಂದು ಭಾಗದ ಬಗ್ಗೆ, ಅವರ ನಿಕೃಷ್ಟ ಜೀವನವನ್ನು ಮೇಲಕ್ಕೇರಿಸದೆ ಸಮಾಜ ಕೈಕಟ್ಟಿ ಕುಳಿತಿರುವುದರ ಬಗ್ಗೆಯೂ ಸಿನೆಮಾ ಗಮನಸೆಳೆಯುತ್ತದೆ.
    ಒಬ್ಬ ಅಭಿಮಾನಿಯಾಗಿ ನಾನು ರಕ್ಷಿತ್ ರಿಂದ ನಿರೀಕ್ಷಿಸುವುದು, ತಮ್ಮ ಉಚ್ಛಾರಣೆಯಲ್ಲಿ ಸ್ವಲ್ಪ ಹೆಚ್ಚು ಸ್ಪಷ್ಟತೆಯನ್ನ. ಹಿಂದಿನ ಕೆಲವು ಚಿತ್ರಗಳಲ್ಲಿ, ಕೆಲವು ಕಡೆ, ನನಗೆ ಅವರ ನಟನೆಯ ಮೆಲೆ ಅಪಸ್ವರವಿದ್ದರೂ, ಈ ಚಿತ್ರಕ್ಕೆ ಅವರು, ಅವರ ಮುಗ್ಧ ಮುಖ ಹಾಗೂ ನಟನೆ ಪರ್ಫೆಕ್ಟಾಗಿ ಹೊಂದುತ್ತದೆ. ಆರು ವರ್ಷದ ಹಿಂದೇ ಸ್ಕ್ರಿಪ್ಟ್ ಬರೆದಿಟ್ಟರೂ, ಪ್ರೇಮಮ್ ನೋಡಿದ ನಂತರ ಇದನ್ನು ಮಾಡಲು ಹೆಚ್ಚು ಸ್ಫೂರ್ತಿ ಬಂತು ಅಂತ ಸ್ವತಃ ರಕ್ಷಿತ್ ಹೇಳಿದ್ದಾರೆ. ನಾವೂ ಮೊದಲೇ ಪ್ರೇಮಂ ನೋಡಿದ್ದರಿಂದ, ಕೊಂಚ ಅದರ ಛಾಯೆ ಬಂದಂತಾಗುವುದು ಸುಳ್ಳಲ್ಲ. ಆದರೆ ಕಾಲೇಜು ವಿಷಯಾಧಾರಿತ ಕಾನ್ಸೆಪ್ಟಿನಲ್ಲಿ ಕೆಲವು ಸಿಮಿಲಾರಿಟಿಗಳಿರುವುದು ಸರ್ವೇ ಸಾಮಾನ್ಯ. ಅದರಲ್ಲಿ ಅಭ್ಯಂತರವೇನೂ ಇಲ್ಲ. ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ, ಈ ಕೋರ್ಸನ್ನ ಕಲಿಯುವಾಗ “ಯಾವಾಗ ಮುಗಿಯತ್ತೋ..?” ಅನ್ನಿಸತ್ತೆ. ಆದರೆ ಮುಗಿದ ಮೇಲೆ, “ಛೇ ಇಷ್ಟು ಬೇಗ ಆಗಿಹೋಯಿತಲ್ಲ..!” ಅನ್ನಿಸುತ್ತೆ. ಅದನ್ನ ಸಿನೆಮಾ ಸಮರ್ಥವಾಗಿ ಹರವಿಟ್ಟಿರುವುದು ಅದರ ಇನ್ನೊಂದು ಸಾಧನೆ.
ಕಾಲೇಜು ನೀಡುವ ಅವರ್ಣನೀಯ ಜೀವನಾನುಭೂತಿಯನ್ನೂ, ಕಾಲೇಜು ದಿನಗಳ ಉತ್ಸಾಹ, ತಿರ್ಬೋಕಿತನ, ಹತಾಶೆ, ಕನಸುಗಳನ್ನೂ ಮತ್ತೊಮ್ಮೆ ಕಣ್ಣಮುಂದೆ ಹರಿಸುವ ಉಲ್ಲಾಸಭರಿತ ಸಿನೆಮಾ. ದಯವಿಟ್ಟು ಸಿನೆಮಾ ನೋಡಿಕೊಂಡು ಬನ್ನಿ. ಕನ್ನಡದಲ್ಲಿ ನಾವು ಪ್ರೋತ್ಸಾಹಿಸಬೇಕಿರುವುದು ಇಂತಹ ಮೆದುಳುಗಳನ್ನ.

ಕೊನೇ ಮಾತು: ಬುಕ್ ಮೈ ಶೋ ನನಗೆ ಕೆಲವೇ ಶಬ್ದಗಳಲ್ಲಿ ರಿವ್ಯೂ ಒಂದನ್ನು ಬರೀರಿ ಅಂದಿತು. “Rakshith got one more reason to be believed as the Future of Kannada Industry” ಅಂತ ಬರೆದು ಬಂದೆ. ತಪ್ಪಾ?  

(ಲೇಖನಕ್ಕೆ ಅಂಟಿಸಿರುವ ಚಿತ್ರ ಬಿಡಿಸಿದ್ದು, ಸಂದೀಪ್ ಭಟ್ ಎಸ್)

Thursday, December 15, 2016

"ಯುವಾ" : ಅರೆ..ಇದ್ಯಾರು..?!!

ನಾವಿನ್ನೂ ಲೈಫಲ್ಲಿ ಸೆಟ್ಲಾಗ್ದೇ ಇರೋರು! ಹೌದು... ನಾವು ಇನ್ನೂ ಇಂಜಿನಿಯರಿಂಗ್ ಓದುತ್ತಿರುವವರು. ನಮಗೆ ಮುಳುಗಿ ಹೋಗಲು ಸಾಕಷ್ಟು ಸಬ್ಜೆಕ್ಟುಗಳಿವೆ, ಪುಸ್ತಕಗಳಿವೆ, ಅಸೈನ್ಮೆಂಟು-ಪ್ರಾಜೆಕ್ಟುಗಳಿವೆ, ದಿನಬೆಳಗಾದರೆ ಬಾಗಿಲುತಟ್ಟುವ ಪರೀಕ್ಷೆಗಳಿವೆ. ಆದರೆ... ಇವೆಲ್ಲದರ ಮಧ್ಯೆ ನಮಗೊಂದು ಗುರಿಯಿದೆ! ನಮ್ಮಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಬಂದವರಿದ್ದೇವೆ. ರಾಜ್ಯ ಏಕೆ, ದೇಶದ ಮೂಲೆಮೂಲೆಗಳಿಂದ ಬಂದವರಿದ್ದೇವೆ. ಮಲೆನಾಡಿನ ಹಳ್ಳಿಕೊಂಪೆಯಿಂದ, ಬಿಜಾಪುರದ ಬಿಸಿಸೆಖೆಯಿಂದ ಬಂದವರಿದ್ದೇವೆ. ಅದೆಲ್ಲ ಪಕ್ಕಕ್ಕಿರಲಿ, ಉತ್ತರದ ರಾಜಸ್ಥಾನ, ದಕ್ಷಿಣದ ತಮಿಳುನಾಡಿನಿಂದ ಬಂದವರೂ ಇದ್ದೇವೆ. ಆದರೆ... ನಮ್ಮೆಲ್ಲರಿಗೂ ಕಾಮನ್ ಆಗಿ ಒಂದು ಧ್ಯೇಯವಿದೆ! ನಾವು ಸಮಾಜದಿಂದ ಪಡೆದು ಬೆಳೆದು ನಿಂತಿದ್ದೇವೆ. ಮುಂದಿನ ತಂತ್ರಜ್ನರು ಅನ್ನಿಸಿಕೊಳ್ಳಬೇಕಾದ ನಮಗೆ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ, ತಿರುಗಿ ಸಮಾಜಕ್ಕೆ ಕೊಡುವುದು ಬೆಟ್ಟದಷ್ಟಿದೆ. ಇದನ್ನರಿತೇ ನಾವು ಕೆಲಸಕ್ಕೆ ಕೈ ಹಾಕಿದ್ದು! ಸಿಂಪಲ್ಲಾಗಿ ಹೇಳ್ತೀವಿ ಕೇಳಿ. ನಾವು ವಿದ್ಯುತ್ ಕಾಣದ ಹಳ್ಳಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಅಲ್ಲಿ ಹೋಗಿ ಪರಿಸ್ಥಿತಿಯ ಅವಲೋಕನ ಮಾಡಿಕೊಂಡು ಬರ್ತ್ತೇವೆ. ನಂತರ ಕೆಲವೊಂದು ಕಾರ್ಯಕ್ರಮಗಳನ್ನು ಮಾಡಿ ಜನರಿಂದ ಒಂದಷ್ಟು ದುಡ್ಡು ಸಂಪಾದಿಸುತ್ತೇವೆ. ಆ ದುಡ್ಡಿನಲ್ಲಿ ಅತ್ಯುನ್ನತ ಶ್ರೇಣಿಯ ಸೋಲಾರ್ ಕಿಟ್ ಗಳನ್ನ ಖರೀದಿಸುತ್ತೇವೆ. ಅವುಗಳನ್ನು ಜೋಪಾನವಾಗಿ ತೆಗೆದುಕೊಂಡು ಹೋಗಿ ಆ ಹಳ್ಳಿಗಳ ಮನೆಗಳಿಗೆ ಜೋಡಿಸುತ್ತೇವೆ. ಇದನ್ನು ಒಂದು LightUp  ಅನ್ನುತ್ತೇವೆ. ಇಂಥವುಗಳು ಅಂತೆ ಕಂತೆಗಳ ಕಥೆಯಲ್ಲ. ಅನೇಕ ಲೈಟ್ ಅಪ್ ಗಳನ್ನ ಅದಾಗಲೇ ಮಾಡಿ ಆಗಿದೆ. ಇವೆಲ್ಲದರ ಮಧ್ಯೆಯೇ, ಲಾಲ್ ಬಾಗಿನಲ್ಲಿ ಸ್ವಚ್ಚ ಮಾಡಲು ಮುಂದಾಗುವವರೊಂದಿಗೆ ಸೇರಿ ನಾವೂ ಸ್ವಚ್ಚ ಮಾಡುತ್ತೇವೆ, ಕಣ್ಣಿಲ್ಲದವರು ಪರೀಕ್ಷೆ ಬರೆಯುಲು ಅನುವಾಗುವಂತೆ ಸ್ಕ್ರೈಬ್ ಆಗುತ್ತೇವೆ, ಶ್ರವಣ ಮತ್ತು ಧ್ವನಿ ವಿಕಲಚೇತನರಿಗೆ ನೆರವಾಗಲು ಹೋಗಿ, ಇಂಡಿಯನ್ ಸೈನ್ ಲಾಂಗ್ವೇಜನ್ನೂ ಕಲಿಯುತ್ತೇವೆ. ಇದು ನಮ್ಮ ಕಾರ್ಯವೈಖರಿ. ಇಷ್ಟವಾಗುತ್ತೆ ತಾನೆ? ಕತ್ತಲಾದ ಮೇಲೆ ಬೆಳಕು ಕಾಣದ ಗುಡಿಸಿಲಿನಲ್ಲಿ, ಅಪ್ಪ ಅಮ್ಮನ ಜೊತೆ ವಾಸಿಸುವ, ಶಾಲೆಗೆ ಹೋಗುವ ಪುಟ್ಟ ಮಗುವೊಂದರ ಓದಿಗೆ ನಮ್ಮ ಸೋಲಾರ್ ಕಿಟ್ ನೆರವಾಗುತ್ತಲ್ಲ? ಬೆಳಕು ಕಂಡು ಮಗು ನಸುನಗುತ್ತಲ್ಲ? ಅಂತಹ ಮಂದಹಾಸಗಳೇ ನಮಗೆ ಇಲ್ಲಿಯವರೆಗೆ ಕೆಲಸ ಮಾಡಲು ಸ್ಫೂರ್ತಿ ತುಂಬಿವೆ. ನಿಮ್ಮೆಲ್ಲರ ಬೆಂಬಲ ಮತ್ತು ಪ್ರೀತಿ ಪಡೆಯಲು ನಾವೀಗ ಸಾಮಾಜಿಕ ಜಾಲತಾಣಗಳಿಗೆ ಬಂದಿದ್ದೇವೆ. ಹರಸುತ್ತೀರಿ ತಾನೆ? 

Friday, July 29, 2016

ವಿಮರ್ಶೆಯ ಸಹಿಸದ ಧರ್ಮ ಶುದ್ಧಿಯಾದೀತೇ ಶಿವಾ...?

#IStandWithRohithChakrathirtha
ಭಗವದ್ಗೀತೆಯ ಒಂದು ಶ್ಲೋಕ “ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವ ಹಾಗೆ, ಮನುಷ್ಯ ಯಾವ ಧರ್ಮವನ್ನು ಅನುಸರಿಸಿದರೂ ಕೊನೆಗೆ ಬಂದು ನನ್ನನ್ನೇ ಸೇರಿಕೊಳ್ಳುತ್ತಾನೆ” ಅಂತ ಹೇಳುತ್ತೆ. ಆದ್ದರಿಂದ ಒಂದು ಧರ್ಮದ ಬಗ್ಗೆ ವಿಷಕಾರುವ ಸನ್ನಿವೇಷವೇ ಇಲ್ಲ. ಧರ್ಮ ಎಂಬುದು ಸಂಸ್ಕೃತಿಯ ಮತ್ತೊಂದು ರೂಪ ಅಷ್ಟೆ. ಅದೊಂದು ದೈವೀ ಪ್ರಜ್ನೆ. ಮನುಷ್ಯ ಸರಿ ದಾರಿಯಲ್ಲಿ ನಡೆಯಲು ಒಂದು ಆಧಾರ, ಒಂದು ಊರುಗೋಲು. ತನಗಿಷ್ಟ ಅನ್ನಿಸಿದ ಧರ್ಮವನ್ನು ಪಾಲಿಸಿದರೂ, ಒಬ್ಬ ಮನುಷ್ಯ ಮನುಷ್ಯನಾಗಿ ಮಾನವೀಯತೆಯಿಂದ, ನಿಸ್ವಾರ್ಥವಾಗಿ ಬದುಕಿದರೆ ಆತನ ಕೊನೆಗೆ ಪರಮಾತ್ಮನಲ್ಲೇ ಲೀನವಾಗುತ್ತಾನೆ ಅನ್ನುತ್ತೆ ಅಧ್ಯಾತ್ಮ. ವಿವೇಕಾನಂದರನ್ನು ವಿಶ್ವ ಇಷ್ಟ ಪಟ್ಟಿದ್ದು, ಅವರ ಸರ್ವಧರ್ಮ ಸಮನ್ವಯ ನಿಲುವಿಗೆ. ಭಾರತ ಯಾವತ್ತೂ ತನ್ನಲ್ಲಿ ಜನ್ಮ ತಳೆದ ಧರ್ಮ ಮಾತ್ರ ಶ್ರೇಷ್ಠ, ಬೇರೆಯದ್ದು ಕೀಳು ಅಂದೇ ಇಲ್ಲ. ಆದರೆ ಒಂದು ಧರ್ಮ ಅನ್ನುವುದನ್ನು ಒಂದು ವ್ಯಾಖ್ಯಾನದೊಳಗೆ ಕೂಡಿಹಾಕಿಬಿಡಲಾಗುವುದಿಲ್ಲ. ಆ ಧರ್ಮ ಹುಟ್ಟಿದಾಗ ಹೇಗೆ ಇತ್ತೋ, ಸಾಯುವಾಗಲೂ ಹಾಗೇ ಇರಬೇಕು ಅಂತೇನೂ ಇಲ್ಲ. ಅಷ್ಟಕ್ಕೂ ಒಂದು ಧರ್ಮ ಸಾಯದಂತೆ ಇರಬೇಕಾದರೆ, ಕಾಲಕಾಲಕ್ಕೆ ತನ್ನಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗತ್ತೆ. I mean, ತನ್ನನ್ನೇ ತಾನು ಕಾಲಕಾಲಕ್ಕೆ ಶುದ್ಧಿಪಡಿಸಿಕೊಂಡು ಮುಂದುವರಿಯಬೇಕಾಗತ್ತೆ. ಹೀಗೆ ಶುದ್ಧಿ ಪಡಿಸಿಕೊಳ್ಳಬೇಕೆಂದರೆ ತನ್ನನ್ನು ತಾನು ವಿಮರ್ಶನೆಗಳಿಗೆ ಒಡ್ಡಿಕೊಳ್ಳಬೇಕಾಗತ್ತೆ.
ಹಿಂದೂಧರ್ಮವನ್ನು ವಿಮರ್ಶಿಸಿದ, ಕಿವಿಹಿಂಡಿದ, ತಿದ್ದಿತೀಡಿದ ಸಾವಿರಾರು ಸಂತರು ಆಗಿಹೋಗಿದ್ದಾರೆ. ಇಂತಹ ಸಮಾಜ ಸುಧಾರಕರು ಹಿಂದೂ ಧರ್ಮದ ಒಳಗೂ ಇದ್ದರು, ಹೊರಗೂ ಇದ್ದರು. ಶಂಕರಾಚಾರ್ಯರಿಂದ ಹಿಡಿದು ಬಸವಣ್ಣನವರವರೆಗೆ, ರಾಜಾರಾಮ ಮೋಹನರಾಯರಿಂದ ಹಿಡಿದು ವಿವೇಕಾನಂದರವರೆಗೆ ನಾವು ಸಾವಿರಾರು ಚಿಂತಕರನ್ನು ಹೆಸರಿಸಬಹುದು. ಇಂತಹ ಸುಧಾರಕರಿಗೆ, ವಿಮರ್ಶಕರಿಗೆ, ಟೀಕಾಕಾರರಿಗೆ ಹಿಂದೂ ಧರ್ಮದ ಪ್ರಜ್ನಾವಂತ ವರ್ಗ ತಡೆ ಒಡ್ಡಿದ ಉದಾಹರಣೆ ಇಡೀ ಇತಿಹಾಸದಲ್ಲೇ ಇಲ್ಲ. ಹಿಂದೂ ಧರ್ಮ ಕಾಲಕ್ಕೆ ಒಗ್ಗಿಕೊಂಡು, ತಿದ್ದಿಕೊಂಡು ಬಂದಿದೆ. ಆ ಕಾರಣಕ್ಕಾಗಿ, ಇತಿಹಾಸದಲ್ಲಿ ಒಮ್ಮೊಮ್ಮೆ ನಶಿಸಿಹೋಗುವ ಹಂತ ತಲುಪಿದರೂ, ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದಿದೆ. ಈ ವಿಮರ್ಶೆಗಳು, ಟೀಕೆಗಳು, ಆತ್ಮಾವಲೋಕನಗಳು ಹಿಂದೂ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸಿವೆ. ಆಧುನಿಕ ಭಾರತದಲ್ಲಂತೂ ಹಿಂದೂ ಧರ್ಮದ ಬಗ್ಗೆ ವ್ಯಕ್ತಿಗೊಂದರಂತೆ, ಬಾಯಿಗೆ ಬಂದ ಹಾಗೆ ಮಾತನಾಡಲಾಗಿದೆ, ಚಿತ್ರ ತೆಗೆಯಲಾಗಿದೆ, ಪುಸ್ತಕ ಬರೆಯಲಾಗಿದೆ, ಭಾಷಣ ಮಾಡಲಾಗಿದೆ, ಇದನ್ನು ಮಾಡಿದವರಿಗೆಲ್ಲ ಭರಪೂರ ಪ್ರಶಸ್ತಿಗಳನ್ನೂ ಕೊಡಲಾಗಿದೆ. ಆವಾಗ ಯಾವತ್ತೂ ಹಿಂದೂ ಧರ್ಮ ಬೀದಿಗಿಳಿದು ಹೂಂಕರಿಸಲಿಲ್ಲ. ಶಾಂತಚಿತ್ತದಿಂದ ಅವಲೋಕಿಸಿ ಮುನ್ನಡೆಯಿತು.
ಮೊನ್ನೆ ಹೊಸದಿಗಂತದಲ್ಲಿ Rohith Chakrathirtha ಅವರು ಬ್ರಿಗೆಟ್ ಗೇಬ್ರಿಯಲ್ ಎಂಬ ಲೇಖಕಿ ಬರೆದ ಇಸ್ಲಾಮ್ ಇತಿಹಾಸದ ಬಗೆಗಿನ ಲೇಖನವೊಂದನ್ನು ಅನುವಾದಿಸಿ ಬರೆದಿದ್ದರು. “ಇಸಿಸ್ ಹಿಂಸ್ರ ಮುಖದ ಹಿಂದಿದೆ ೧೪೦೦ ವರ್ಷಗಳ ಇತಿಹಾಸ” ಎಂದು. ಅದರಲ್ಲಿ ಇಸ್ಲಾಮ್ ಇತಿಹಾಸದ ಕೆಲವು ಘಟನೆಗಳ ಬಗ್ಗೆ ವಿವರವಿದೆ. ಅದು ಅನುವಾದ ಅಷ್ಟೆ. ನಾನು ಇತ್ತೀಚಿಗೆ ಭೈರಪ್ಪ ಅವರ ’ಆವರಣ’ ಕಾದಂಬರಿಯನ್ನು ಓದುತ್ತಿದ್ದೆ. ಅವರು ಅದರಲ್ಲಿ ಮೊಘಲ್ ಸಾಮ್ರಾಜ್ಯ ಹೇಗೆ ಭಾರತದ ಮೇಲೆ ತನ್ನ ಧರ್ಮವನ್ನು ಹೇರಲು ಪ್ರಯತ್ನಿಸಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ, ಸಾಕ್ಷಿಸಮೇತ ವಿವರಿಸಿದ್ದಾರೆ. ಆ ಕಾದಂಬರಿಯಲ್ಲೊಬ್ಬಳು ಲೇಖಕಿಯಿರುತ್ತಾಳೆ. ಅವಳೂ ಇದೇ ವಿಷಯದ ಬಗ್ಗೆ ಪುಸ್ತಕ ಬರೆದಿರುತ್ತಾಳೆ. ಕೊನೆಗೆ ಕಾದಂಬರಿಯ ಕ್ಲೈಮ್ಯಾಕ್ಸ್ ನಲ್ಲಿ, ಅವಳ ಪುಸ್ತಕವನ್ನು, ಆ ಪುಸ್ತಕದ ಜ್ವಲಂತ matterನನ್ನು ನೋಡಿ ಎಲ್ಲಾ ಪ್ರಕಾಶಕರೂ ಅದನ್ನು ಪ್ರಕಟಿಸಲು ಸ್ಪಷ್ಟವಾಗಿ ನಿರಾಕರಿಸಿಬಿಡುತ್ತಾರೆ. ಕೊನೆಗೆ ತನ್ನದೇ ಕರ್ಚಿನಲ್ಲಿ ಪ್ರಿಂಟ್ ಹಾಕಿಸಿ, ತಾನೇ ಡಿಸ್ಟ್ರಿಬ್ಯೂಟರ್ ಆಗಿ ಪಸರಿಸಲು ಲೇಖಕಿ ಪ್ರಯತ್ನಿಸುತ್ತಾಳೆ. ಹಾಗೆ ಮಾಡಿದಾಗ, ಪುಸ್ತಕದ ಬಗ್ಗೆ ದೊಡ್ಡ ದೊಡ್ಡ ಪ್ರತಿಭಟನೆಗಳಾಗಿ, ಅದರ ಬಗ್ಗೆ ಕಟು ವಿಮರ್ಶೆಗಳು ಬಂದು, ಆ ಪುಸ್ತಕವನ್ನ ಸರ್ಕಾರ ನಿಷೇಧಿಸಿ, ಮುಟ್ಟುಗೋಲು ಹಾಕಿಕೊಂಡುಬಿಡುತ್ತದೆ.
ಇತ್ತೀಚಿಗೆ ಕಮಲ್ ಹಾಸನ್ ರ ’ವಿಶ್ವರೂಪ” ಬಿಡುಗಡೆಯಾದಾಗಲೂ ಹೀಗೇ ಆಗಿತ್ತು. ಈಗ ರೋಹಿತ್ ಲೇಖನ ಬರೆದ ನಂತರವೂ ಹೀಗೇ ಆಗುತ್ತಿದೆ. ರೋಹಿತ್ ಗೆ ಬೆದರಿಕೆಗಳು ಬರುತ್ತಿವೆ. ಪ್ರಕಟಿಸಿದ ಪತ್ರಿಕೆಯ ಕಾರ್ಯಾಲಯದ ಫೋನುಗಳು ಬೆದರಿಕೆ ಕರೆಗಳನ್ನ ಸ್ವೀಕರಿಸುತ್ತಿವೆ. ಒಂದು ಪೋಲಿಸ್ ಕಂಪ್ಲೆಂಟ್ ಕೂಡ ಆಗಿಹೋಗಿದೆ. ಇನ್ನು ಆವತ್ತಿನ ಸಂಚಿಕೆಗಳನ್ನು ಹಿಂಪಡೆದು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದೊಂದು ಬಾಕಿ. ಅದೂ ರೋಹಿತ್ ಮಾಡಿದ್ದು, ಒಂದು ಅನುವಾದವನ್ನ, ಅದು ಅವರ ಸ್ವಂತ ವಿಚಾರಲಹರಿ ಅಲ್ಲ! ಒಂದು ಅನುವಾದಕ್ಕಾಗಿ ಒಬ್ಬ ಲೇಖಕನಿಗೆ ಬೆದರಿಕೆಗಳು ಬರುತ್ತವೆ ಅಂದರೆ, ಇದು ಯಾವ ರೀತಿಯ ಬೆಳವಣಿಗೆ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ಇತಿಹಾಸದ ಕೆಲವು ಕಟುಸತ್ಯಗಳನ್ನು ಒಪ್ಪಿಕೊಳ್ಳಬೇಕಾಗತ್ತೆ. ಒಬ್ಬ ಹಿಂದೂ ಆಗಿ, ಒಬ್ಬ ಬ್ರಾಹ್ಮಣ ಆಗಿ ನನ್ನ ಜಾತಿ ಹಾಗೂ ಧರ್ಮ ಇತಿಹಾಸದಲ್ಲಿ ತಪ್ಪೇ ಮಾಡಿಲ್ಲ ಅಂತ ನಾನು ಹೇಳಿದರೂ ಅದು ತಪ್ಪೇ ಆಗುತ್ತೆ. ನಾನಂತೂ ನನ್ನ ಧರ್ಮ ರೂಢಿಸಿಕೊಂಡಿದ್ದ ಕಂದಾಚಾರಗಳನ್ನ, ಅಸ್ಪೃಶ್ಯತೆಯನ್ನ ಕಟುವಾಗೇ ವಿರೋಧಿಸುತ್ತೇನೆ. ಹಾಗೇ ತಮ್ಮ ಧರ್ಮ ಇತಿಹಾಸದಲ್ಲಿ ಕ್ರೌರ್ಯ ಪ್ರದರ್ಶಿಸಿದ್ದುದನ್ನು ಅವರು ಒಪ್ಪಿಕೊಳ್ಳಬೇಕಾಗತ್ತೆ. ಅಕಸ್ಮಾತ್ ರೋಹಿತ್ ಅವ್ರು ಸುಳ್ಳು ಬರೆದಿದ್ದಾರೆ ಅಂತ ಇಟ್ಟುಕೊಳ್ಳಿ. ಸರಿ. ಅದು ಹೇಗೆ ಸುಳ್ಳು ಮತ್ತು ಸತ್ಯ ಏನು ಎಂಬುದನ್ನು ಪುರಾವೆ ಸಮೇತ ವಿವರಿಸಿ, ಇವರುಗಳು ಒಂದು counter article ಬರೆಯಬಹುದಲ್ಲ? ಬೇಕಾದರೆ ಹೊಸದಿಗಂತದಲ್ಲೇ ಪ್ರಕಟಿಸುವಂತೆ ಪತ್ರಿಕೆಗೆ ಕೇಳಿಕೊಳ್ಳೋಣ. ಅದನ್ನ ಬಿಟ್ಟು, ಹಿಂದಿಲ್ಲ ಮುಂದಿಲ್ಲ, ರೋಹಿತ್ ರ ಫೋಟೋ ಹಾಕಿ “ಇವ ಅದು ಬರೆದ, ಇದು ಬರೆದ, ಇವನಿಗೆ ಹಾಗೆ ಮಾಡೋಣ, ಹೀಗೆ ಮಾಡೋಣ” ಅಂತ ಕೂಗಾಡಿದರೆ? That’s not fair. ಸುಮ್ಮನೆ ವಿಷಕಾರುವುದರಲ್ಲಿ ಅರ್ಥವೇ ಇಲ್ಲ, ಆದ್ರೂ ಅವರು ಅದನ್ನೇ ಮುಂದುವರಿಸಿದರೆ, ನಾವು ಕನಿಕರಕ್ಕಿಂತ ಹೆಚ್ಚಿನದೇನನ್ನೂ ಕೊಡಲಾಗುವುದಿಲ್ಲ. ನಡೆಯುತ್ತಿರುವ ಬೆಳವಣಿಗೆಗಳನ್ನು ಸರಿಯೋ ತಪ್ಪೋ ಅಂತ ಜನರೇ ನಿರ್ಧರಿಸಲಿ.

Wednesday, July 27, 2016

ಷಿಲ್ಲೊಂಗ್ ಗೆ ಹೋಗಿ ಬರುತ್ತೇನೆ ಅಂತ ಹೇಳಿ ಮಾತುತಪ್ಪಿದ ಕಲಾಮಜ್ಜನನ್ನು ನೆನೆದು....

ಅದು ರಾಮೇಶ್ವರಂ ಎಂಬ ಹದಾ ದೊಡ್ಡ ಊರು. ಭಾರತದ ಪದತಲದಲ್ಲಿ ಇರುವುದು. ದೇವಸ್ಥಾನದಿಂದಾಗಿ ಇಡೀ ಭಾರತಕ್ಕೇ ಪರಿಚಿತವಾಗಿರುವ ಸ್ಥಳ. ಆ ಗ್ರಾಮದಲ್ಲಿ ಸುಮಾರು ೮೫ ವರ್ಷಗಳ ಹಿಂದೆ ಜೈನುಲಾಬ್ದೀನ್ ಮತ್ತು ಆಶಿಯಾಮಾ ಎಂಬ ಮುಸ್ಲೀಮ್ ದಂಪತಿಗೆ ಹುಟ್ಟಿದ ಕೂಸು ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಮ್. ತಂದೆಯ ಬಳಿ ಒಂದು ಬೋಟು ಇತ್ತು. ಹಿಂದೂ ತೀರ್ಥಯಾತ್ರಿಗಳ ರಾಮೇಶ್ವರ ಮತ್ತು ಧನುಷ್ಕೋಟಿಗಳ ನಡುವಿನ ಸಂಚಾರಕ್ಕಾಗಿ, ಆತ ಅದನ್ನು ಮುಡಿಪಾಗಿಟ್ಟಿದ್ದ. ಜೈನುಲಾಬ್ದೀನ್ ಸ್ಥಳೀಯ ಮಸೀದಿಯಲ್ಲಿ ಇಮಾಮ್. ಅವರ ಊರಿನಲ್ಲಿ ಹಿಂದೂ-ಮುಸಲ್ಮಾನರೂ ಕಿಂಚಿತ್ತೂ ವೈಷಮ್ಯವಿಲ್ಲದೇ, ಅವರ ಹಬ್ಬಗಳಲ್ಲಿ ಇವರು, ಇವರ ಹಬ್ಬಗಳಲ್ಲಿ ಅವರು ಭಾಗವಹಿಸುತ್ತಾ ಸೌಹಾರ್ದತೆಯಿಂದಿದ್ದರು. ಕಲಾಂ ಕುಟುಂಬ ಕಡುಬಡತನದಲ್ಲಿದ್ದ ಒಂದು ಸಾಮಾನ್ಯ ಕುಟುಂಬ. ಇಂತಹ ತೀರಾ ಸಾಧಾರಣ ವಾತಾವರಣದಲ್ಲಿ ಬೆಳೆದ ಈ ಹುಡುಗ ತನ್ನ ಮುಂದಿಟ್ಟುಕೊಂಡಿದ್ದು ಮಾತ್ರ ಅಸಾಧರಣ ಕನಸುಗಳನ್ನ. ಪೇಪರ್ ಮಾರಿಯಾದರೂ ಶಾಲೆಗೆ ಹೋಗುವ ತುಡಿತ ಮತ್ತು ಆಶೆ ಆ ಹುಡುಗನಲ್ಲಿತ್ತು.

ಊರ ಶಾಲೆಯಲ್ಲಿ ಓದುವಾಗ, ಶಿಕ್ಷಕರೊಬ್ಬರು ಒಂದು ದಿನ ಸಮುದ್ರತೀರಕ್ಕೆ ಕರೆದುಕೊಂಡುಹೋಗಿ, ಹಾರುತ್ತಿರುವ ಪಕ್ಷಿ ಸಮೂಹವನ್ನು ತೋರಿಸಿ, ಪಕ್ಷಿಗಳು ಹೇಗೆ ಹಾರುತ್ತವೆ ಅನ್ನುವುದನ್ನ ರಸವತ್ತಾಗಿ ವಿವರಿಸಿದ್ದರಂತೆ. ಈ ಹುಡುಗನ ಮನಸ್ಸು ಬಾಹ್ಯಾಕಾಶದ ಕಡೆಗೆ ಇನ್ನಿಲ್ಲದ ಒಲವನ್ನೂ, ಕುತೂಹಲವನ್ನೂ ಬೆಳೆಸಿಕೊಂಡಿತು. ಮುಂದೆ ಈತ ಈ ದೇಶದ ಕ್ಷಿಪಣಿ ತಂತ್ರಜ್ನಾನಕ್ಕೆ ಕೊಟ್ಟ ಕೊಡುಗೆ ಈಗ ಇತಿಹಾಸ. ಶಿಕ್ಷಕರು ಮಕ್ಕಳಿಗೆ ಇಂತಹ ವಿಷಯಗಳನ್ನು ಹೇಳುವುದರ ಮಹತ್ವ ಮತ್ತು ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ರಾಷ್ಟ್ರಕ್ಕೆ ಎಂತಹ ವ್ಯಕ್ತಿಯನ್ನು ರೂಪಿಸಿಕೊಡಬಹುದು ಎಂಬುದನ್ನ ಇಂದಿನ ಶಿಕ್ಷಕರು ಮನಗಾಣಬೇಕು. ಬಡತನ ಮತ್ತು ಸರಳತೆಯಲ್ಲಿ ಬೆಳೆದ ಈ ಹುಡುಗನನ್ನು ಮುಂದೆ ರಾಕೆಟ್ ಇಂಜಿನಿಯರ್ರನ್ನಾಗಿ ಮಾಡಿದ್ದು, ನ್ಯೂಕ್ಲಿಯರ್ ತಂತ್ರಜ್ನಾನಿಯನ್ನಾಗಿ ಮಾಡಿದ್ದು, ಕೊನೆಗೆ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಆತ ತನ್ನ ಹೃದಯದೊಳಗೆ ಹುದುಗಿಟ್ಟುಕೊಂಡಿದ್ದ ಕನಸುಗಳು. ಆ ಕನಸುಗಳಿಗೆ ತಕ್ಕಂತೆ ಆತ ಚೂರೂ ಕದಲದೆ ಅವುಗಳ ಬೆನ್ನುಹತ್ತಿ ಅಗಾಧ ಶ್ರಮ ಪಟ್ಟಿದ್ದು. ಈತ ಸ್ಕಾಲರ್ ಶಿಪ್ ನಲ್ಲಿ ಓದಿ ಮಹಾನ್ ಸ್ಕಾಲರ್ ಆದ ಕಥೆ ಈ ಶತಮಾನದ ಅದ್ಭುತ ಕಥೆಗಳಲ್ಲೊಂದು!

     ಈ ದೇಶ ಕಲಾಮ್ರನ್ನು ಒಬ್ಬ DRDO ವಿಜ್ನಾನಿಯಾಗಿದ್ದಕ್ಕಾಗಿ ಇಷ್ಟಪಡಲಿಲ್ಲ. ಅವರು ಪೋಖ್ರಾನ್ ನಲ್ಲಿ ನಡೆಸಿದ ಅಣುಬಾಂಬ್ ಪರೀಕ್ಷೆಯ ಯಶಸ್ಸಿಗಾಗಿ ಅವರನ್ನು ಪ್ರೀತಿಸಲಿಲ್ಲ. ಹೆಸರೇ ಗೊತ್ತಾಗದೇ ಅವಧಿ ಮುಗಿಸಿರುವ ರಾಷ್ಟ್ರಪತಿಗಳಿರುವಾಗ, ಕಲಾಂ ನಮ್ಮ ರಾಷ್ಟ್ರಪತಿಯಾಗಿದ್ದರು ಅನ್ನುವ ಕಾರಣಕ್ಕೆ ಅವರನ್ನು ಜನ ಇಷ್ಟಪಡಲೇ ಇಲ್ಲ! ತಮಗೆ ತಾವೆ ಭಾರತ ರತ್ನ ಕೊಟ್ಟುಕೊಂಡಿರುವ ಉದಾಹರಣೆಗಳಿರುವ ಈ ದೇಶದಲ್ಲಿ ಕಲಾಂ, ಭಾರತರತ್ನ ಪ್ರಶಸ್ತಿಗೆ ಭಾಜನೆಯಾದ ವ್ಯಕ್ತಿ ಎಂಬ ಕಾರಣಕ್ಕೆ ಜನ ಅವರನ್ನು ಆರಾಧಿಸಲಿಲ್ಲ! ಈ ದೇಶ ಅವರನ್ನು ಎತ್ತಿ ಮುದ್ದಾಡಿಸಿದ್ದು ಅವರ ಮಗುವಿನಂತಹ ಮನಸ್ಸನ್ನ ನೋಡಿ. ಅಷ್ಟೊಂದು ಉನ್ನತ ಸ್ಥಾನಗಳಿಗೆ ಏರಿ, ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂದರೂ ಅವರು ನಡೆದುಕೊಳ್ಳುತ್ತಿದ್ದ ರೀತಿ, ತುಂಬುತ್ತಿದ್ದ ಸ್ಫೂರ್ತಿಯಿದೆಯಲ್ಲ, ಅದನ್ನು ನೋಡಿ! ಅವರು ಭಾರತದ ಬಗ್ಗೆ, ಭಾರತ ಯುವಶಕ್ತಿಯಬಗ್ಗೆ ಇಟ್ಟುಕೊಂಡಿದ್ದ ವಿಷನ್ ಇದೆಯಲ್ಲ? ಆ ಕಾರಣಕ್ಕೆ! ಅವರ ಪ್ರತಿಯೊಂದು ಮಾತಿನಲ್ಲೂ, ಅವರ ಪ್ರತಿಯೊಂದು ಪುಸ್ತಕದ ಪ್ರತಿಯೊಂದು ವಾಕ್ಯದಲ್ಲೂ, ಅವರು ತಮ್ಮ ಕರಿಯರ್ ನಲ್ಲಿ ಮಾಡಿದ ಪ್ರತಿಯೊಂದು ಕರ್ತವ್ಯದಲ್ಲೂ ವ್ಯಕ್ತವಾಗುತ್ತಿತ್ತಲ್ಲ ಈ ದೇಶದ ಬಗೆಗಿನ ನಿಸ್ವಾರ್ಥ ನಿಷ್ಠೆ, ಪ್ರ್ರೆತಿ, ಕಾಳಜಿ? ಆ ಕಾರಣಕ್ಕೆ! ಕಲಾಮಜ್ಜನ ಜಾತಿ ನೋಡಲಿಲ್ಲ, ಕಲಾಮಜ್ಜನ ರಾಜ್ಯ ನೋಡಲಿಲ್ಲ, ಕಲಾಮಜ್ಜನ ಭಾಷೆ ನೋಡಲಿಲ್ಲ, ಈ ದೇಶದ ಎಲ್ಲಾ ಧರ್ಮದ, ಎಲ್ಲ ರಾಜ್ಯಗಳ, ಎಲ್ಲಾ ಭಾಷೆಗಳ ಜನ ಕಲಾಂರನ್ನ ಹೃದಯದಲ್ಲಿಟ್ಟು ಪೂಜಿಸಿದ್ದು ಆತ ಈ ದೇಶದ ಮೇಲಿಟ್ಟುಕೊಂಡಿದ್ದ ಪ್ರೀತಿಯ ಅಗಾಧತೆಯ ನೋಡಿ, ಆತನ ಸ್ವಚ್ಛಂದ ಹೃದಯವನ್ನು ನೋಡಿ!

    “ಕನಸೆಂದರೆ ನೀವು ನಿದ್ದೆಯಲ್ಲಿ ಕಾಣುತ್ತೀರಲ್ಲ, ಅದಲ್ಲ ಕಣ್ರೋ, ನಿಜವಾದ ಕನಸು ನಿಮ್ಮನ್ನು ನಿದ್ರಿಸಲೇ ಬಿಡುವುದಿಲ್ಲ” ಅಂತ ನಗುನಗುತ್ತಲೇ ಹೇಳುತ್ತಿದ್ದ ಕಲಾಮಜ್ಜ, ಭಾರತೀಯ ಯುವಕರಲ್ಲಿ ಬಿತ್ತಿದ ಆಸೆ ಕನಸುಗಳಿವೆಯಲ್ಲ, ಅವು ಮುಂದೊಂದು ದಿನ ಫಲಪ್ರದವಾದಾಗ ಅವುಗಳ ಬೆಲೆ ನಮಗೆ ಗೊತ್ತಾಗುತ್ತೆ.  “Where there is righteousness in the heart, there is beauty in the character. When there is beauty in the character, there is harmony in the home. When there is harmony in the home, there is order in the nation. When there is order in the nation, there is peace in the world “ ಎಂದು ಹೇಳುತ್ತಾ ಲೋಕಸಂತೋಷವನ್ನೇ ಧ್ಯಾನಿಸಿದ ವಿಶ್ವಮಾನವ ಅವರು. ಅವರು ಹೋದಕಡೆಯೆಲ್ಲ ಒಂದು ಶಿಸ್ತು ಏರ್ಪಡುತ್ತಿತ್ತು. ಅವರು ಕಾಲಿಟ್ಟಲೆಲ್ಲ ಒಂದಷ್ಟು ಶ್ರಮಜೀವಿಗಳು ಸೃಷ್ಟಿಯಾಗುತ್ತಿದ್ದರು. ಅವರು ಮಾಡಿದ ಕೆಲಸಗಳಲೆಲ್ಲ ಒಂದು ಯೋಜನೆ ಸಿದ್ಧವಾಗಿರುತ್ತಿತ್ತು. ಅವರು ಅಲ್ಲಿದ್ದಷ್ಟು ದಿನ ಇದ್ದಷ್ಟು, ಚಟುವಟಿಕೆಯುಕ್ತವಾಗಿ ರಾಷ್ಟ್ರಪತಿಭವನ ತನ್ನ ಇತಿಹಾಸದಲ್ಲೇ ಇದ್ದಿದ್ದಿಲ್ಲ.

    ಕಲಾಮಜ್ಜ ಈ ದೇಶಕಂಡ ಅತ್ಯುತ್ತಮ ವಿಜ್ನಾನಿಗಳಲ್ಲಿ ಒಬ್ಬರಾಗಿರಬಹುದು. ಈ ದೇಶ ಕಂಡ ಅತ್ಯದ್ಭುತ ರಾಷ್ಟ್ರಪತಿಯಾಗಿರಬಹುದು. ಆದರೆ ಅವರು ಜೀವನದುದ್ದಕ್ಕೂ ಅತ್ಯಂತ ಇಷ್ಟಪಟ್ಟು ಮಾಡಿದ್ದು ಶಿಕ್ಷಕವೃತ್ತಿಯನ್ನು! ಅತ್ಯಂತ ಹೆಮ್ಮೆಯಿಂದ ಬೆರೆತಿದ್ದು ವಿದ್ಯಾರ್ಥಿಗಳೊಂದಿಗೆ! “ದಯವಿಟ್ಟು ರಾಷ್ಟ್ರಪತಿಯಾಗಿ” ಅಂತ ವಾಜಪೇಯಿಯವರು ಕರೆಮಾಡಿದಾಗ, ಮದ್ರಾಸಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಕ್ಲಾಸು ಮುಗಿಸಿಕೊಂಡುಬಂದಿದ್ದ ಕಲಾಂ ಮೇಷ್ಟ್ರಿಗೆ ಸುತಾರಂ ಇಷ್ಟವಿರಲಿಲ್ಲ.ರಾಷ್ಟ್ರಪತಿಯಾಗಿ ತಮ್ಮ ಅವಧಿ ಮುಗಿಸಿದ ನಂತರವೂ ತಕ್ಷಣಕ್ಕೆ ಹಿಂದಿರುಗಿದ್ದು ಶಿಕ್ಷಕವೃತ್ತಿಗೇ. ಕ್ಲಾಸಿನ ಎರಡು-ಮೂರು ಪಟ್ಟು ಹೆಚ್ಚು ಸ್ಟ್ರೆಂತ್ ಕಲಾಂ ಮೇಷ್ಟ್ರಿನ ಕ್ಲಾಸಿನಲ್ಲಿರುತ್ತಿತ್ತಂತೆ.. ಕೋರ್ಸಿಗೆ ಸಂಬಂಧವಿರದವರೂ ಕಲಾಂ ಮೇಷ್ಟ್ರ ಕ್ಲಾಸಿಗೆ ಬಂದು ಕೂತುಬಿಡುತ್ತಿದ್ದರಂತೆ. ವಿಖ್ಯಾತ ವಿಜ್ನಾನಿ ಪಾಠ ಮಾಡುತ್ತೇನೆಂದರೆ ಎಲ್ಲರೂ ಬಂದು ಕೂರುತ್ತಾರೆ ಅಂದುಕೊಳ್ಳಬೇಡಿ! ನನ್ನ ಕಾಲೇಜಿಗೇ ವಿಖ್ಯಾತ ವಿಜ್ನಾನಿಗಳು ಬಂದಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನವರ ಒತ್ತಾಯಕ್ಕೆ ಹ್ಯಾಪು ಮೋರೆ ಹಾಕಿಕೊಂಡು ಮೂರು ತಾಸು ಕೂತೆದ್ದು ಹೋಗುತ್ತಾರೆ, ಅಷ್ಟೆ. ಆದರೆ ಕಲಾಮಜ್ಜನ ಕ್ಲಾಸಿನಲ್ಲಿ ನಾಮುಂದು ತಾಮುಂದು ಅಂತ ವಿದ್ಯಾರ್ಥಿಗಳು ಕಿಕ್ಕಿರಿಯುತ್ತಿದ್ದುದು, ಕಲಾಂ ಒಬ್ಬ ಅದ್ಭುತ ಶಿಕ್ಷಕ ಎಂಬುದನ್ನು ನಿರಾಯಾಸವಾಗಿ ತೋರಿಸುತ್ತದೆ.

  ಸಂಕಟವಾಗುತ್ತೆ! ಕಲಾಮಜ್ಜ ಕನಸು ಕಟ್ಟಿದ ದೇಶದ ಇವತ್ತಿನ ಕೆಲ ಆಗುಹೋಗುಗಳನ್ನು ನೋಡಿದರೆ ಸಂಕಟವಾಗುತ್ತೆ! ಆದರೆ ಯಾವ ಋಣಾತ್ಮಕತೆಯ ಬಗ್ಗೆಯೂ ಚಿಂತಿಸದೇ ಈ ದೇಶಕ್ಕೊಂದು ವಿಷನ್ ನ ಭದ್ರ ಬುನಾದಿ ಹಾಕಿಕೊಟ್ಟರಲ್ಲ, ಆ ಕಲಾಮಜ್ಜನನ್ನು ಕಂಡರೆ ಗೌರವ ಉಕ್ಕಿಬರತ್ತೆ. ಎಂಬತ್ತರ ಇಳಿವಯಸ್ಸಿನಲ್ಲೂ, ಅವರು ಆವತ್ತು ಸಾಯುವ ದಿನ, IIMನಲ್ಲಿ ಭಾಷಣ ಮಾಡುತ್ತೇನೆಂದು ಹೋಗಿದ್ದರಲ್ಲ, ಅವರ ಚೈತನ್ಯ ಕಂಡು ದಿಗ್ಭ್ಹ್ರಮೆಯಾಗತ್ತೆ! ಕಲಾಮಜ್ಜನ ಬಳಿ “ನಿಮಗೆ ಅತ್ಯಂತ ಸಾರ್ಥಕ್ಯ ತಂದುಕೊಟ್ಟ ಸಂಶೋಧನೆ ಯಾವುದು?” ಎಂದು ಕೇಳಿದರೆ ಅವರು ಯಾವುದೋ ಕ್ಷಿಪಣಿಯ ಹೆಸರು ಹೇಳಿ ಕಾಲರ್ ಜಗ್ಗಿಕೊಳ್ಳುವುದಿಲ್ಲ. ಅಥವಾ ಅಣುಬಾಂಬಿನಸ್ಫೋಟವನ್ನು ನೆನಪಿಸಿಕೊಳ್ಳುವುದಿಲ್ಲ. ಕಾಲು ಕಳೆದುಕೊಂಡವರಿಗೆ ಕೃತಕ ಕಾಲುಗಳ ಮೂಲಕ ಒಮ್ಮೆ ನೆರವಾದದ್ದನ್ನು ನೆನಪಿಸಿಕೊಂಡು ಧನ್ಯರಾಗುತ್ತಾರೆ.

   ಯುರೋಪಿಯನ್ ಯೂನಿಯನ್ ನಲ್ಲಿ ಎಲ್ಲ ಎದ್ದುನಿಂತು ಚಪ್ಪಾಳೆ ಹೊಡೆಯುವಂತೆ ಭಾಷಣ ಮಾಡಬಲ್ಲ ಕಲಾಮಜ್ಜ, ಅಷ್ಟೇ ಪ್ರೀತಿಯಿಂದ ನಮ್ಮೂರ ವೇದಿಕೆಯಲ್ಲೂ ಊರ ಹೈಕ್ಳನ್ನು ಹುರಿದುಂಬಿಸಬಲ್ಲರು! ಬ್ರಿಟನ್ ನ ರಾಜಮನೆತನದ ಕುಡಿಗೆ ಆಅಟೋಗ್ರಾಫ್ ಬರೆದುಕೊಡಬಲ್ಲ ಕಲಾಮಜ್ಜ, ಒಡಿಶಾದ ಬಡಜೋಪಡಿಯಲ್ಲಿರುವ ನಾಲ್ಕನೇತಿಯ ಹುಡುಗನ ಪತ್ರಕ್ಕೂ ಮಮತೆಯಿಂದ ಉತ್ತರಿಸಬಲ್ಲರು. ಗಣ್ಯಾತಿಗಣ್ಯರನ್ನು ರಾಷ್ಟ್ರಪತಿ ಭವನಕ್ಕೆ ಬರಮಾಡಿಕೊಳ್ಳುವ ಗೌರವಾದರಗಳಲ್ಲೇ, ಮಕ್ಕಳ ದಿನಾಚರಣೆಗೆ ಅಂತ ದೇಶದ ಹಲವು ಭಾಗಗಳಿಂದ ಕರೆಸಿಕೊಂಡ ಮಕ್ಕಳನ್ನು ಬರಮಾಡಿಕೊಳ್ಳಲ್ಲರು. ಲ್ಯಾಬಿನಲ್ಲಿ ದಿನಗಟ್ಟಲೆ ಕುಳಿತು ಸಂಶೋಧನೆ ಮಾಡಬಲ್ಲ ಕಲಾಮಜ್ಜ, ಶಾಂತವಾಗಿ ಮನೆಯ ಜಗುಲಿಯಲ್ಲಿ ಕುಳಿತು ವೀಣೆಯನ್ನು ಸುಶ್ರಾವ್ಯವಾಗಿ ನುಡಿಸಬಲ್ಲರು. ಕುರಾನನ್ನು ಪವಿತ್ರವಾಗಿ ನೋಡುತ್ತಿದ್ದ ಕಲಾಮಜ್ಜ, ಬೆಳಿಗ್ಗೆ ಎದ್ದ ತಕ್ಷಣ ಭಗವದ್ಗೀತೆಯನ್ನು ಪಠಿಸುತ್ತಿದ್ದರು! ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಲು ಹೋದ ಕಲಾಮಜ್ಜ, ಒಂದುಕ್ಷಣ ನಿಂತು “ನೋಡಿ ನಾನು ಮುಸಲ್ಮಾನ. ಕೈಯಲ್ಲಿರುವ ಮೇಣದಬತ್ತಿ ಚರ್ಚ್ ನಲ್ಲಿ ಬಳಸುವಂತದ್ದು. ಆದರೆ ಹಿಂದೂಗಳ ಸಂಸ್ಕೃತಿಯಾದ ದೀಪವನ್ನು ಬೆಳಗುತ್ತಿದ್ದೇನೆ. ನಮ್ಮಲ್ಲಿ ಸೌಹಾರ್ದತೆಯೆಂಬುದು ಹೀಗಿರಬೇಕು” ಅಂತ ನಕ್ಕಿದ್ದರು. He was just awesome!

ಕಲಾಮಜ್ಜ ಯಾವ ಅಪವಾದಗಳಿಗೂ, ಯಾವ ಸೋಲುಗಳಿಗೂ ತಲೆ ಕೆಡಿಸಿಕೊಳ್ಳಲೂ ಇಲ್ಲ, ತಲೆ ಬಗ್ಗಿಸಲೂ ಇಲ್ಲ. ತನ್ನಷ್ಟಕ್ಕೆ ತಾನು ದೇಶದ ಒಳಿತನ್ನು ಮಾತ್ರ ಚಿಂತಿಸುತ್ತ, ಅದಕ್ಕಾಗಿ ಶ್ರಮಿಸುತ್ತಾ ಮುನ್ನೆಡೆದರು. ನಮ್ಮಲ್ಲಿ ಎಷ್ಟೋ ಜನ ಅವರನ್ನು ಒಮ್ಮೆಯೂ ಮಾಧ್ಯಮಗಳಲ್ಲಿ ಬಿಟ್ಟರೆ ನೋಡಿಯೇ ಇಲ್ಲ. ಆದರೆ ನಮ್ಮಂತವರೊಂದಿಗೂ, ಕಲಾಮಜ್ಜ ಭಾವನಾತ್ಮಕವಾಗಿ ಇಷ್ಟು ಗಟ್ಟಿ ಸಂಬಂಧ ಬೆಳೆಸಿಕೊಂಡಿದ್ದಾರೆ ಅಂದರೆ, ಅವರ ವ್ಯಕ್ತಿತ್ವದ ಅಗಾಧತೆಯನ್ನೊಮ್ಮೆ ಊಹಿಸಿಕೊಳ್ಳಿ. ಕಳೆದವರ್ಷ ಜುಲೈ ಇಪ್ಪಾತ್ತೇಳನೇ ತಾರೀಖಿನ ದಿನ ಬೆಳಿಗ್ಗೆ “ಶಿಲ್ಲೊಂಗ್ ಗೆ ಹೋಗಿ ಬರುತ್ತೇನೆ. ಸಂಜೆ ಸಿಗೋಣ’ ಅಂತ ಟ್ವೀಟ್ ಮಾಡಿ ತೆರಳಿದ ಕಲಾಮಜ್ಜ, ತಮ್ಮ ಮಾತು ಉಳಿಸಿಕೊಳ್ಳಲೇ ಇಲ್ಲ. ಮತ್ತೆ ಬರಲೇ ಇಲ್ಲ.

ಯಾರೂ ಶಾಶ್ವತವಲ್ಲ ಬಿಡಿ, ಅವರೂ ಅಲ್ಲ. ಆದರೆ ಅವರು ಹಾಕಿಕೊಟ್ಟ ಪಥವಿದೆಯಲ್ಲ, ಅದು ಶಾಶ್ವತ! ತೋರಿಸಿಕೊಟ್ಟ ಗುರಿ ಇದೆಯಲ್ಲ, ಅದು ಶಾಶ್ವತ! ಕಿವಿಹಿಂಡಿ ಹೇಳಿಕೊಟ್ಟ ಪಾಠಗಳಿವೆಯಲ್ಲ, ಅವು ಶಾಶ್ವತ! ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯದ ಕಂಪೌಂಡ್ ಒಳಗಿನಿಂದ “ಭಾರತ್ ಕೀ ಬರ್ಬಾದೀ ತಕ್ ಜಂಗ್ ರಹೇಂಗೇ” ಅನ್ನುವ ಘೋಷಣೆಗಳನ್ನು ಕೇಳುವಾಗ ಹೊಟ್ಟೆ ಉರಿಯತ್ತೆ. ಆದರೆ ಯು ಟ್ಯೂಬಿನಲ್ಲಿ ಕಲಾಮಜ್ಜನ ಭಾಷಣವನ್ನು ಕೇಳಿದವರ ಸಂಖ್ಯೆ, ಹಾಗೆ ಕೂಗಿದವರ ಸಂಖ್ಯೆಗಿಂತ ಸಾವಿರಪಟ್ಟು ಹೆಚ್ಚಿದೆ ಅಂತ ನೋಡಿದಾಗ ಸಮಾಧಾನವೂ ಆಗತ್ತೆ. ಭಾರತ ರಾತ್ರಿ ಬೆಳಗಾಗುವುದರಲ್ಲಿ ಕಟ್ಟಿನಿಲ್ಲಿಸಿದ ರಾಷ್ಟ್ರವಲ್ಲ. ಕಲಾಮಜ್ಜನಂತಹ ಸಾವಿರಾರು ನಿಸ್ವಾರ್ಥ ಸಂತರು ಕಟ್ಟಿನಿಲ್ಲಿಸಿದ ಹೆಮ್ಮೆಯ ಭೂಮಿ. ಆ ಚೇತನಗಳ ದಿವ್ಯ ಮಾರ್ಗದರ್ಶನವನ್ನು ಅಳವಡಿಸಿಕೊಂಡು, ದೇಶಕ್ಕಾಗಿ ದುಡಿದರೆ ಅವುಗಳ ಆತ್ಮಕ್ಕೆ ಶಾಂತಿ ಸಿಕ್ಕೀತು. ಅಂದಹಾಗೆ ಕಲಾಮ್ ನಮ್ಮನ್ನಗಲಿ ನಿನ್ನೆಗೆ ಒಂದು ವರ್ಷ L




Friday, July 22, 2016

ಯಾವನಿಗೆ ಬೇಕು ನಿಮ್ಮ "ಉಗ್ರ ಖಂಡನೆ" ?

We strongly condemn” ಅನ್ನುವ ಪದಗಳನ್ನು ಕೇಳಿದಾಗಲೆಲ್ಲ ನನಗೆ ನಗು ಒತ್ತರಿಸಿಕೊಂಡು ಬರತ್ತೆ. “ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಅನ್ನುತ್ತಾರಲ್ಲ? ಅದೊಂದು ಸೀರಿಯಸ್ ಜೋಕಿನಂತೆ ಭಾಸವಾಗುತ್ತೆ. ಈ ಪೇಪರ್ ನವರು ಅದಕ್ಕೆ ಕೊಡುವ ಹೆಡ್ಡಿಂಗ್ ಗಳನ್ನು ನೋಡಿ, ಈ ಮಾಧ್ಯಮದವರಿಗೂ ಏನಾಗಿಬಿಟ್ಟಿದೆ ಅನಿಸತೊಡಗತ್ತೆ. “India Hits Back” ಅಂತೆ! “ಭಾರತದ ತಕ್ಕ ತಿರುಗೇಟು” ಅಂತೆ, “ದಿಟ್ಟ ತಿರುಗೇಟು” ಅಂತೆ! ಏನ್ಸಾರ್ ಹಂಗಂದ್ರೆ?

ಕದನವಿರಾಮ ಉಲ್ಲಂಘನೆ ಆದಾಗ ಸೇನೆ ತಿರುಗೇಟು ನೀಡುತ್ತಲ್ಲ? ಅದರ ಬಗ್ಗೆ ಮಾತನಾಡುತ್ತಿಲ್ಲ... ಪಾಕಿಸ್ತಾನವೋ, ಚೀನಾವೋ ಅಥವಾ ಮತ್ತೊಂದು ಉಗ್ರ ಸಂಘಟನೆಯೋ ಅಧಿಕಪ್ರಸಂಗಗಳನ್ನು ಮಾಡಿದಾಗ ನಮ್ಮ ರಾಜಕೀಯ ವಲಯ ತನ್ನ so called ತಿರುಗೇಟು ನೀಡುತ್ತಲ್ಲ, ಅದರ ಬೆಗ್ಗೆ ಹೇಳುತ್ತಿದ್ದೇನೆ. ಜಗತ್ತಿನ ಅತ್ಯಂತ ಬಲಶಾಲಿ ಸೈನ್ಯಗಳಲ್ಲೊಂದನ್ನು ಇಟ್ಟುಕೊಂಡು, ಜಗತ್ತಿನ ಅತ್ಯಾಧುನಿಕ ಶಸ್ತ್ರಗಳನ್ನೆಲ್ಲವನ್ನೂ ಇಟ್ಟುಕೊಂಡು, ವಿಶ್ವಸಂಸ್ಥೆಯಲ್ಲೊಂದು ಗಣನೀಯ ಸ್ಥಾನವನ್ನಿಟ್ಟುಕೊಂಡು, ಭಾರತದ ರಾಜತಂತ್ರ ಲಜ್ಜೆಯಿಲ್ಲದೆ “ನಾವು ನೀವು ಮಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ” ಅಂತ ಹೇಳಿ ಸುಮ್ಮನಾಗಿ, ಪ್ರತೀಬಾರಿ ಭಾರತವನ್ನೇ ಸೋಲಿಸುತ್ತಲ್ಲ? ಅದ್ರ ಬಗ್ಗೆ ಹೇಳುತ್ತಿದ್ದೇನೆ. ಅದು ಯಾವ ಸೀಮೆಯ “ಇಂಡಿಯಾ ಸ್ಟ್ರೈಕ್ ಬ್ಯಾಕು”?
ಕಾಶ್ಮೀರದಲ್ಲಿ ಉಗ್ರ ಬರ್ಹಾನ್ ನನ್ನು ಸೇನೆ ಹೊಡೆದ ಮರುಕ್ಷಣದಿಂದ ಇಲ್ಲಿಯವರೆಗೆ ಪಾಕಿಸ್ತಾನ ಏನಿಲ್ಲವೆಂದರೂ ಹತ್ತು ಭಾರತ ವಿರೋಧಿ ಸ್ಟೇಟ್ಮೆಂಟ್ ಗಳನ್ನು ಕೊಟ್ಟಿದೆ. ಬರ್ಹಾನ್ ನ ಶವವನ್ನು ಪಾಕಿಸ್ತಾನಿ ರಾಷ್ಟ್ರೀಯ ಧ್ವಜದಲ್ಲಿ ಸುತ್ತಿ ಹೂಳಲಾಗಿದೆ. ಅವನನ್ನು ಸಮಾಧಿ ಮಾಡುವಾಗ ಇಪ್ಪತ್ತೊಂದು ಗನ್ ಸೆಲ್ಯೂಟ್ ಗಳನ್ನು ನೀಡಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಬರ್ಹಾನ್ ಸತ್ತನೆಂದು ಪಾಕಿಸ್ತಾನ ಅಧಿಕೃತವಾಗಿ ’ಕರಾಳ ದಿನ’ವೊಂದನ್ನು ಆಚರಿಸಿದೆ. ತನ್ನ ಸರ್ಕಾರೀ ಅಧಿಕಾರಿಗಳಿಗೆ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬ್ಯಾಂಡ್ ಒಂದನ್ನು ಧರಿಸಿ ಕೆಲಸಕ್ಕೆ ಬರಲು ಸೂಚಿಸಿದೆ! ಹೊರದೇಶದಲ್ಲಿರುವ ಪಾಕಿಸ್ತಾನಿಯರ ಬಳಿ, ಭಾರತದ ನಡೆಯನ್ನು ವಿರೋಧಿಸಿ, ತಾವು ನೆಲೆಸಿರುವ ಆ ದೇಶಗಳ ಸಂಸತ್ತಿನ ಮುಂದೆ, ವಿಶ್ವಸಂಸ್ಥೆಯ ಕಚೇರಿಯ ಮುಂದೆ ಪ್ರತಿಭಟನೆ ಗೈಯ್ಯುವಂತೆ ಸೂಚಿಸಿದೆ! ಕಾಶ್ಮೀರದಲ್ಲಿ ಭುಗಿಲೆದ್ದು ನಡೆಯುತ್ತಿರುವ ಹಿಂಸಾಚಾರಕ್ಕೆ, ಪ್ರಾಣಹಾನಿಗೆ, ರಕ್ತದೋಕುಡಿಗೆ ಹಿಂದಿನಿಂದ ಪ್ರಚೋದಿಸಿ ಬೆಂಬಲಿಸುತ್ತಿರುವುದು ಯಾವ ರಾಕ್ಷಸ ಅಂದುಕೊಂಡಿರಿ? ಇದೇ ಪಾಕಿಸ್ತಾನ!

ಇಷ್ಟೆಲ್ಲ ಆದಮೇಲೆ ಮತ್ತೆ ಇವತ್ತಿನ ಪೇಪರ್ ನಲ್ಲಿ “India Strikes Back” ಅಂತ ಬಂತು. ಇವರ ಸ್ಟ್ರೈಕ್ ಬ್ಯಾಕು ಏನು ಅಂತ ಅಂದಾಜಿದ್ದರೂ ಸುಮ್ಮನೆ ಓದಿದೆ, ಅದೇ ಲೊಳಲೊಟ್ಟೆ! ವಿದೇಶಾಂಗ ವ್ಯವಹಾರ ಸಚಿವಾಲಯ “India strongly condemns the support which terrorists receive from Pakistan” ಅಂತ ಹಳೇ ಜಂಪೆರಾಗವನ್ನೇ ಪುನರುಚ್ಚರಿಸಿತ್ತು. ನೀವು ಸ್ಟ್ರಾಂಗ್ಲೀ ಕಂಡೆಮ್ನ್ ಮಾಡುತ್ತೀರಿ ಅಂತ ನಮಗೆ ಗೊತ್ತು ಸ್ವಾಮೀ... ಮುಂದೇನು..? ಅದು ಪಾಕಿಸ್ತಾನಕ್ಕೂ ಗೊತ್ತು. ಮುಂದೆ ಮತ್ತೆ ಒಂದು ಚಿಕ್ಕ ಸಂದರ್ಭ ಸಿಕ್ಕರೂ ಪಾಪಿಸ್ತಾನ ಭಾರತದ ವಿರುದ್ಧ ಶಕ್ತಿಮೀರಿ ವಿಷಾಕಾರುತ್ತೆ. ಭಾರತದಲ್ಲಿ ರಕ್ತ ಹರಿಸಲೇ ಹುಟ್ಟಿದ್ದೇವೆ ಅಂದುಕೊಂಡಿರುವ ಉಗ್ರರಿಗೆ ಸಂಪೂರ್ಣ ಸಹಕಾರ ಕೊಟ್ಟು ಮತ್ತೆ ಭಾರತದೊಳಗೆ ಛೂ ಬಿಡತ್ತೆ! ಹಳೇ ಚಿತ್ರಗಳಲ್ಲಿ ಎಲ್ಲಾ ಮುಗಿದ ಮೇಲೆ ಪೋಲಿಸ್ ಬರುತ್ತಿದ್ದರಲ್ಲ, ಹಾಗೆ ಎಲ್ಲಾ ಮುಗಿದ ಮೇಲೆ ನಮ್ಮ ಗೌರವಾನ್ವಿತ ಮಿನಿಸ್ಟ್ರೀ ಆಫ಼್ ಎಕ್ಸ್ಟರ್ನಲ್ ಅಫ಼ೇರ್ಸ್ ಕಡೆಯ ವಕ್ತಾರರೊಬ್ಬರು “We Strongly Condemn” ಅನ್ನೋ ಅರ್ಥವಿಲ್ಲದ ಜಂಪೆರಾಗವನ್ನ ಮತ್ತೆ ಹಾಡುತ್ತಾರೆ. Is this all, we can do?

ಎಲ್ಲಕ್ಕಿಂತ ದೊಡ್ಡ ಜೋಕು ಗೊತ್ತಾ? 26/11 ನಲ್ಲಿ ಮುಂಬೈ ಮಾರಣಹೋಮದ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್ ಮತ್ತು ಇನ್ನೂ ಅನೇಕ ಉಗ್ರ ಸಂಘಟನೆಗಳ ಮುಖ್ಯಸ್ತರು ಸೇರಿ “ಕಾಶ್ಮೀರದಲ್ಲಾದ ಮಾನವ ಹಕ್ಕು ಉಲ್ಲಂಘನೆ”ಯನ್ನು ವಿರೋಧಿಸಿ ಲಾಹೋರಿನಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದವರೆಗೆ ಕರವನ್ ರ್ಯಾಲಿಯನ್ನು ನಡೆಸಿ ಪುಣ್ಯಕಟ್ಟಿಕೊಳ್ಳಲಿದ್ದಾರಂತೆ! ತನ್ನ ಮಹಾನಗರಿಯೊಂದನ್ನು ರಕ್ತಮಯವನ್ನಗಿಸಿದ ಪಾತಕಿಗೆ ಬದುಕಲು ಬಿಟ್ಟಿರುವುದೇ, ಭಾರತದ ರಾಜಕೀಯ ವಲಯದ ಹೇಡಿತನಕ್ಕೆ ಸಾಕ್ಷಿ. ಭಾರತೀಯ ಸೈನಿಕರಿಗೆ ಒಂದು ಆರ್ಡರ್ ಮೇಲಿನಿಂದ ಸಿಕ್ಕಿಬಿಟ್ಟಿದರೆ, ಈಗಲ್ಲ, ಯಾವಾಗಲೋ ಪಾಕಿಸ್ತಾನದ ಕುಟಿಲತೆಗಳಿಗೆ ನರಕ ತೋರಿಸಿಬಿಡುತ್ತಿದ್ದರು. ಭಾರತೀಯ ಸೈನ್ಯದೆದುರು ಅವರ ನೂರಾರು ಉಗ್ರ ಸಂಘಟನೆಗಳಾಗಲೀ, ಪಾಕಿಸ್ತಾನೀ ಸೈನ್ಯವಾಗಲೀ, ಒಂದು ತರಗೆಲೆ ಕೂಡ ಅಲ್ಲ. ಆದರೆ ಸೈನಿಕರು ರಕ್ತಸುರಿಸಿ ಗೆದ್ದಿದ್ದನ್ನು, ತಾವು ಎಸಿ ರೂಮಿನಲ್ಲಿ ಕುಳಿತು ಬಿಟ್ಟುಕೊಟ್ಟುಬಿಡುವ ಭಾರತೀಯ ರಾಜಕೀಯ ಮನಸ್ಥಿತಿ ಇದೆ ನೋಡಿ, ಅದು ಭಾರತಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಶತ್ರು!

ಭಾರತ ಚೀನಾಕ್ಕೆ ಎಲ್ಲೋ ಯಾವುದೋ ಒಂದು ಚಿಕ್ಕ ವಿಷಯದಲ್ಲಿ ಒಂದು ಸಣ್ಣ ಟಾಂಟ್ ಕೊಟ್ಟಿತು ಅಂದುಕೊಳ್ಳಿ, ನಮ್ಮ ಕೆಲವು ಮಾಧ್ಯಮಗಳು “ಭಾರತದಿಂದ ಚೀನಾಕ್ಕೆ ತೀಕ್ಷ್ಣ ಸಮ್ದೇಶ ರವಾನೆ, ತಿರುಗಿಬಿದ್ದ ಭಾರತ” ಅಂತೆಲ್ಲ ಹೊಯ್ದಾಡಿಕೊಂಡು ಬಿಡುತ್ತವೆ. ಅವರು ಕೂಗುವುದು ಇನ್ನೂ ಕ್ಷೀಣವಾಗುವುದರೊಳಗೇ, ಚೀನಾ ಪಾಕಿಸ್ತಾನದೊಂದಿಗೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೆದ್ದಾರಿ ನಿರ್ಮಿಸುವ ಒಪ್ಪಂದಕ್ಕೋ, ಸೇತುವೆ ನಿರ್ಮಿಸುವ ಒಪ್ಪಂದಕ್ಕೋ ಸಹಿಹಾಕಿ ಮೀಸೆ ಒಳಗೆ ನಗುತ್ತದೆ. ಅಥವಾ ಪಾಕಿಸ್ತಾನೀ ಸೇನೆಯೊಂದಿಗೆ ಮಿಲಿಟರಿ ಕವಾಯಿತು ನಡೆಸಿ “ಈಗ ಹೆಂಗಾಯಿತು” ಅಂದುಬಿಡುತ್ತದೆ. ನಾವು ಅಮೇರಿಕೆಯ ಕಡೆ ಆಶಾನೋಟವನ್ನೂ ಬೀರುವಂತಿಲ್ಲ. ಅದರಂತ ಮಹಾನ್ ಗುಳ್ಳೇನರಿ ಈ ಬ್ರಹ್ಮಾಂಡದಲ್ಲೇ ಹುಟ್ಟಿರಲು ಸಾಧ್ಯವಿಲ್ಲ. ಗೋಸುಂಬೆಯಾಟವಾಡುತ್ತ ನಮಗೆ ಬೆಂಬಲಿಸಿದಂತೆ ಮಾಡಿ, ನಾವು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಮತ್ತೆ ಪಾಕಿಸ್ತಾನದ ತಲೆಯ ಮೇಲೆ ಕೈ ಸವರಲು ತೆರಳಿಬಿಡುತ್ತೆ. ವಿಶ್ವಸಂಸ್ಥೆಗೂ ಅಷ್ಟೆ. ಆಫ್ರಿಕಾದಲ್ಲೋ, ಮಧ್ಯ ಪ್ರಾಚ್ಯದಲ್ಲೋ ಯಾವುದೋ ಗೊತ್ತಿಲ್ಲದ ದೇಶದಲ್ಲಿ ಹಿಂಸೆ ಭುಗಿಲೆದ್ದಾಗ, ಆಂತರಿಕ ಸಂಘರ್ಷ ಮುಗಿಲು ಮುಟ್ಟಿದಾಗ, ಸಹಾಯಕ್ಕೆ ಹೋಗಲು ಭಾರತ್ಯದ ಸೈನ್ಯ ಬೇಕು. ನಾವು ನಮ್ಮ ಸೈನ್ಯವನ್ನು ಮರುಮಾತನಾಡದೆ ತಲೆಬಗ್ಗಿಸಿ ಕಳಿಸಿಕೊಡಬೇಕು. ಅಲ್ಲಿ ಎಷ್ಟೋ ಸೈನಿಕರನ್ನು ಕಳೆದುಕೊಂಡ ನೋವನ್ನು “ಶಾಂತಿಸ್ಥಾಪನೆ”ಗಾಗಿ ಅಂದುಕೊಂಡು ಹೊಟ್ಟೆ ಒಳಗೆ ಹಾಕಿಕೊಳ್ಳಬೇಕು. ಆದರೆ ಭಾರತದ ಹಿತಾಸಕ್ತಿಯ ವಿಷಯ ಬಂದಾಗ ಮಾತ್ರ ವಿಶ್ವಸಂಸ್ಥೆ ದಿವ್ಯ ನಿರ್ಲಕ್ಷ್ಯ ತೋರಿಸಿ, ಮೂಗು ಮುರಿದು, ದೊಡ್ದದಾಗಿ ಆಕಳಿಸಿ, ಮಗ್ಗಲು ಬದಲಿಸಿಬಿಡುತ್ತೆ. ಪಾಕಿಸ್ತಾನದ ವಿರುದ್ಧ, ಚೀನಾದ ವಿರುದ್ಧ ಏನೂ ಮಾಡಲಾಗದೇ ಕೈಕಟ್ಟಿ ಕುಳಿತುಬಿಡುತ್ತೆ. ಭಾರತದಲ್ಲಿರುವವರು ಮನುಷ್ಯರಲ್ಲವಾ? ಭಾರತೀಯರ ಜೀವಕ್ಕೆ ಬೆಲೆ ಇಲ್ಲವಾ? ನಾವು ಮತ್ತೆ “We strongly condemn” ಎಂದು ಮುಚ್ಚಿಕೊಂಡುಕೂರುವ ಪ್ರಯತ್ನ ಶುರು ಮಾಡುತ್ತೇವೆ, ಅಷ್ಟೆ!




ಈಗಿರುವ ಸರ್ಕಾರ ಹಿಂದಿನ ಸರ್ಕಾರಕಿಂತ ಪರ್ವಾಗಿಲ್ಲ ಅನ್ನುವುದ ಬಿಟ್ಟರೆ, ಪಾಕಿಸ್ತಾನ ಮತ್ತು ಉಗ್ರವಾದದ ವಿಷಯಕ್ಕೆ ಬಂದಾಗ, ಎಲ್ಲಾ ಸರ್ಕಾರಗಳೂ ಪಾಕಿಸ್ತಾನದ ಮುಂದೆ ರಾಜಕೀಯವಾಗಿ ಭಾರತವನ್ನೇ ಸೋಲಿಸುತ್ತಾ ಬಂದಿವೆ. ನೆಹರು ಆಡಳಿತದ ಕಾಲದಲ್ಲಿ ಭಾರತ “soft state” ಅಂತ ಕರೆಸಿಕೊಂಡಾಗಿನಿಂದ ಇಲ್ಲಿಯವರೆಗೂ ಮೆತ್ತನೆಯ ನಾಡಾಗಿಯೇ ಉಳಿದುಬಿಟ್ಟಿದೆ. ಅಷ್ಟಕ್ಕೂ, ಮೆತ್ತಗಿದ್ದಲ್ಲೇ ತಾನೆ ಮತ್ತೊಂದು ಕಲ್ಲು? ಜನರು ಎಚ್ಚೆತ್ತುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾದ ಸ್ಥಿತಿಗೆ ಭಾರತವನ್ನ ಭಾರತದ ರಾಜಕೀಯವೇ ತಂದಿಟ್ಟಿದೆ. ಆದ್ದರಿಂದ ಇನ್ನು ತಡಮಾಡಿ ಪ್ರಯೋಜನವಿಲ್ಲ. ತಮ್ಮೆಲ್ಲ ಅಂಧಾಭಿಮಾನಗಳನ್ನು, ಅರ್ಥವಿಲ್ಲದ ವೈಷಮ್ಯಗಳನ್ನು ಬದಿಗೊತ್ತಿ ರಾಷ್ಟ್ರೀಯ ಹಿತಾಸಕ್ತಿಗಾಗಿ, ಅನ್ನಕೊಟ್ಟ ನೆಲದ ಸಮಗ್ರತೆ ಮತ್ತು ಗೌರವವನ್ನು ಎತ್ತಿಹಿಡಿಯುವುದಕ್ಕಾಗಿ, ಭಾರತೀಯರು ಎದ್ದು ನಿಲ್ಲಲೇಬೇಕಾಗಿದೆ. ಸರ್ಕಾರದ ಕಿವಿ ಹಿಂಡದಿದ್ದರೆ, ಇದೇ ಸ್ಥಿತಿ ಮುಂದುವರೆಯುತ್ತದೆಯೇ ಹೊರತು, ಪರಿಹಾರ ದೊರಕುವುದಿಲ್ಲ. ಭಾರತ ನಿಂತ ಮೆಟ್ಟಲ್ಲಿ ಇಸ್ರೇಲ್ ಆಗಲು ಸಾಧ್ಯವಿಲ್ಲ, ಆದರೆ ಬದಲಾಗುವತ್ತ ದಾಪುಗಾಲಿಡಲಾದರೂ ಶುರು ಮಾಡಬಹುದಲ್ಲ?

Thursday, July 7, 2016

ಭಗವಂತನಿಂದ ಲೋಕಕ್ಕೆ ಬಂಪರ್ ಕೊಡುಗೆ, ಎಲ್ರಿಗೂ ಈ ವರ್ಷ ಒಂದು ಸೆಕೆಂಡ್ ಎಕ್ಸ್ಟ್ರಾ!


   
ಗಾಬರಿ ಆಗಬೇಡಿ. ವಿಜ್ನಾನವನ್ನ ಅದಕ್ಕೇ ’ರೋಚಕ’ ಅಂತ ಬಣ್ಣಿಸುವುದು. ಸಮಾಧಾನದಿಂದ ಓದಿ.
ವಿಜ್ನಾನ ಜಗತ್ತು ಅಧಿಕೃತ ಅಂತ ಒಪ್ಪಿಕೊಂಡು ಬಂದ ಕಾಲಗಣನೆಯ ವ್ಯವಸ್ಥೆಯೊಂದಿದೆ. UTC(Coordinated Universal Time) ಅಂತ. ಇಂತಹ ಅತೀ ಸೂಕ್ಷ್ಮ ಮತ್ತು ಕರಾರುವಕ್ಕಾದ ವ್ಯವಸ್ಥೆಯನ್ನು ಸಂಭಾಳಿಸಲು ವಿಜ್ನಾನಿಗಳು ಪರಮಾಣು ಗಡಿಯಾರ(Atomic Clock)ಗಳ ಮೊರೆಹೋಗುತ್ತಾರೆ. ಈ ಪರಮಾಣು ಗಡಿಯಾರಗಳ ನಿಖರತೆ ನಮ್ಮ ಊಹೆಗೂ ನಿಲುಕದ್ದು. ಪೂರ್ಣಚಂದ್ರ ತೇಜಸ್ವಿಯವರ ದೇಶಕಾಲದಲ್ಲೋ, ’ವಿಸ್ಮಯ ವಿಶ್ವ’ದಲ್ಲೋ ಹೈಸ್ಕೂಲಿನಲ್ಲಿರುವಾಗ ಯಾವಾಗಲೋ ಇವುಗಳ ಕುರಿತು ಓದಿ ನಿಬ್ಬೆರಗಾಗಿದ್ದೆ. ಸೀಜಿಯಮ್-೧೩೩ ಎಂಬ ಧಾತು(element)ವನ್ನು ಉಪಯೋಗಿಸಿ, ಸಾಮಾನ್ಯವಾಗಿ ಇವುಗಳನ್ನು ತಯಾರಿಸಿರುತ್ತಾರೆ. ಜಗತ್ತಿನ ಅತ್ಯಂತ ನಿಖರ ಸೀಜಿಯಮ್ ಗಡಿಯಾರಕ್ಕೆ ಒಂದು ಸೆಕೆಂಡ್ ಪೂರ್ಣವಾಗುವುದು , ತನ್ನೊಳಗಿನ ಅಣು 9,19,26,31,970 ಬಾರಿ ಎರಡು ಎನರ್ಜಿ ಲೆವೆಲ್ ಗಳ ನಡುವೆ ಜಿಗಿದಾಡಿ, ವಿಕಿರಣಚಕ್ರವನ್ನು ಪೂರ್ಣಗೊಳಿಸಿದಾಗ!!! ಹಾಗಾಗಿ ಇವುಗಳು ಎಷ್ಟು ಕರಾರುವಕ್ಕಾಗಿ ಇರುತ್ತವೆಯೆಂದರೆ, ಆಕಾಶಕಾಯಗಳು ತಮ್ಮ ಚಲನವಲನದಲ್ಲಿ one billionth of a second ಹೆಚ್ಹುಕಮ್ಮಿ ಮಾಡಿದರೂ ಇವು ವಿಜ್ನಾನಿಗಳಿಗೆ ಹೋಗಿ ಚಾಡಿ ಹೇಳಿಬಿಡುತ್ತವೆ! ತಲೆಕೆಡಿಸಿಕೊಂಡು, ಇತರರ ತಲೆಯನ್ನೂ ಕೆಡಿಸಬೇಕೆಂದು ಇಪ್ಪತ್ನಾಲ್ಕು ಗಂಟೆ ಹಪಹಪಿಸುತ್ತಿರುವ ವಿಜ್ನಾನಿಗಳು ಸುಮ್ಮನೆ ಬಿಡುತ್ತಾರಾ? ಅದೂ ಭೂಮಿಯೇ ತನ್ನ ಸುತ್ತುವಿಕೆಯಲ್ಲಿ ಸೆಕೆಂಡ್ ಗಳ ಎಡವಟ್ಟು ಮಾಡಿಕೊಂಡಿತು ಅಂದರೆ, ವಿಜ್ನಾನಿಗಳಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ, ಈ ಅತ್ಯಾಧುನಿಕ ಯುಗದಲ್ಲಿ ಇದೊಂಥರ ಆಕಾಶ ತಲೆ ಮೇಲೆ ಬಿದ್ದ ಹಾಗೆಯೇ ಅನ್ನಿ, ಯಾಕೆಂದರೆ ಭೂಮಿಯ ಸುತ್ತುವಿಕೆಯ ಏರುಪೇರು ನಮ್ಮ ಕಾಲಗಣನೆಯನ್ನೂ ಮಂಗಮಾಡಿಬಿಡುತ್ತದೆ! ನಾವು ಕಾಲಗಣನೆಯನ್ನು ಸರಿಮಾಡಿಕೊಳ್ಳದೇ ಉಪೇಕ್ಷಿಸಿಬಿಟ್ಟೆವು ಅಂದರೆ, ಸೂರ್ಯನ ಸ್ಥಾನಕ್ಕೂ ನಮ್ಮ ಕಾಲಗಣನಾ ವ್ಯವಸ್ಥೆಗೂ ಲಿಂಕೇ ತಪ್ಪಿಹೋಗುತ್ತೆ. ಸೌರಮಂಡಲದಲ್ಲಿ ಅವ್ಯಾಹತವಾಗಿ ಹರಿಯುತ್ತಿರುವ ಕಾಲ ಮತ್ತು ನಾವು ನಮ್ದೇ ಸರಿ ಅಂತ ಲೆಕ್ಕ ಮಾಡುತ್ತಿರುವ ಟೈಮೂ ಸಿಂಕೇ ಆಗುವುದಿಲ್ಲ.
    International Earth Rotation And Reference Systems Service(IERS) ದೂರಾತಿದೂರದ ಗ್ಯಾಲಾಕ್ಸಿಗಳಿಂದ ಬರುವ ಬೆಳಕು-ವಿಕಿರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಆಕಾಶಕಾಯಗಳ ಚಲನಾ ಸಮಯದ ಏರುಪೇರುಗಳನ್ನು ಲೆಕ್ಕಹಾಕುತ್ತದೆ. ಪರಮಾಣು ಗಡಿಯಾರಗಳ ಪ್ರಕಾರ ದಿನವೊಂದಕ್ಕೆ ೮೬೪೦೦ ಸೆಕೆಂಡ್ ಗಳು ಇರಬೇಕು. ಭೂಮಿ ತನ್ನ ಪಥದಲ್ಲಿ ೦.೯ ಸೆಕೆಂಡ್ ಅಥವಾ ಹೆಚ್ಹು ಏರುಪೇರು ಮಾಡಿಕೊಂಡರೆ, “ಈ ವರ್ಷ ಒಂದು ಸೆಕೆಂಡ್ ಎಕ್ಸ್ಟ್ರಾ ಸೇರಿಸಿಕೊಳ್ರಪೋ..” ಅಂತ IERS ಆಜ್ನೆ ಮಾಡುತ್ತೆ. ಇದನ್ನ ವೈಜ್ನಾನಿಕ ಪರಿಭಾಷೆಯಲ್ಲಿ leap second ಅಂತಾರೆ. ಅದನ್ನು ಅನುಭವಿಸುವ ಭಾಗ್ಯ ನಮಗೆ ಈ ವರ್ಷ ಬಂದಿದೆ. ಅಂದರೆ, ಈ ವರ್ಷ ಡಿಸೆಂಬರ್ ೩೧ರ ರಾತ್ರಿ 11:59 ಆದಮೇಲೆ 11:60 ಆಗಲಿದೆ, ನಂತರ ಹನ್ನೆರಡು ಗಂಟೆ ಆಗಲಿದೆ!! ಇತ್ತೀಚಿನ ಉದಾಹರಣೆಯಾಗಿ ೨೦೧೫ರ ಜುಲೈ ಮೂವತ್ತಕ್ಕೆ ಒಂದು ಲೀಪ್ ಸೆಕೆಂಡ್ ಸೇರಿಸಿದ್ದರು. ೧೯೭೨ರಿಂದ ಇದುವರೆಗೆ ಹೀಗೇ ೨೬ ಲೀಪ್ ಸೆಕೆಂಡ್ ಗಳನ್ನ ಸೇರಿಸಿಕೊಳ್ಳಲಾಗಿದೆ! ಯಾವುದೇ ಸೆಕೆಂಡ್ ಅನ್ನು ಕಾಲಗಣನೆಯಿಂದ “ನೀನು ಹೆಚ್ಹು, ನಮಗೆ ಬೇಡ” ಅಂತ ಇದುವರೆಗೆ ತೆಗೆದ ಘಟನೆ ಇಲ್ಲ. ಹೀಗೇ ಸೇರಿಸಿಕೊಂಡು, ನಾವು ಹೊಂದಿಸಿಕೊಂಡ ಟೈಮು ಪರಮಾಣು ಗಡಿಯಾರ ಹೇಳುವುದಕ್ಕಿಂತ ೩೬ ಸೆಕೆಂಡ್ ಹಿಂದಿದೆ! ಆದ್ದರಿಂದ “ಹೀಗೆಲ್ಲ ದಾರೀಲಿ ಹೋಗಿಬರೋ ಸೆಕೆಂಡುಗಳು ’ನಾನೂ ಬರ್ತೀನಿ’ ಅಂದರೆ ಸೇರಿಸಿಕೊಳ್ಳಬೇಡಿ, ಕಂಪ್ಯೂಟರ್ ಸಿಸ್ಟಮ್ ಗಳಿಗೆ ತೊಂದರೆಯಾಗುತ್ತೆ” ಅಂತ ಕೆಲವರ ಅಳಲು. “ನಿಮ್ಮ ಕಂಪ್ಯೂಟರ್ ಸಿಸ್ಟಮ್ ಗಳು ತಲೆಕೆಳಗಾಗದಂತೆ ಏನಾದ್ರೂ ಮಾಡಿಕೊಳ್ಳಿ ಅಂತಲೇ ಆರು ತಿಂಗಳ ಮೊದಲೇ ಲೀಪ್ ಸೆಕೆಂಡ್ ಸೇರಿಸುವುದರ ಬಗ್ಗೆ ಹೇಳುತ್ತಿದ್ದೇವೆ” ಅನ್ನುವುದು ವಿಜ್ನಾನಿಗಳ ಕಣ್ಣೊರೆಸುವಿಕೆ. ಅಷ್ಟಕ್ಕೂ, ಸೇರಿಕೊಳ್ಳದೇ ಏನು ಮಾಡಲು ಸಾಧ್ಯ? ಸೇರಿಸಿಕೊಳ್ಳದೇ ಸಾಗಿದರೆ ೨೧೦೦ನೇ ಇಸವಿಯ ಹೊತ್ತಿಗೆ ಸೂರ್ಯನ ಮತ್ತು ನಮ್ಮ ಕಾಲಕ್ಕೆ ಎರಡು ಮೂರು ನಿಮಿಷ ವ್ಯತ್ಯಾಸವಿದ್ದುಬಿಡುತ್ತೆ. ೨೭೦೦ರ ಹೊತ್ತಿಗೆ ಈ ವ್ಯತ್ಯಾಸ ಬರೋಬ್ಬರಿ ಅರ್ಧಗಂಟೆಯಾಗಿಬಿಡುತ್ತೆ! ಆದ್ದರಿಂದ ಕಳೆದ ನವೆಂಬರಿನಲ್ಲೇ ಈ ಟೈಮಿಗೆ ಒಂದು ಪಂಚಾಯಿತಿ ತೀರ್ಮಾನ ಮಾಡಿಬಿಡೋಣ ಅಂದುಕೊಂಡಿದ್ದ ವಿಜ್ನಾನಿಗಳು, ೨೦೨೩ರವರೆಗೆ ಲೀಪ್ ಸೆಕೆಂಡ್ ಗಳ ಬಗ್ಗೆ ದೂರೆತ್ತಬೇಡಿ, ಆಮೇಲೆ ಬೇಕಾದ್ರೆ ನೋಡೋಣ ಅಂದುಬಿಟ್ಟಿದ್ದಾರೆ!
    ಅದೆಲ್ಲಾ ಏನಾದ್ರೂ ಮಾಡ್ಕೊಂಡು ಹಾಳಾಗ್ ಹೋಗಿ, ನಮಗೆ ಪ್ರತೀವರ್ಷ ಒಂದು ದಿನ ಹೆಚ್ಹಿಗೆ ರಜೆ ಸಿಗುವ ಹಾಗೆ ಏನಾದ್ರೂ ಟೈಮ್ ಅಡ್ಜಸ್ಟ್ ಮಾಡೋಕೆ ಆಗತ್ತಾ ಸ್ವಲ್ಪ ನೋಡಿ ಪ್ಲೀಸ್ ಅಂತ ವಿಜ್ನಾನಿಗಳನ್ನ ಕೇಳಿಕೊಳ್ಳುತ್ತಾ....  

#ವಿಸ್ಮಯ_ವಿಜ್ನಾನ-2







Wednesday, July 6, 2016

JUNO !

   ಸೌರ ಮಂಡಲದ ಹಿರಿಯಣ್ಣನನ್ನೂ ಬಿಡಲಿಲ್ಲ ಮನುಷ್ಯ. ಮೊನ್ನೆ ಜುಲೈ ನಾಲ್ಕರ ರಾತ್ರಿ ಫೆಸಿಫಿಕ್ ವೇಳೆ ೮:೫೩ಕ್ಕೆ ಸರಿಯಾಗಿ, ಪಿಯಾನೋದಿಂದ ಹೊರಡುವ ಅತ್ಯುಚ್ಚ  D- Toneನಂತೆ, ೨.೩೨ ಕಿಲೋ ಹರ್ಡ್ಜ್ ನ ತರಂಗ ಮೊಳಗಿದಾಗ ಕ್ಯಾಲಿಫೋರ್ನಿಯಾ ದ  Jet Propulsion Laboratory ಹರ್ಷದ ಉದ್ಗಾರ."We conquered the Jupiter" ಅಂತ ಸಂತಸ ತೋಡಿಕೊಂಡ mission lead ಸ್ಕಾಟ್ ಬೋಲ್ಟನ್ . ಇದು ಗುರುಗ್ರಹವನ್ನು ಹಿಂಬಾಲಿಸುವ ಮೊದಲ ಪ್ರಯತ್ನವೇನು ಅಲ್ಲ ಬಿಡಿ. ೧೯೯೩-೨೦೦೫ರ ವರೆಗೆ 'ಗೆಲಿಲಿಯೋ ಮಿಷನ್' ಗುರುವನ್ನು ಸುತ್ತುಹಾಕುತ್ತಿತ್ತು. ಆದರೆ ಈ 'ಜುನೋ' ಅಂತಿಥ ಯೋಜನೆಯಲ್ಲ.
    ೧.೭ ಬಿಲಿಯನ್ ಮೈಲು! ಇದು ಗುರುಗ್ರಹದ ಸುತ್ತ ಕಕ್ಷೆಗೆ ತನ್ನನ್ನು ತಗುಲಿಹಾಕಿಕೊಳ್ಳಲು, ಕಳೆದ ಐದು ವರ್ಷದಿಂದ ಕ್ರಮಿಸಿರುವ ದೂರ! ೧.೧ ಬಿಲಿಯನ್ ಅಮೆರಿಕನ್ ಡಾಲರ್, ಇದು ನಾಸಾ ಜುನೋ ಮೇಲೆ ಸುರಿದ ಒಟ್ಟು ಮೊತ್ತ. ೩೭ ಬಾರಿ ಗುರುವಿನ ಕಕ್ಷೆ ಸುತ್ತಲಿರುವ ಜುನೋ, ಇಪ್ಪತ್ತು

ತಿಂಗಳ ಕಾಲ ತನಗೆ ವಹಿಸಿದ ಕೆಲಸ ಮಾಡಲಿದೆ. ಗುರುವಿನ one of the ಚಂದ್ರ, ಯುರೋಪಾ ದಲ್ಲಿ ಜೀವಿಗಳಿರುವ ಸಂಭವ ಇರುವುದರಿಂದ, ಅದರ ವಾತಾವರಣ ಕಲುಷಿತವಾಗಬಾರದೆಂದು, ೨೦೧೮ರಲ್ಲಿ ಗುರುಗ್ರಹದಲ್ಲೇ ಅಂತರ್ಗತವಾಗಲಿದೆ. ಗುರುಗ್ರಹ ಎಷ್ಟು ಅಗಾಧವಾದುದು ಎಂದರೆ, ಗುರುವಿನ ತೆಕ್ಕೆಗೆ ಬೀಳುವ ಮೊದಲು, ಈ ನೌಕೆ ಗುರುವಿನ ಮೋಡಗಳ ಮೇಲ್ಮೈಯಿಂದ ಬರೋಬ್ಬರಿ ೪೪೯೦ ಕಿಲೋಮೀಟರ್ ದೂರದಲ್ಲಿ ಹಾದುಹೋಗುವಾಗಲೂ, ನೌಕೆಗೆ ಕಾಣಬಹುದಾಗಿದ್ದ ಅರ್ಧ ಆಕಾಶವನ್ನು ಗುರುಗ್ರಹವೇ ಆವರಿಸಿಕೊಂಡುಬಿಟ್ಟಿತ್ತಂತೆ! ಎಲ್ಲ space explorations ಗಳಲ್ಲೂ ಸಾಮಾನ್ಯವಾಗಿರುವಂತೆ, ಗ್ರಹಗಳು ಮತ್ತು ಸೌರಮಂಡಲ ಹೇಗೆ ನಿರ್ಮಾಣವಾದವು ಎಂಬುದು ಮತ್ತು ಗುರು ತನ್ನಲ್ಲಿ ಎಷ್ಟು ನೀರನ್ನು ಹಿಡಿದಿಟ್ಟುಕೊಂಡಿರಬಹುದು ಎಂದು ಅಂದಾಜಿಸುವುದು ಇದರ ಗುರಿ. ಉಪಗ್ರಹ ಅಥವಾ ವ್ಯೋಮನೌಕೆಗಳ ಜೊತೆ ಏಗುವುದು ಅತ್ಯಂತ ಸೂಕ್ಷ್ಮ ವಿಚಾರ. ಅವುಗಳನ್ನು ತಯಾರಿಸುವುದರಿಂದ ಉಡಾಯಿಸುವವರೆಗೆ, ಅವುಗಳ ಪಥ, ವೇಗ, ಉತ್ಕರ್ಷಗಳನ್ನ ಲೆಕ್ಕಹಾಕಿ ನಿರ್ಧರಿಸುವವರೆಗೆ ಅತ್ಯಂತ ಕ್ಲಿಷ್ಟವಾದ ಕೆಲಸಗಳೇ. ಸ್ವಲ್ಪವೇ ಹೆಚ್ಚು ಕಮ್ಮಿಯಾದರೂ ಸಾವಿರಾರು ಕೋಟಿಯನ್ನು ಕೈಯ್ಯಾರೆ ತಗಂಡುಹೋಗಿ ಸಮುದ್ರಕ್ಕೆ ಎಸೆದು ಬಂದಹಾಗೆ. ಎಲ್ಲಾ ಮುಗಿದು ಇನ್ನೇನು ಕಕ್ಷೆ ಸೇರೇ ಬಿಟ್ಟಿತು ಅನ್ನುವಾಗ, ಎಂಜಿನ್ ಚಾಲೂ ಆಗುವಲ್ಲಿ ಎಡವಟ್ಟಾಯಿತು ಅಂದರೆ, ನೌಕೆ ಕಣ್ಣಿಗೆ ಕಾಣದೆ ಅನಂತಾಕಾಶದಲ್ಲಿ ಲೀನವಾಗಿಬಿಡಬಹುದು! ಹೆಚ್ಚು ಶಕ್ತಿ ಎಳೆದುಕೊಂಡು ಚಾಲು ಆದರೆ, ಹೋಗಿ ಗ್ರಹಕ್ಕೆ ಜಜ್ಜಿಕೊಂಡು ಬಿಡಬಹುದು! ಇಂತಹವುಗಳನ್ನು ದಾಟಿ ನೌಕೆ ಕಕ್ಷೆ ತಲುಪಿದೆ. ವಿಜ್ಞಾನಿಗಳ ಶ್ರಮಕ್ಕೆ, ಅನ್ವೇಷಣೆಗಳಿಗೆ ಫಲ ಸಿಗಲಿ ಎಂಬ ಆಶೆಯೊಂದಿಗೆ...
#ವಿಸ್ಮಯ_ವಿಜ್ಞಾನ- ೧
 (ಅಂದಹಾಗೆ ರೋಮನ್ ಪುರಾಣಗಳಲ್ಲಿ ಜ್ಯುಪಿಟರ್ ದೇವನ ಪತ್ನಿಯ ಹೆಸರು 'ಜುನೋ' ಅಂತೆ. ಅದಕ್ಕೆ, ಪಾಪ ಆ ನೌಕೆಗೂ ಅದೇ ಹೆಸರಿಟ್ಟಿದ್ದಾರೆ)

Saturday, June 11, 2016

'ಕೋಟಿ ಮನಸ್ಸು, ಒಂದು ಕನಸು'ಗಳಿಗೆ ಒಂದು ದಿಕ್ಕೂ ಸಿಕ್ಕು, ಅದಾಗಲೇ ಎರಡು ವರ್ಷ..!

    ಒಪ್ಪಿಕೊಳ್ಳೋಣ! ಇವತ್ತು ಚೀನಾ ಅಮೆರಿಕಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟು ಬೆಳೆದುನಿಂತಿದೆ. ಹಿರಿಯಣ್ಣನಿಗೊಂದು ಪರ್ಯಾಯ ಶಕ್ತಿಯಾಗಿ ಸೆಡ್ಡು ಹೊಡೆದಿದೆ. ಆದರೂ ಅದಕ್ಕೆ ಭಾರತದ ಬಗ್ಗೆ ಒಂದು ದೊಡ್ಡ ಹೂಟ್ಟೆಕಿಚ್ಚಿದೆ! ಜಗತ್ತೂ ಅಷ್ಟೇ, ಭಾರತದ ಮೇಲೆ ಒಂದು ಹಿಡಿ ಹೆಚ್ಚು ಭರವಸೆ ಇಟ್ಟಿದೆ, ಭಾರತದ ಕನಸುಗಳ ಮೇಲೆ ತುಸು ಜಾಸ್ತಿಯೇ ನಂಬಿಕೆ ಇಟ್ಟುಕೊಂಡಿದೆ! ಯಾಕೆ ಗೊತ್ತೇನು? The Human Resource, ಮಾನವ ಸಂಪನ್ಮೂಲ. ಚೀನಾದಲ್ಲೇನು ಕಮ್ಮಿ ಜನ ಇದ್ದಾರೆಯೇ? ಅಂತ ನಗಬೇಡಿ, ಇಲ್ಲ ಅಂತ ಯಾರು ಹೇಳಿದ್ದು? ಆದರೆ ಭಾರತದಲ್ಲಿ ಯುವ ಜನಾಂಗ ಅಧಿಕವಾಗಿದೆ. That makes all the difference. ಚೀನಾ ತನ್ನ ಕುಟುಂಬ ಯೋಜನೆಯ ಕಠಿಣ ನಿರ್ಧಾರದ ಒಂದು ಅಡ್ಡ ಪರಿಣಾಮವಾಗಿ, ವೃದ್ಧರ ದೇಶವಾಗಿ ಕುಂತಿದೆ. ಇತ್ತ ಭಾರತ ಯುವಶಕ್ತಿಯ ಕಾಮನಬಿಲ್ಲಾಗಿ  ಹೊಂಗನಸು ಬೀರುತ್ತಿದೆ. ಆದರೆ ಸೃಷ್ಟಿಯ ವಿಪರ್ಯಾಸವೆಂಬಂತೆ ಯುವ ಜನಾಂಗ ಬಿಸಿರಕ್ತದ ಮದದಲ್ಲಿ ದಾರಿ ತಪ್ಪುವ ಸಂದರ್ಭ ಹೆಚ್ಚು. ದೇಶವೊಂದಕ್ಕೆ ತನ್ನ ಯುವ ಜನಾಂಗ ಪೂರಕವೂ ಆಗಬಹುದು, ಮಾರಕವೂ ಆಗಬಹುದು. "ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗಿತ್ತು ವೀರದಂಡು" ಎಂಬಂತೆ, ಮುಂದಿರುವ ಗುರಿಯಕಡೆ ಮುಖಮಾಡಿಸಬಲ್ಲಂತ ಗುರುವೊಂದು ಯುವಶಕ್ತಿಗೆ ದಕ್ಕಿಬಿಟ್ಟರೆ, ಆಗ ಶಕ್ತಿಯ ನಾಗಾಲಾಟವನ್ನು ಹಿಡಿಯಲು ಯಾವುದಕ್ಕೂ ಸಾಧ್ಯವಾಗುವುದಿಲ್ಲ. ಕರ್ನಾಟಕದ ಕೆಲವು ಪ್ರಬುದ್ಧ ಯುವಮನಸ್ಸುಗಳಿಗೆ ಹೀಗನಿಸಿದ್ದೇ ತಡ, ಒಂದು ರಾಷ್ಟ್ರೀಯ ಬದ್ಧತೆಯ, ರಾಷ್ಟ್ರವಾದೀ ಧ್ಯೇಯಗಳ ಸಂಘಟನೆ ಒಂದು ರೂಪುತಾಳಿತು, 'ದಿ ಯುವಾ ಬ್ರಿಗೇಡ್"!.  ನೋಡುನೋಡುತ್ತಿದ್ದಂತೆ ಆ ಶುಭ್ರ ಮನಸ್ಸಿನ, ಶ್ರೇಷ್ಠ ಕನಸಿನ ಆ ಹಸುಗೂಸಿಗೆ ಮೊನ್ನೆ ಎರಡು ವರ್ಷವಾಗಿಬಿಟ್ಟಿತು.
       ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಮಾಡುವಲ್ಲಿ ಶ್ರಮಿಸಲು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 'ನಮೋ ಬ್ರಿಗೇಡ್' ರಚನೆಯಾಗಿತ್ತು. ಸೂಲಿಬೆಲೆ ಅವರೇ ಹೇಳುವ ಪ್ರಕಾರ, ಅದು "ಹುಟ್ಟುವಾಗಲೇ ಎಂದು ಸಾಯಬೇಕೆಂದು ನಿರ್ಧಾರ ಮಾಡಿದ್ದ ಕೂಸು". ನಮೋ ಪ್ರಮಾಣವಚನ ಸ್ವೀಕರಿಸಿ ಅಧಿಕೃತವಾಗಿ 'ಭಾರತದ ಪ್ರಧಾನಿ' ಎಂದು ಘೋಷಣೆಯಾದ ಮೇಲೆ, ಬ್ರಿಗೇಡ್ ನ "Mission Completed". ನಮೋ ಬ್ರಿಗೇಡ್ ನ ವಿಸರ್ಜಿಸುವ ಯೋಚನೆಯಲ್ಲಿದ್ದಾಗ ಚಕ್ರವರ್ತಿ ಅವರಿಗೆ ಆಪ್ತ ರಾಜಕಾರಣಿಯೊಬ್ಬರು ಕರೆ ಮಾಡಿ " ನೀವು ಯುವಕರಲ್ಲಿ ಒಮ್ಮೆ ಸಂಘಟನೆಯ ಉತ್ಸಾಹ ಮೂಡಿಸಿ, ಹೀಗೆ ನಡು ನೀರಿನಲ್ಲಿ ಕೈ ಬಿಡುತ್ತಿರುವುದು ಸರಿಯಲ್ಲ" ಅಂದರಂತೆ. ಅದಕ್ಕೂ ಮೊದಲೂ ಈ ಯೋಚನೆ ತಂಡದಲ್ಲಿ ಹೊಳೆದಿತ್ತು. ಅಲ್ಲದೇ "ಸಮಾಜದ ಕೂಗನ್ನ, ಕನಸುಗಳನ್ನ ಸಮರ್ಥವಾಗಿ ಪ್ರಧಾನಿಗೆ ಮುಟ್ಟಿಸುವ ಶಕ್ತಿ"ಯಾಗಿ ಸಂಘಟನೆಯೊಂದರ ಅವಶ್ಯಕತೆಯೂ ಇತ್ತು.                 
     ಇವೆಲ್ಲದರ ಫಲವಾಗಿ ಜನ್ಮ ತಾಳಿದ್ದು, 'ಯುವಾ ಬ್ರಿಗೇಡ್'. ಯುವಾ ಬ್ರಿಗೇಡ್ ಆರಂಭದಲ್ಲೇ ಎಷ್ಟು ಯೋಜಿತವಾಗಿ ರೂಪುಗೊಂಡಿತ್ತು ಅಂದರೆ, ಯುವಜನಾಂಗದಲ್ಲಿ ಇರಬೇಕಾದ ದೂರದೃಷಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಒಂದೊಂದಕ್ಕೂ ಒಂದೊಂದು ಪ್ರತ್ಯೇಕ ಶಾಖೆಯನ್ನೇ ನೀಡಲಾಗಿತ್ತು. ಮಹಾರಕ್ಷಕ್, ಡಿಜಿಟಲ್ ಸನ್ಸ್ಕಾರ್, ವಿತ್ತಶಕ್ತಿ, ಮತ್ತು ಸದ್ಭಾವನಾ ಎಂದು.  ತನ್ನ ಕುಟುಂಬವನ್ನು ತ್ಯಜಿಸಿ ನಮಗಾಗಿ ಹಗಲಿರುಳು ಬಾಂಬು ಗ್ರೆನೇಡ್ ಗಳ ನೀರೀಕ್ಷೆಯಲ್ಲಿ ಗಡಿಯಲ್ಲಿ ನಿಂತಿರುವ ಸೈನಿಕನ ಕುಟುಂಬಕ್ಕೆ "ನಿಮಗಾಗಿ ನಾವಿದ್ದೇವೆ" ಅಂತ ಹೇಳುವುದು ಮಹಾರಕ್ಷಕರ ಕೆಲಸ. ಸೇವೆ ಮಾಡಿಬಂದ ಸೈನಿಕರಿಗೆ ಗೌರವ ಅರ್ಪಿಸುವುದು ಕೂಡ. ವಿತ್ತಶಕ್ತಿ ಮತ್ತು ಸದ್ಭಾವನಾ ಸಮಿತಿಗಳು ಯುವಜನತೆಯಲ್ಲಿ entrepreneurship ಅನ್ನು ಬೆಳೆಸುವ ಮುಖ್ಯ ಗುರಿ ಹೊಂದಿದ್ದವು. ಯಾರದೋ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ ತನ್ನ ಕಾಲಮೇಲೆ ತಾನು ನಿಲ್ಲುವಂತೆ ಯುವಶಕ್ತಿಯನ್ನು ರೂಪುಗೊಳಿಸುವಿಕೆಗೆ ಈ ತಂಡ ಮೀಸಲು. ಹೊಸ ಅನ್ವೇಷಣೆಗಳನ್ನ ಪ್ರೋತ್ಸಾಹಿಸಿ, ಅದಕ್ಕೆ ಬೇಕಾದ ಪೇಟೆಂಟ್, ಕಾಪಿರೈಟ್ ಗಳಿಗೆ ಸಹಕರಿಸಿ, ಕಿಂಗ್ ಮೇಕರ್ ಆಗಿ ಅದು ಕೆಲಸ ಮಾಡಬೇಕು. ಇನ್ನು ಹೆಸರೇ ಹೇಳುವಂತೆ ಡಿಜಿಟಲ್ ಸನ್ಸ್ಕಾರ್ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಸಮಾಜದ ಅಭಿಪ್ರಾಯವನ್ನು ರೂಪಿಸಲು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಯತ್ನಿಸುವ ಜವಾಬ್ದಾರಿ. ಆ ಮೂಲಕ ರಾಷ್ಟ್ರೀಯತೆಯನ್ನು ಪಸರಿಸುವ ಪ್ರಯತ್ನ.
ಇವೆಲ್ಲ ಆ ನಾಲ್ಕು ಶಾಖೆಗಳ ಸ್ಥೂಲ ಪರಿಚಯ. ನಮಗೆ ಯುವಾ ಬ್ರಿಗೇಡ್ ಇಷ್ಟವಾಗೋದು ಆ ಕಾರಣಕ್ಕೆ! ಗುರಿಯನ್ನು ನಿರ್ಧರಿಸಲಾರದವ, ಅದನ್ನು ಸಾಧಿಸಲಾರ ಕೂಡ.

ಚಕ್ರವರ್ತಿ ಅಣ್ಣನವರ ನೇತೃತ್ವ ಅಂದಮೇಲೆ, ಆ ಸಂಘಟನೆ ಜನರಲ್ಲಿ consciousness ಮೂಡಿಸುವಲ್ಲಿ ಕೊಡುಗೆ ನೀಡಲೇಬೇಕು.  ಅವರು ಪತ್ರಿಕೆಗಳಿಗೆ ಬರೆಯುವ ಅಂಕಣಗಳಿಂದ ಹಿಡಿದು ಜಾಗೊ ಭಾರತ್ ನ ವರೆಗೆ ಎಲ್ಲವೂ ಜನಜಾಗೃತಿಯನ್ನೇ ಜೀವಾಳ ಮಾಡಿಕೊಂಡಿರುವ ಚಟುವಟಿಕೆಗಳು. ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪಿಸುವ ಸಲುವಾಗಿ ಯುವಾ ಬ್ರಿಗೇಡ್ ಹಮ್ಮಿಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಆ ತಂಡ ಪಟ್ಟ ಶ್ರಮ ಎರಡೂ ಅಮೋಘವಾದವು. ಸರ್ಕಾರ ಉದ್ದೇಶಪೂರ್ವಕವಾಗಿ ಬೇಡವೆಂದು 'ಮರೆತಿದ್ದ' ಕಾರ್ಗಿಲ್ ವಿಜಯ ದಿವಸದಿಂದ ಹಿಡಿದು ಸ್ವಂತದ ಬಗ್ಗೆ ಕಿಂಚಿತ್ತೂ ಯೋಚಿಸದೆ ಈ ಮಣ್ಣಿಗಾಗಿ ರಕ್ತ ಕೊಟ್ಟ ಹುತಾತ್ಮರ ದಿನಾಚರಣೆ-ಜಯಂತಿಗಳವರೆಗೂ ವಿಜೃಂಭಿಸಿದ್ದು ದೇಶಭಕ್ತಿಯೇ! ಯುವದಿನ ಎಂದು ಆಚರಿಸಲ್ಪಡುವ ವಿವೇಕಾನಂದರ ಜಯಂತಿಯಂದು, ಪ್ರತೀ ಊರಿನಲ್ಲೂ ಯುವಜನರನ್ನು ಒಗ್ಗೂಡಿಸಿ, ಅವರಲ್ಲಿ ಸ್ಫೂರ್ತಿ ತುಂಬಿ, ಅವರವರ ಊರುಗಳಲ್ಲಿ ವಿವೇಕಾನಂದರ ಕುರಿತು ಉಪನ್ಯಾಸ ನೀಡುವಂತೆ ಮಾಡಿತ್ತು ಯುವಾ ಬ್ರಿಗೇಡ್. " ಈ ಜಗತ್ತಿನಲ್ಲಿ, ಕೊನೆಯ ಮಾನವ ತಾನೂ ದೇವರಲ್ಲೊಂದು ಅಂತ ತಿಳಿಯುವವರೆಗೆ, ನಾನು ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುತ್ತೇನೆ" ಎಂದು ಹೇಳಿದ್ದ ಯೋಗಿವರ್ಯನ ಮಾತು ಅಷ್ಟರ ಮಟ್ಟಿಗೆ ಸಾರ್ಥಕ್ಯ ಕಂಡಿತ್ತು!
    "ಎಲ್ಲರೂ ಹೇಳುತ್ತಾರೆ, ಆದರೆ ನಾವು ಮಾಡಿ ತೋರಿಸುತ್ತೇವೆ" ಎಂಬುದು ಯುವ ಬ್ರಿಗೇಡ್ ನ ಗುಣಲಕ್ಷಣಗಳಲ್ಲಿ ಒಂದು. ಕೆರೆಬತ್ತಿಸಿ ಸೈಟು ಮಾಡುವ, ನುಂಗಿ ನೀರ್ಕುಡಿದು ನಂತರ ಅಂತರ್ಜಲಕ್ಕೇ ಕನ್ನ ಹಾಕುವ ಕೊಳವೆಬಾವಿಗಳನ್ನು ತೋಡುವ ಈ ಸಮಾಜದ ಮಧ್ಯೆ ಯುವಾ ಬ್ರಿಗೇಡ್ ಕೊಂಚ ಪ್ರೌಢವಾಗಿ ವರ್ತಿಸಿತು.  ಬೇಸಿಗೆಯಲ್ಲಿ ಹೂಳು ತೆಗೆಯದೇ, ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ, ನಂತರ ಬೇಸಿಗೆಯಲ್ಲಿ ನೀರಿಲ್ಲ ಅನ್ನುವ ಗ್ರಾಮ ಪಂಚಾಯಿತಿ, ಮುನ್ಸಿಪಾಲಿಟಿಗಳು ಮಾಡಲಾಗದ ಕನಸನ್ನು ಯುವಾ ಬ್ರಿಗೇಡ್ ನ ಯುವಶಕ್ತಿ ಶುರುಹಚ್ಚಿಕೊಂಡಿತು! #ಜಲಜೀವನ ಎಂಬ ಅಭಿಯಾನ ಶುರುಮಾಡಿ, ಅದೇ ಊರಿನ ಹುಡುಗರ ಒಗ್ಗೂಡಿಸಿ ಊರಿನ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಶುರುವಿಟ್ಟುಕೊಂಡಿತು. ಹೋಬಳಿ,ತಾಲೂಕು, ಜಿಲ್ಲೆ ಎಂಬ ಭೇದವಿಲ್ಲದೆ , ಅಭಿಯಾನ ವೇಗ ಕಂಡುಕೊಂಡಿತು. ಯುವಾ ಬ್ರಿಗೇಡ್ ನ ಪ್ರೋತ್ಸಾಹ ಎಷ್ಟಿತ್ತು ಅಂದರೆ, ಯಾವ ಯುವಕರು ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದರೋ, ಅವರು ನಾ ಮುಂದು ತಾ ಮುಂದು ಅಂತ ಬಂದು ಊರ ಕೆರೆಯಲ್ಲಿ ಮಣ್ಣು ಹೊತ್ತರು. ಸರ್ಕಾರಕ್ಕಿಂತ ಚೆನ್ನಾಗಿ ಸಾವರ್ಜನಿಕರು ಕೆಲಸ ಮಾಡಬಲ್ಲರು ಎಂದು ತೋರಿಸಿಕೊಟ್ಟಿತು ಯುವಾ ಬ್ರಿಗೇಡ್. Don't underestimate the power of the common man ಅನ್ನುವ ರೀಲ್ ಡೈಲಾಗ್ ಅನ್ನು, ರಿಯಲ್ ಆಗೂ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿದರ್ಶನದ ಸಮೇತ ತೋರಿಸಿತು. ಯುವಾ ಬ್ರಿಗೇಡ್ ಸ್ವಚ್ಛಮಾಡುವ ಮುನ್ನ "ಇದೂ ಒಂದು ಕಲ್ಯಾಣಿನಾ?" ಅಂತ ಕೇಳಬಹುದಾಗಿದ್ದ ಕಲ್ಯಾಣಿಗಳಲೂ ಈಗ ನೀರಿನ ಪಸೆಯೊಡೆದಿದೆ. ಜನಗಳ ಕಣ್ಣಲ್ಲಿ ಖುಷಿ ಜಿನುಗಿದೆ. ಯುವಾ ಬ್ರಿಗೇಡ್ ನ ಕೆಲಸ ಸ್ವತಃ ಮೋದಿಯವರನ್ನೂ ಮೋಡಿ ಮಾಡಿದೆ.
ಇದೇ ಸಾಲಿಗೆ ಸೇರುವ ಕೆಲಸಗಳಲ್ಲಿ ಸಸಿ ನೆಡುವ ಯೋಜನೆ ಕೂಡ ಒಂದು.
       ನರೇಂದ್ರಮೋದಿಯವರ ಕನಸಿಗೆ ಹೆಗಲುಕೊಡುವುದು ಅಂದರೆ ಬರಿ ಕಾಂಗ್ರೆಸ್ ಅನ್ನು ನಿಂದಿಸುತ್ತಾ ಕೂರುವುದಲ್ಲ. ಫೇಸ್ ಬುಕ್ ನಲ್ಲಿ ತಾಸಿಗೊಂದು ಸ್ಟೇಟಸ್ ಅಪ್ಲೋಡ್ ಮಾಡುವುದೂ ಅಲ್ಲ ಎಂಬುದನ್ನು ಯುವಾ ಬ್ರಿಗೇಡ್ ಸಮರ್ಥವಾಗಿ ತೋರಿಸಿಕೊಟ್ಟಿದೆ. ನಮಗೆ ಯುವಾ ಬ್ರಿಗೇಡ್ ಆಪ್ತವಾಗೋದೇ ಅದರ ಸಮಾಜಮುಖೀ ಧೋರಣೆಗೆ, ಅದರ intense ಚಟುವಟಿಕೆಗೆ, ಅದರ ಅರ್ಪಿಸಿಕೊಳ್ಳುವಿಕೆಗೆ, ಅದರ ನಿಸ್ವಾರ್ಥ ನಿಲುವಿಗೆ. ಇವೆಲ್ಲಾ ಕಾರಣಗಳಿಗಾಗಿಯೇ,ನಮೋ ಬ್ರಿಗೇಡ್ ಕೂಡ ಸೆಳೆಯಲಾಗದ ನನ್ನನ್ನು, ಯುವಾ ಬ್ರಿಗೇಡ್ ಸೆಳೆದಿದೆ! You don't need power to make it happen, what you need is just the 'Will' ಎಂಬುದನ್ನ ರುಜುಮಾಡಿ ನಮ್ಮ ಕಣ್ಣ ಮುಂದಿಟ್ಟಿದೆ.

         ನಾನೇನನ್ನು ಕೊನೆಯಲ್ಲಿ ಹೇಳಬೆಕಿತ್ತೋ, ಅದನ್ನ ಮೊದಲೇ ಹೇಳಿಬಿಟ್ಟಿದ್ದೇನೆ. ಯುವಾ ಬ್ರಿಗೇಡ್ ಒಂದು ರಾಜಕೀಯ ಸಂಘಟನೆ ಅಲ್ಲ. ಸರ್ಕಾರೇತರ ಅಂತ ಬಾಯಲ್ಲಿ ಹೇಳಿಕೊಂಡು, ಬರೀ ರಾಜಕಾರವನ್ನೇ ಮಾಡುವಂತಹ ಕೆಲವು ಎನ್ ಜಿ ಒ ಗಳ ಜಾತಿಯೂ ಅಲ್ಲ. ಭಾರತ ವಿಶ್ವಗುರು ಆಗಬೇಕಾದರೆ, ಅದರ ಯುವಪುತ್ರರು ಎದ್ದು ನಿಲ್ಲಬೇಕು, ಅವರಿಗೆಲ್ಲ ಒಂದು ಅದಮ್ಯ ಸ್ಫೂರ್ತಿ ಬೇಕು ಎಂಬ ಕಾರಣಕ್ಕೆ ಸ್ಥಾಪಿತವಾದದ್ದು. ಪ್ರತಿಯೊಬ್ಬನೂ ದೇಶದ ಭಾರವೆಲ್ಲ ತನ್ನ ಮೇಲೆ ಬಿದ್ದಿದೆ ಎಂಬ ಭಾವನೆಯಿಂದ ಕೆಲಸ ಮಾಡಿದರೆ, ದೇಶ ವಿಶ್ವಗುರುವಾಗುತ್ತೆ ಎಂದು ನುಡಿದಿದ್ದರು ವಿವೇಕಾನಂದರು. ಪ್ರತಿಯೊಬ್ಬನಲ್ಲೂ ಅಂಥ ಭಾವನೆ ಮೂಡಿಸಬೇಕು ಅಂತ ಶ್ರಮಿಸುತ್ತಿರುವ ಸಂಸ್ಥೆ. "ಸೇವೆ ಮುಗಿಸಿದ ಯೋಧನೊಬ್ಬನನ್ನು ಅವನ ಊರಿನ ಜನರ ಮುಂದೆ ಸನ್ಮಾನಿಸಿದರೆ, ಅವನಿಗೆ ಎಷ್ಟು ಹೆಮ್ಮೆ ಆಗುತ್ತೆ ಅಲ್ವಾ?" ಅಂತ ಚಕ್ರವರ್ತಿ ಅವರು ಯುವಾ ಬ್ರಿಗೇಡ್ ನ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರು. ಅದೇ ರೀತಿ, ರಾಷ್ಟ್ರಕ್ಕಾಗಿ ನಾವು ಅರ್ಪಿತ ಎಂದು ಹಗಲಿರುಳು ದುಡಿಯುತ್ತಿರುವ ಗುಂಪೊಂದಕ್ಕೆ, "ನಿಮ್ಮ ಅರ್ಪಣೆಗೆ, ನಮ್ಮ ಹೃತ್ಪೂರ್ವಕ ಧನ್ಯವಾದ" ಅಂತ ಹೇಳಿದ್ರೆಅವರಿಗೆ ಎಷ್ಟು ಹೆಮ್ಮೆಯಾಗುತ್ತೆ ಅಲ್ವಾ? ಅದಕ್ಕೇ, ಈ ಲೇಖನ!
                                      ~ಸಂಕೇತ್ ಡಿ ಹೆಗಡೆ
                                                        Twitter:@SankethHutgar
Facebook: Facebook.com/SankethDHegde