Powered By Blogger

Sunday, March 20, 2016

ಸಾವರ್ಕರ್ ಉಗ್ರಗಾಮಿ ಅಂದವರನ್ನು ಇತಿಹಾಸ ಹೇಗೆ ತಾನೆ ಕ್ಷಮಿಸೀತು?

ಅಹಿಂಸೆಯ ಪ್ರತಿಪಾದಕರಿಗೆ ಸಂಪೂರ್ಣ ಗೌರವದಿಂದ ನಾನೊಂದು ಮೂಲಭೂತ ಪ್ರಶ್ನೆ ಕೇಳಬಯಸುತ್ತೇನೆ. ನಿಮಗ್ಯಾಕೆ ಹಿಂಸೆ ಮತ್ತು ಸ್ವರಕ್ಷಣೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ? ಎಂದು. ಹಿಂಸೆ ಅಪ್ರಚೋದಕವಾದ ಕ್ರೌರ್ಯ. ಸ್ವರಕ್ಷಣೆ ಹಿಂಸೆಯಲ್ಲ, ಅದೊಂದು ಅನಿವಾರ್ಯದ ಪ್ರತಿಕ್ರಿಯೆ. ಶಾರ್ಕ್ ಮೀನೊಂದು ಸಣ್ಣ ಮೀನುಗಳನ್ನು ತಿನ್ನಲು ಬಂದರೆ, ಸಣ್ಣ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಶಾರ್ಕ್ ನ ಮೇಲೇ ದಾಳಿ ಮಾಡುತ್ತವೆ. ಅದು ಹಿಂಸೆಯೇನು? ಅಪರಿಚಿತನೊಬ್ಬ ಬೆಕ್ಕುಮರಿಯೊಂದನ್ನು ಬಲವಂತವಾಗಿ ಎತ್ತಿಕೊಳ್ಳಹೋದರೆ ಪರಚಿ ಹಾಕುತ್ತೆ. ಸುಂದರವಾಗಿ ಕಟ್ಟಿಕೊಂಡ ಜೆನೂಗೂಡಿಗೋ, ಕಷ್ಟಪಟ್ಟು ಕಟ್ಟಿಕೊಂಡ ಇರುವೆ ಗೂಡಿಗೋ ಹೋಗಿ ಒಂದು ಗುದ್ದು ಕೊಡಿ ನೋಡೋಣ. ಸಾಯುವಂತೆ ಕಚ್ಚಿ ಕಳಿಸುತ್ತವೆ. ಇವೆಲ್ಲ ನಿಮಗೆ ಹಿಂಸೆಯಂತೆ ಕಾಣುವುದೇನು? "Struggle For Existence" ಎಂದು ಡಾರ್ವಿನ್ ಹೇಳಿದ್ದು ಇಂಥವಕ್ಕೇ!
     ಸ್ವಾತಂತ್ರ್ಯ ಚಳುವಳಿಯಲ್ಲಿ ಮಂಗಲ್ ಪಾಂಡೆಯಿಂದ ಹಿಡಿದು ನೇತಾಜಿಯವರೆಗೂ ಮಾಡಿದ್ದು ಅದನ್ನೇ, the Struggle For Existence. ನೀವವರನ್ನು ಹಾದಿ ತಪ್ಪಿದ ದೇಶಭಕ್ತರು ಅಂತ ಅನಾಯಾಸವಾಗಿ ಅತ್ಲಾಗಿಡಲು ಬರುವುದಿಲ್ಲ ಸ್ವಾಮಿ. An eye for an eye makes the whole world blind ಅನ್ನುವುದು ಸತ್ಯ. ಆದರೆ It is better to be blind in independence than being sighted in captivity. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂಬುದೂ ಅಷ್ಟೇ ಸತ್ಯ. ಒಬ್ಬೊಬ್ಬರು ಒಂದೊಂದನ್ನ ನಂಬಿದರು ಬಿಡಿ. ನಿಮಗೇನು ಅಲವರಿಕೆ? ಅಷ್ಟಕ್ಕೂ ಮುಳ್ಳನ್ನು ಮುಳ್ಳಿನಿಂದ ತೆಗೆಯುವುದೇ ಹೆಚ್ಚು ನೈಸರ್ಗಿಕ. ಪ್ರಕೃತಿ ಜೀವಿಗಳಿಗೆ ಹೇಳಿಕೊಟ್ಟಿದ್ದು ಅದನ್ನೇ, ಅಹಿಂಸಾಮಾರ್ಗವನ್ನಲ್ಲ.  ಅಹಿಂಸೆಯನ್ನು ಸ್ವಾತಂತ್ರ್ಯದ ಮುನ್ನ ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್, ಯಾಕೆ ಸ್ವಾತಂತ್ರ್ಯದ ನಂತರ ಸೈನ್ಯವನ್ನು ಅಸ್ತಿತ್ವದಲ್ಲಿಟ್ಟಿರಿ. ಸ್ವಾತಂತ್ರ್ಯದ ಮರುವರ್ಷವೇ ಬಂದಿತ್ತಲ್ಲ ಕಾಲು ಕೆರೆದುಕೊಂಡು ಯುದ್ಧಕ್ಕೆ ಪಾಕಿಸ್ತಾನ? ಆಗ ಉಪವಾಸ ಕೂರಬೇಕಿತ್ತು ಹೋಗಿ ಗಡಿಯಲ್ಲಿ. ಅಹಿಂಸೆಯ ಬಗ್ಗೆ ದಿನಗಟ್ಟಲೆ ಭಾಷಣ ಕೊರೆಯುವ ನೀವು, ಆಗ ಯೋಧರನ್ನೇಕೆ ಕಳಿಸಿದಿರಿ? ನಿಮ್ಮ ಅಹಿಂಸೆ ಎಲ್ಲಾ ಕಾಲದಲ್ಲೂ ಕೆಲಸಕ್ಕೆ ಬರುವುದಿಲ್ಲ ಸ್ವಾಮಿ. ಹಲ್ಲು ಮುರಿದ ಹಾವನ್ನು ಪೋಕರಿಯೂ ನೇತಾಡಿಸಿಕೊಂಡು ಓಡಾಡುತ್ತಾನೆ. ಗಾಂಧೀಜಿಯವರನ್ನು ಹೃದಯದಲ್ಲಿಟ್ಟು ಪೂಜಿಸುವವನು ನಾನು. ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನಾಡುವ ಸಂಘಿಗಳ ವಿರುದ್ಧ ಉಗ್ರಪ್ರತಿಕ್ರಿಯೆಗಳನ್ನು ಬರೆದವನು ನಾನು. ಹಂಗಂತ ಕ್ರಾಂತಿಕಾರಿಗಳನ್ನು ದ್ವೇಷಿಸಬೇಕೇನು?
     ಪಾಪ, ಕಾಂಗ್ರೆಸ್ ಮತ್ತು ಎಡಪಂಥೀಯರಿಗೆ ಸಾವರ್ಕರ್ ಅಂದರೆ ಹಳೆ ಜನ್ಮದ ದ್ವೇಷ. ಬ್ರಿಟಿಷರನ್ನು ಎಷ್ಟು ದ್ವೇಷಿಸಿದ್ದರೋ, ಅದಕ್ಕಿಂದ ಒಂದು ಹಿಡಿ ಹೆಚ್ಚಾಗಿ ಸಾವರ್ಕರ್ ರನ್ನು ದ್ವೇಷಿಸುತ್ತಾ ಬಂದಿದ್ದಾರೆ. ಸಾವರ್ಕರ್ ರನ್ನು ಗಾಂಧೀ ಹಂತಕ ಎಂಬಂತೆ ಬಿಂಬಿಸಲಾಯಿತು. ಸಾವರ್ಕರ್ ಗೆ ಸಾಧ್ಯವಾದಷ್ಟು ತೊಂದರೆಯಾಗುವಂತೆ ನೆಹರು ನೋಡಿಕೊಂಡರು. ಅವರ ಮನೆಯ ಮೇಲೆ ಕಲ್ಲಿನ ದಾಳಿಯಾಯಿತು. ಆದ ಗಾಯಕ್ಕೆ, ಅವರ ತಮ್ಮ ಲೋಕ ತ್ಯಜಿಸಬೇಕಾಯಿತು. ಕೊನೆಗೆ ಸಾವರ್ಕರ್ ವಿಧಿವಶರಾದಾಗ ಒಂದು ಶವಪೆಟ್ಟಿಗೆ ಸಿಗಲೂ ಕಷ್ಟವಾಗುವಂತೆ ನೋಡಿಕೊಳ್ಳಲಾಯಿತು. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಕೇಂದ್ರ ಮಂತ್ರಿ ಮಣಿಶಂಕರ್ ಅಯ್ಯರ್ ಅಂಡಮಾನ್ ಗೆ ಹೋದಾಗ, ಅಲ್ಲಿ ಸಾವರ್ಕರ್ ರನ್ನು ದಶಕದ ಕಾಲ ಇಟ್ಟಿದ್ದ ಸೆಲ್ಲುಲಾರ್ ಜೈಲಿಗೆ ಭೇಟಿಕೊಟ್ಟು ನಮನ ಅರ್ಪಿಸಲು ನಿರಾಕರಿಸಿದರು. ಇವರ ನಮನ ಯಾರಿಗೆ ಬೇಕು? ಆದರೆ, ಸಾವರ್ಕರ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರು. ಅಲ್ಲಿದ್ದ ಸಾವರ್ಕರ್ ಹೇಳಿಕೆಯನ್ನು ತೆಗೆದು ಗಾಂಧೀಜಿಯವರ ಹೇಳಿಕೆಯನ್ನು ಸ್ಥಾಪಿಸಲು ಆಜ್ಞಾಪಿಸಿದರು. ಮೊನ್ನೆ INCಯ ಅಧಿಕೃತ facebook ಪುಟ, "ಯಾವಾಗ ಚಂದ್ರಶೇಖರ್ ಅಜಾದ್ ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದರೋ, ಆಗ ಸಾವರ್ಕರ್ ಬ್ರಿಟೀಷರ ಬಳಿ ಕ್ಷಮೆಗೆ ಅಂಗಲಾಚುತ್ತಿದ್ದರು. ಅಜಾದ್ ಅಸಲಿ,ಸಾವರ್ಕರ್ ನಕಲಿ"  ಎಂಬ ಹಾಸ್ಯಾಸ್ಪದ ಪೋಸ್ಟ್ ಒಂದನ್ನು ಪ್ರಕಟಿಸಿತು.
     ರೀ ಶತದಡ್ಡರೇ, ನೀವು ಈಗ "ಸಾವರ್ಕರ್ ಕ್ಷಮೆ ಕೇಳಬಾರದಿತ್ತು" ಅಂದರೆ ಸಾವರ್ಕರ್ ಜೈಲಿಗೆ ಸೇರುವ ಮುನ್ನ ಮಾಡಿದ ಕೃತ್ಯಗಳು ಸರಿಯಾಗಿದ್ದವು ಅಂತ ನೀವು ಒಪ್ಪಿಕೊಂಡಂತಾಗುತ್ತೆ. ಅಂದರೆ ಅವರು ಮಾಡಿದ, ಮಾಡಿಸಿದ ಬ್ರಿಟೀಷ್ ದುರುಳರ ಹತ್ಯೆ, ಸಿಡಿಸಿದ ಬಾಂಬುಗಳು, ಎಬ್ಬಿಸಿದ ಗಲಾಟೆಗಳು ಇವೆಲ್ಲ ಸರಿ ಅಂತ ಒಪ್ಪಿಕೊಂಡತಾಗುತ್ತದೆ. ಅಷ್ಟಕ್ಕೂ ಅಹಿಂಸೆಯ ಪರಮ ಪ್ರತಿಪಾದಕರಲ್ಲವೇ ನೀವು? ಸಾವರ್ಕರ್ "ನನ್ನದು ತಪ್ಪು ದಾರಿ ಎಂಬುದು ನನಗೆ ಅರಿವಾಗಿದೆ. ನಾನು ಬದಲಾಗಿದ್ದೇನೆ. ನನ್ನ ಬಿಟ್ಟುಬಿಡಿ. ಇದರಿಂದ ಕ್ರಾಂತಿ ಅನ್ನುವ ತಪ್ಪುದಾರಿಗಿಳಿದಿರುವ ಯುವಕರೂ ಅದರಿಂದ ವಿಮುಖರಾಗುತ್ತಾರೆ" ಅಂತ ಬ್ರಿಟೀಷರಿಗೆ ಬರೆದ ಪತ್ರವನ್ನು ಹಿಡಕೊಂಡು ಯಾಕೆ ಅವರನ್ನು ಬಯ್ಯುತ್ತೀರಿ?
ಸಾವರ್ಕರ್ ಆ ರೀತಿಯ ಪತ್ರಗಳನ್ನು ಬರೆದದ್ದು ಒಂದು strategic move. ರಾಹುಲ್ ಗಾಂಧಿಯಂಥ ಮೇಧಾವಿಗಳನ್ನು ನಾಯಕನನ್ನಾಗಿಟ್ಟುಕೊಂಡಿರುವ ನಿಮ್ಮಿಂದ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಂತೆ ನಿರೀಕ್ಷಿಸುವುದು ನಮ್ಮ ಮೂರ್ಖತನವಾದೀತು. "ಕ್ರಾಂತಿಯ ಹಾದಿ ಹಿಡಿದು ತಪ್ಪುಮಾಡಿಬಿಟ್ಟೆ" ಅಂತ ಅಂಗಲಾಚುವವರು First War Of Indian Independence ಬಗ್ಗೆ ಅದ್ಭುತ ಪುಸ್ತಕ ಬರೆಯುತ್ತಾರಾ? ಸಾವರ್ಕರ್ ರನ್ನು ಇಟ್ಟಿದ್ದ ಸೆಲ್ಯುಲಾರ್ ಜೈಲು ಹೇಗಿತ್ತು ಗೊತ್ತೇನು? ಅವರಿಗೆ ವಿಧಿಸಿದ್ದ ಕಾಲಾಪಾನಿ ಶಿಕ್ಷೆಯ ತೀವ್ರತೆ ಎಷ್ಟು ಅರಿವುಂಟೇನು? ನಿಮ್ಮಲ್ಲಿ ಕೆಲವರು ಸೋಫಾಗಳಿದ್ದ ಐಷಾರಾಮಿ ಜೈಲುಗಳಲ್ಲಿ ವಾಸ ಮಾಡಿದ್ದರಲ್ಲ, ಸ್ವಾತಂತ್ರ್ಯ ಬಂದ ನಂತರ ತಾನೇ ದೊಡ್ಡ ಸ್ವಾತಂತ್ರ್ಯಹೋರಾಟ-ತ್ಯಾಗ ಮಾಡಿದವರಂತೆ ಬಂದು ಪ್ರಧಾನಿಯಾಗಿಬಿಟ್ಟರಲ್ಲ, ಅಂಥವರನ್ನೇನಾದರೂ ಅಲ್ಲಿಟ್ಟಿದ್ದರೆ,  ಕ್ಷಮಾಪಣೆ ಪತ್ರಬರೆಯುವುದಿರಲಿ,  ಎರಡೇ ದಿನಕ್ಕೆ ಬಾಯಿಬಡಿದುಕೊಂಡು ಬ್ರಿಟೀಷರ ಕಾಲಿಗೆ ಬಿದ್ದುಬಿಡುತ್ತಿದ್ದರು. ಇಡೀ ದಿನದಲ್ಲಿ ಎರಡೇ ಲೋಟ ನೀರು ಕುಡಿದುಕೊಂಡು ವಿಶ್ರಾಂತಿ ಇಲ್ಲದೇ ಎಣ್ಣೆಯ ಗಾಣ ತಿರುಗಿಸುವುದು ಅಂದರೆ ಇಟಲಿ ಮಹಿಳೆಯ ಮುಂದೆ ಬಾಲಮಡಚಿಕೊಂಡು ಕೂತಷ್ಟು ಸುಲಭ ಅಂದುಕೊಂಡಿರಾ?
     ಸಾವರ್ಕರ್ ಮೇಲಿನ ದ್ವೇಷಕ್ಕೆ ಕಾಂಗ್ರೆಸ್ ಗೆ ಕೆಲವು ಕಾರಣಗಳಿರಬಹುದು. ಸಾವರ್ಕರ್ ಹಿಂದುತ್ವವನ್ನು ಪಟ್ಟು ಹಿಡಿದು ಪ್ರತಿಪಾದಿಸಿದ್ದರು. ಕಾಂಗ್ರೆಸ್ ವಿರುದ್ಧವಾಗಿ ಅಭಿನವ ಭಾರತವನ್ನು ಕಟ್ಟಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಕೆಲವು ಕಡೆ ಜಿನ್ನಾನ ಮುಸ್ಲಿಂ ಲೀಗ್ ಜೊತೆ ಸೇರಿ ಮೈತ್ರಿ ಸರ್ಕಾರವನ್ನೂ ರಚಿಸಿದ್ದರು. 1942ರ Quit India ವಿಫಲವಾಗುವಂತೆ ಮಾಡಲು ಅಭಿನವ ಭಾರತ ಇನ್ನಿಲ್ಲದಂತೆ ಪ್ರಯತ್ನಿಸಿತ್ತು. ಎರಡನೇ ವಿಶ್ವಯುದ್ಧದಲ್ಲಿ ಭಾರತೀಯರನ್ನು ಸೌಜನ್ಯಕ್ಕೂ ಒಂದು ಮಾತೂ ಕೇಳದೆ ಭಾರತೀಯ ಸೈನ್ಯವನ್ನು ಬ್ರಿಟೀಷರು ಭಾಗಿಯಾಗಿಸಿಕೊಂಡುಬಿಟ್ಟಿದ್ದರು. ಇದನ್ನು ಗಾಂಧೀಜಿಯ ನೇತೃತ್ವದಲ್ಲಿ Indian National Congress ತೀವ್ರವಾಗಿ ವಿರೋಧಿಸಿತ್ತು. ಆದರೆ ಸಾವರ್ಕರ್ ಅವರ ನಿಲುವು ಸಂಪೂರ್ಣ ವಿರುದ್ಧವಾಗಿತ್ತು. ಹಿಂದೂಗಳು ಸೈನ್ಯಕ್ಕೆ ಹೆಚ್ಚೆಚ್ಚು ಸೇರಬೇಕು. ಯುದ್ಧ ಕಲೆಯಲ್ಲಿ ನಿಪುಣರಾಗಬೇಕು. ಸ್ವಾತಂತ್ರ್ಯಾನಂತರ ಬ್ರಿಟೀಷರು ಸೇನೆಯಿಂದ ಹೋದರೆ ಸ್ವಂತ ಶಕ್ತಿಯಲ್ಲೇ ಭಾರತೀಯ ಸೈನ್ಯ ಯುದ್ಧ ಸಾಮರ್ಥ್ಯ ಹೊಂದಿರಬೇಕು ಎಂಬುದು ಸಾವರ್ಕರ್ ಆಲೋಚನೆ. ಕೊನೆಗೆ ಅಖಂಡ ಹಿಂದೂಸ್ತಾನವನ್ನು ಉಸಿರಲ್ಲೆ ಬೆರೆಸಿಕೊಂಡಿದ್ದ ಸಾವರ್ಕರ್, ಭಾರತದ ವಿಭಜನೆಯನ್ನು ಶತಾಯುಗತಾಯು ವಿರೋಧಿಸಿದ್ದರು. ಇವೆಲ್ಲ ಕಾಂಗ್ರೆಸ್ ನ ದ್ವೇಷಕ್ಕೆ ಮೂಲ ಕಾರಣಗಳಿರಬಹುದು.
     ನನ್ನ ಲೇಖನದಲ್ಲಿ ಸಾವರ್ಕರ್ ಜಿವನಗಾಥೆಯನ್ನು ಮತ್ತೆ ಬರೆಯಲು ಬಯಸುವುದಿಲ್ಲ. ಅದನ್ನು ಈಗಾಗಲೇ ಸಾಕಷ್ಟು ಜನ ಬರೆದಿದ್ದಾರೆ. ಈ ಲೇಖನದ ಉದ್ದೇಶ ಅದಲ್ಲ. ಮೇಲೆ ಹೇಳಿದ ಎಲ್ಲಾ ವಿಷಯದಲ್ಲೂ ಸಾವರ್ಕರ್ ಸರಿ, ಕಾಂಗ್ರೆಸ್ ತಪ್ಪು ಅಂತಲ್ಲ. ಆದರೆ, Savarkar deserves a lot. ಸಾವರ್ಕರ್ ದೇಶಪ್ರೇಮದ ಆಪಾದನೆಗಾಗಿ ಶಾಲೆ, ಕಾಲೇಜು, ಹಾಸ್ಟೆಲ್ ಗಳಿಂದ ಹೊರದಬ್ಬಿಸಿಕೊಂಡವರು. ದೇಶಪ್ರೇಮದಿಂದಾಗಿ ಪ್ರತಿಷ್ಠಿತ ಬ್ಯಾರಿಸ್ಟರ್ ಪದವಿಯನ್ನು ತ್ಯಾಗ ಮಾಡಿದವರು. ಲಂಡನ್ನಿನ India Houseನಲ್ಲಿ ಹಗಲೂ ರಾತ್ರಿ ಕಷ್ಟಪಟ್ಟು ಶತ್ರುವಿನ ನೆಲದಲ್ಲಿ ಸ್ವದೇಶೀಯರನ್ನು ಒಗ್ಗೊಡಿಸಿದವರು. ಲಂಡನ್ನಿನ ಮಣ್ಣಿನಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ಮರಣಾ ಕಾರ್ಯಕ್ರಮ ಮಾಡಿಸಿದವರು. ಭಾರತೀಯರ ಮೇಲೆ ಅಮಾನವೀಯವಾಗಿ ಅನಾಚಾರ ನಡೆಸಿದ್ದ ಆಂಗ್ಲ ಅಧಿಕಾರಿಗಳನ್ನು ಸಂಹರಿಸಿದವರು. ನೇತಾಜಿಯಿಂದ ಹಿಡಿದು ಧಿಂಗ್ರಾನವರೆಗೆ ಹೋರಾಟದ ಸ್ಫೂರ್ತಿ ತುಂಬಿದವರು. ಸಿಂಹಸ್ವಪ್ನವಾದ ಕಾರಣಕ್ಕೆ ಬ್ರಿಟೀಷರಿಂದ 50 ವರ್ಷ ಶಿಕ್ಷೆಗೊಳಗಾದವರು. ದಶಕದ ಕಾಲ ಕಾಲಾಪಾನಿ ಶಿಕ್ಷೆ ಅನುಭವಿಸಿದವರು. ಕೇಳಲೇ ಭಯವಾಗುವ ಅತಿರೇಕದ ಶಿಕ್ಷೆಗಳನ್ನು ನಮಗಾಗಿ ಅನುಭವಿಸಿದವರು. ಹರಿದುಹಂಚಿ ಹೋಗಿದ್ದ ಭಾರತೀಯರನ್ನು ಹಿಂದುತ್ವದ ಅಡಿಯಲ್ಲಿ ಒಂದುಮಾಡಲು ಶ್ರಮಿಸಿದವರು. ಗಾಂಧೀಹತ್ಯೆಯಲ್ಲಿ ಕಳಂಕರಹಿತರಾಗಿ ಹೊರಬಂದರೂ, ಅವಮಾನಿತವಾದವರು. ದೇಶಕ್ಕಾಗಿ ಎಲ್ಲ ಕೊಟ್ಟರೂ, ಅದೇ ದೇಶದ ಜನ ತೂರಿದ ಕಲ್ಲಿನಿಂದಾಗಿ ತಮ್ಮನನ್ನು ಕಳೆದುಕೊಂಡವರು. ಅರ್ಪಿಸಿಕೊಂಡ ದೇಶದಲ್ಲೇ ಕೊನೆಗೆ ಶವಪೆಟ್ಟಿಗೆ ಸಿಗಲೂ ಕಷ್ಟವಾಗುವಂತ ಪರಿಸ್ಥಿತಿಗೆ ದೂಡಲ್ಪಟ್ಟವರು. ನಮಗಾಗಿ ಜೀವವನ್ನೇ ತೇಯ್ದ ಆ ಜೀವಕ್ಕೊಂದು ಕನಿಷ್ಠ ಮರ್ಯಾದೆಯನ್ನೂ ಕೊಡಲಾರಿರಾ? ಬಾಯಿಬಿಟ್ಟರೆ ಸಾವರ್ಕರ್ ರನ್ನು ತೆಗಳುವುದಕ್ಕೆ, ಕೃತಜ್ಞತೆ ನಿಮ್ಮನ್ನು ಚೂರೂ ಅಡ್ಡಿಪಡಿಸದೇನು?
   ಮೊನ್ನೆ ಹೆಸರಾಂತ ಪತ್ರಿಕೆಯೊಂದರಲ್ಲಿ ಬುದ್ಧಿಜೀವಿಯೊಬ್ಬರು ಸಾವರ್ಕರ್ ರನ್ನು ಉಗ್ರಗಾಮಿಯಂತೆ ಬಿಂಬಿಸಿ ಲೇಖನ ಬರೆದಿದ್ದರು. ಬ್ರಿಟೀಷರ ದಾಸ್ಯದಲ್ಲಿ ನಲುಗಿಹೋಗಿದ್ದ ಭಾರತವನ್ನು ಬಿಡಿಸಲು ಹಿರಿಯರು ಅವರಿಗೆ ಸರಿಕಂಡ ಹಾದಿಯಲ್ಲಿ ಪ್ರಯತ್ನಿಸಿದ್ದಾರೆ. ಕೆಲವರು ಕ್ರಾಂತಿ, ಕೆಲವರು ಅಹಿಂಸೆಯ ನಂಬಿ ಜೀವ ತೇಯ್ದಿದ್ದಾರೆ. ಬ್ರಿಟೀಷರು ತೋರಿದ್ದ ಅಮಾನವೀಯ ಕ್ರೌರ್ಯಕ್ಕೆ ಹಿಂಸೆಯ ಪ್ರತಿಕ್ರಿಯೆ ತೋರಿದ ಕ್ರಾಂತಿಕಾರಿಗಳೇನು ಉಗ್ರಗಾಮಿಗಳಲ್ಲ. ಅದೊಂದು ಸ್ವಾಭಾವಿಕ ಪ್ರತಿಕ್ರಿಯೆ. ಅವರೇನು ಸ್ವಂತಕ್ಕಾಗಿ ತಲೆಮರೆಸಿಕೊಂಡು ಓಡಾಡಿ, ಸಿಕ್ಕಿಬಿದ್ದು ಶಿಕ್ಷೆಪಡೆದಿದ್ದಲ್ಲ. ಇವತ್ತು ನಾವನುಭವಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ ನೇಣಿಗೇರಿದವರು. ಕೃತಜ್ಞತೆಯಿರಲಿ ಆ ತ್ಯಾಗಕ್ಕೆ, ಗುರಿಯಿರಲಿ ಸ್ವಾತಂತ್ರ್ಯದ ಸದುಪಯೋಗಕ್ಕೆ.

Sunday, March 6, 2016

"ನನಗೆ ಅಜಾದಿ ಬೇಕು" ಎಂಬ ಆಕರ್ಷಕ ಅಪ್ರಬುದ್ಧತೆ!!


    ಫೇಸ್ಬುಕ್ಕಿನಲ್ಲಿ ಸುಮ್ಮನೆ ಜಾಲಾಡುತ್ತಿದ್ದಾಗ ವಾಕ್ಯವೊಂದು ಎಡತಾಕಿತು. "Strict parents raise best liars" ಅಂತ. ತೀರಾ ಸ್ಟ್ರಿಕ್ಟ್ ಪೋಷಕರ ಮಕ್ಕಳು ಅತ್ಯುತ್ತಮ ಸುಳ್ಳುಗಾರರಾಗುತ್ತಾರೆ ಅಂತ. ಸತ್ಯ. ಮಕ್ಕಳು ಸ್ವಚ್ಚಂದವಾಗಿ ಸ್ವತಂತ್ರ್ಯವಾಗಿ  ಅವರಷ್ಟಕ್ಕೆ ಬೆಳೆಯಲು ಬಿಡದಿದ್ದರೆ, ಅವರು ತಪ್ಪಿಸಿಕೊಳ್ಳಲು ಅದ್ಭುತ ಸುಳ್ಳುಗಳನ್ನು ಹೆಣೆಯಬಲ್ಲ ಪ್ರತಿಭಾವಂತರಾಗಿಬಿಡುತ್ತಾರೆ! ಮನುಷ್ಯ ಅಂತ ಅಲ್ಲ, ಸ್ವಾತಂತ್ರ್ಯ ಪ್ರತಿ ಜೀವಿಯ ಮೂಲಭೂತ ಹಕ್ಕು. ಆದರೆ... ತನ್ನ ಮಗುವಿಗೆ ಸ್ವಾತಂತ್ರ್ಯ ಕೊಡಬೇಕೆಂದು ತಾಯಿ ಮಗುವಿಗೆ ಸಂಪೂರ್ಣ ತನ್ನಷ್ಟಕ್ಕೆ ಬೆಳೆಯಲು ಬಿಟ್ಟರೆ ಏನಾಗುತ್ತೆ? ತನ್ನ ಮಗು ಸರ್ವತೋಮುಖವಾಗಿ ಬೆಳೆಯಬೇಕೆಂದು ತಂದೆ ಮಗುವನ್ನು ಸಂಪೂರ್ಣ ಸ್ವೇಚ್ಛೆಗೆ ಬಿಟ್ಟುಬಿಟ್ಟರೆ ಏನಾಗುತ್ತೆ? ಮಗು ಹಾದಿತಪ್ಪದೆ ಉಳಿದೀತೇನು? ಆಜಾದಿ ಸರಿ, ಆದರೆ ಅದು ಆರೋಗ್ಯಪೂರ್ಣ ಆಜಾದಿ ಆದರೆ ಮಾತ್ರ ಚಂದ. ಸುಮ್ಮನೆ ಬೀದಿತಪ್ಪಿದ ನಾಲ್ಕು ಹುಡುಗರು ಹಾದಿತಪ್ಪಿದ ಹಳೆಯ ಸಿದ್ದಾಂತವೊಂದನ್ನು ನಂಬಿ, ಮತ್ತೂ ನಾಲ್ಕು ಕುರಿಗಳನ್ನ ಸೇರಿಸಿ ಕೆಲಸಕ್ಕೆ ಬಾರದ so called ಕ್ರಾಂತಿ ಮಾಡುತ್ತೇವೆ, ಆಜಾದಿ ತರುತ್ತೇವೆ ಅಂತೆಲ್ಲ ಕೂಗಿದರೆ ಚಂದವಲ್ಲ, ಭಂಗ. ಅವರು ಕೇಳುತ್ತಿರುವುದು ಖಂಡಿತವಾಗಿಯೂ ಸ್ವಾತಂತ್ರ್ಯವನ್ನಲ್ಲ, ಸ್ವೇಚ್ಛೆಯನ್ನ, ಅರಾಜಕತೆ ತಂದಿಡುವ ಸ್ವೇಚ್ಛೆಯನ್ನ. ಅದನ್ನೇ ಸ್ವಲ್ಪ ಆಕರ್ಷಣೀಯವಾಗಿ "ನಮಗೆ ಭಾರತದಿಂದ ಸ್ವಾತಂತ್ರ್ಯ ಬೇಡ. ಭಾರತದಲ್ಲಿ ಬೇಕು" ಅಂತ ಕೇಳುತ್ತಿರುವುದು. ಪ್ರಥಮ ಬಾರಿಗೆ ಕೇಳುತ್ತಿರುವವನಿಗೆ "ಎಷ್ಟು ಸೊಗಸಾಗಿ ಮಾತಾಡ್ತಾನಪಾ" ಅನ್ನಿಸಬೇಕು.
    ನನಗೆ ತೀರಾ ನಿಗೂಢವಾಗಿ ಕಾಣುವ ವಿಷಯ ಅಂದರೆ ಈ ಎಡಪಂಥೀಯ ಚಿಂತನೆ ಉಳ್ಳ ಬುದ್ಧಿಜೀವಿಗಳು, ಕನ್ನಯ್ಯನಂತವರೆಲ್ಲ ಯಾಕೆ ಹೀಗೆ ರಾಷ್ಟ್ರಿಯತೆಗೆ ವಿರೋಧವಾಗಿರುವ ಸಂಗತಿಗಳನ್ನೇ ಇಷ್ಟಪಟ್ಟು ಪಸರಿಸುತ್ತಾರೆ ಎಂಬುದು. ಅವರಿಗೇನು ನಿಜವಾಗಿಯೂ ಸತ್ಯ ಗೊತ್ತಿಲ್ಲವ? ಭಾರತ ತನ್ನ ಪ್ರಜೆಗಳಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ಕೊಟ್ಟಿದೆ ಎಂಬುದು. ನಾವು ನೀವು ಇರುವುದೂ ಒಂದೇ ಭೂಮಿಯಲ್ಲಿ, ಅಂಥವರಿರುವುದೂ ಒಂದೇ ಭೂಮಿಯಲ್ಲಿ, ಅಂಥದ್ದರಲ್ಲಿ ನಮಗೆ ಕಣ್ಣಿಗೆ ಹೊಡೆಯುವ ಸತ್ಯ ಅವರ ಕಣ್ಣಿಗೆ ಮಸುಬಾಗಿಯೂ ಕಾಣದೇನು? ಯಾಕೀ ಪೂರ್ವಗ್ರಹಪೀಡಿತ ರೋಗಗ್ರಸ್ಥ ಮನಸ್ಸು? ಖ್ಯಾತಿಯ ಚಿಂತೆಯಾ? ವೋಟಿನ ಚಿಂತೆಯಾ? ಕಾಸಿನ ಚಿಂತೆಯಾ? ಅಸ್ತಿತ್ವದ ಚಿಂತೆಯಾ? ಅಥವಾ ಪೊಳ್ಳು ಭ್ರಮೆಯನ್ನೇ ತಾನೂ ನಂಬಿ ಪರರನ್ನೂ ನಂಬಿಸುವುದು ಒಂದು ಮಾನಸಿಕ ಖಾಯಿಲೆಯಾ?
    ನಿಜ ಹೇಳುವುದಾದರೆ, ಭಾರತದಲ್ಲಿ ಸ್ವಾತಂತ್ರ್ಯ ಅವಶ್ಯಕತೆಗಿಂತ ತುಸು ಹೆಚ್ಚೇ ಇದೆ. ಅವರುಗಳು ದಿನ ಬೆಳಗಾದರೆ ಬೊಬ್ಬಿರಿಯುವ ಅಭಿವ್ಯಕ್ತಿ ಸ್ವಾತಂತ್ರ್ಯವಂತೂ ಸಾಕುಬೇಕಷ್ಟು ಇದೆ. ಭಾರತದಲ್ಲಿ ಬಹುಸಂಖ್ಯಾತ ಧರ್ಮವೊಂದರ ಪವಿತ್ರ ಗ್ರಂಥವನ್ನೇ ಸುಟ್ಟುಹಾಕುತ್ತೇನೆ ಅನ್ನಬಹುದು! ಮರ್ಯಾದಾ ಪುರುಷೋತ್ತಮ ಅಂತ ಗೌರವಿಸಿ ಪೂಜಿಸುವ ರಾಮನ ಬಗ್ಗೆ ಇಲ್ಲಸಲ್ಲದ ಮಾತನಾಡಬಹುದು. ಆ ಧರ್ಮವನ್ನು ಹೀಯಾಳಿಸಿ ಚಿತ್ರಗಳನ್ನು ತೆಗೆದು ನೂರಾರು ಕೋಟಿ ಸಂಪಾದಿಸಬಹುದು. ತಾನು ಏನೋ ದೊಡ್ಡದನ್ನು ಕಡಿದಿಟ್ಟ ಜ್ಞಾನಿಯಂತೆ ಪವಿತ್ರ ಗ್ರಂಥಗಳನ್ನೇ ಸುಳ್ಳೆಂದು ಪ್ರತಿಪಾದಿಸಿ counter theory ಬರೆಯಬಹುದು. ಪಠ್ಯಪುಸ್ತಕಗಳಲ್ಲೆ ಇತಿಹಾಸವನ್ನು ತಿರುಚಿ ವೈರಿಗಳನ್ನೇ ಹೀರೊಗಳನ್ನಾಗಿ ಮಾಡಿಬಿಡಬಹುದು. ರಕ್ತ ಕುಡಿದು ಹೋದ ಭಯೋತ್ಪಾದಕರ ಸ್ಮರಣೆ ಮಾಡಬಹುದು, ಅವರಿಗೆಲ್ಲ ಸ್ಮಾರಕ ಕಟ್ಟಬಹುದು. ಶಿಕ್ಷಿಸಿದ್ದಕ್ಕೆ ನ್ಯಾಯಾಂಗವನ್ನೇ ಮನಃಪೂರ್ವಕವಾಗಿ ಬೈದು, Black day for Indian Democracy ಅಂದುಬಿಡಬಹುದು. ಯಾವುದೋ ಸಾವನ್ನು ಚಾಣಾಕ್ಷ್ಯವಾಗಿ ಮಿಸ್ ಲೀಡ್ ಮಾಡಿ, ಭಾರತದ ಸಮಾಜದಲ್ಲಿ ಮಾನವೀಯತೆಯೇ ಇಲ್ಲ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಕಳೆದುಬಿಡಬಹುದು. ಬಹುಸಂಖ್ಯಾತರು ನಂಬಿ ಪೂಜಿಸುವ ದೈವತೆಗಳ ಕುರಿತೇ ಕಟ್ಟದಾಗಿ ಮಾತಾಡಬಹುದು. ಕೊನೆಗೆ ತುಟಿ ಪಿಟಕ್ ಅನ್ನದೇ ಎಲ್ಲವನ್ನೂ ಸಹಿಸಿಕೊಂಡಿದ್ದರೂ "ಇದು ಅಸಹಿಷ್ಣು ರಾಷ್ಟ್ರ" ಅಂತ ಅದ್ಭುತ ಷರಾ ಬರೆದುಬಿಡಬಹುದು.
ಮೇಲೆ ಹೆಳಿದ್ದನ್ನೆಲ್ಲ ಮಾಡಿದವರು ಈ ಕ್ಷಣದಲ್ಲೂ ಇದೇ ದೇಶದ ರಸ್ತೆಗಳಲ್ಲಿ  ಸ್ವತಂತ್ರವಾಗೇ ಓಡಾಡಿಕೊಂಡಿದ್ದಾರೆ. ಮತ್ತೆ ದಾರಿಯಲ್ಲೆಲ್ಲಾದರೂ ಮೈಕ್ ಸಿಕ್ಕರೆ ಮತ್ತೆ ಇವುಗಳನ್ನೆಲ್ಲ ಅಭಿವ್ಯಕ್ತಿಸಲು ಕಾತರದಿಂದಿದ್ದಾರೆ. ಕನ್ನಯ್ಯನಿಗೆ ಮತ್ತೆ ಈ ದೇಶದಲ್ಲಿ ಆಜಾದಿ ಬೇಕಂತೆ, ಪಾಪ.
     ತಪ್ಪು ಕನ್ನಯ್ಯನದಲ್ಲ. ದೇವರದ್ದು!  ಉಸಿರಾಡಲೂ ಅಧ್ಯಕ್ಷನ ಕೇಳಬೇಕಿರುವ ಉತ್ತರ ಕೊರಿಯಾದಲ್ಲೊ, ದೇಶದ್ರೊಹಿಗಳನ್ನ ಶಿಕ್ಷಿಸಿದಾಗ ಬೀದಿಗಿಳಿದು ಸಂಭ್ರಮಿಸುವ ಅಮೆರಿಕೆಯಲ್ಲೋ, ದೇಶಕ್ಕೆ ಎರವಾದವರ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳುವ ಜರ್ಮನಿ, ಫ್ರಾನ್ಸ್ನಲ್ಲೊ , ಇಂಥವರನ್ನೆಲ್ಲ ಸಮರ್ಥಿಸಲು ಒಬ್ಬರೂ ಸಿಗದ ಇಂಗ್ಲೆಂಡಿನಲ್ಲೊ, ಮಾತೆತ್ತಿದರೆ ಹೆಡೆಮುರಿಕಟ್ಟುವ ಇವರದೇ ಕಮ್ಮ್ಯುನಿಸ್ಟ್ ಚೀನಾದಲ್ಲೊ ಇವನನ್ನ ಹುಟ್ಟಿಸಬೇಕಿತ್ತು. ಭಾರತ ಕೊಟ್ಟ ಆಜಾದಿಯ ಬೆಲೆ ಅರ್ಥವಾಗುತ್ತಿತ್ತು. ಇವರ "ಲಾಲ್ ಸಲಾಮ್" ಚೀನಾ ಒಮ್ಮೆ ಏನು ಮಾಡಿತ್ತು ಗೊತ್ತೇನು?
     ಅದು 1989ರ ಏಪ್ರಿಲ್ ತಿಂಗಳು. ಪ್ರಜಾಪ್ರಭುತ್ವ ಪರ ಸಂಘಟನೆಗಳೆಲ್ಲ ಸೇರಿ ಬೀಜಿಂಗ್ ನ ಟಿಯಾನ್ ಮನ್ ಸ್ಕ್ವೆರ್ ನಲ್ಲಿ ದೊಡ್ಡ ಪ್ರತಿಭಟನೆಯನ್ನು ಏರ್ಪಡಿಸಿದ್ದವು. ಮುಖ್ಯವಾಗಿ ವಿದ್ಯಾರ್ಥಿಗಳ ಪ್ರತಿಭಟನೆಯಾಗಿದ್ದ ಇದಕ್ಕೆ ನಾಗರಿಕರೂ ತೀವ್ರ ಬೆಂಬಲ ನೀಡಿದ್ದರು. ಇತರ ನೂರಾರು ಪಟ್ಟಣಗಳಿಗೂ ಕ್ರಾಂತಿಯ ಕಿಡಿ ಪಸರಿಸಿತು. ಪರಿಸ್ಥಿತಿ ಕೈಮೀರಿದ್ದನ್ನು ನೋಡಿ, ಚೀನಾ ಸರ್ಕಾರ martial law ಜಾರಿ ಮಾಡಿತು. ಪ್ರತಿಭಟನೆಯ ಸ್ಥಳಕ್ಕೆ ಸೇನೆ ಬಂತು. ಯುದ್ಧ ಟ್ಯಾಂಕರ್ ಗಳು ಬಂದವು. ಪ್ರತಿಭಟನಾಕಾರರು ನಿರಾಯುಧ ಜನಸಾಮಾನ್ಯರು. ಸೇನೆ ಅವರೆಡೆಗೆ ಗುಂಡು-ಮದ್ದುಗಳ ಮಳೆಗರೆಯಿತು. ನೋಡು ನೋಡುತ್ತಿದ್ದಂತೆ, ಪ್ರತಿಭಟನಾಕಾರರು ಸತ್ತುಬೀಳತೊಡಗಿದರು. ವಿದ್ಯಾರ್ಥಿಗಳಿದ್ದರು, ಪ್ರೊಫೆಸ್ಸರುಗಳಿದ್ದರು, ವೃದ್ಧರಿದ್ದರು, ಮಹಿಳೆಯರಿದ್ದರು, ಮಕ್ಕಳಿದ್ದರು, ಅಮಾಯಕ ನಾಗರೀಕರಿದ್ದರು. ಆದರೆ ಎಲ್ಲರೂ ಸತ್ತುಬಿದ್ದಿದ್ದರು. ಸರ್ಕಾರೀ ವರದಿಗಳು ಮುನ್ನೂರು ಜನ ಸತ್ತರು ಅಂದವು. ರೆಡ್ ಕ್ರಾಸ್ ಸಂಸ್ಥೆ 2600 ಜನ ಅಸುನೀಗಿದರು ಅಂದಿತು. ಲೆಕ್ಕ ಇವತ್ತಿಗೂ ಗೊಂದಲ. ಸಂಶೋಧಿಸಲು ಸರ್ಕಾರ ಯಾರನ್ನಾದರೂ ಬಿಟ್ಟರೆ ತಾನೆ?
     ಭಾರತ ಹಾಗಾಗಲು ಸಾಧ್ಯವಿಲ್ಲ. ಅದು ಇಲ್ಲಿಯ ಸಂಸ್ಕೃತಿ ಖಂಡಿತ ಅಲ್ಲ. ಹಾಗಾಗಲೂ ಬಾರದು. ನನ್ನ ದೇಶ ಮಾನವೀಯ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ತನ್ನ ಪ್ರತೀ ಪ್ರಜೆಗೂ ಸ್ವಾತಂತ್ರ್ಯ ಕೊಟ್ಟ ಅದ್ಭುತ ದೇಶ ಎಂಬ ಕೀರ್ತಿ ಅದಕ್ಕಿದೆ. ಆದರೂ ಯಾಕೆ ಹೀಗೆ ಮಾಡುತ್ತೀರಿ? ನಿಮಗೇನು ಕಮ್ಮಿ ಮಾಡಿದೆ ಈ ದೇಶ? ನೀವು ಓದುತ್ತಿರುವ ಆ JNU ವನ್ನು ಕಟ್ಟುಕೊಟ್ಟಿದ್ದು, ಈಗ ನಿಮ್ಮನ್ನು ದುಡ್ಡು ಕೊಟ್ಟು ಓದಿಸುತ್ತಿರುವುದು ಇದೇ ದೆಶವಲ್ಲವಾ? No, please, I just don't want to get lost until I come to know, why this happened to my country.
    ಪ್ರಿಯ ಕನ್ನಯ್ಯ, ನಿಮಗೆ ದೇಶಕ್ಕೆ ಒಳಿತು ಮಾಡುವ ಕಲ್ಪನೆಯಿದ್ದರೆ ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳಲು ಸಾಕುಬೇಕಷ್ಟು ವಿಷಯಗಳಿವೆ. ಈ ಬೇಡದ ಟೊಳ್ಳು misconceptionಗಳ ಬೆನ್ನು ಬಿದ್ದು ಭವಿಷ್ಯ ಹಾಳುಗೆಡವಿಕೊಳ್ಳಬೇಡಿ. ಒಂದು ತಿಂಗಳ cheap popularity ದಕ್ಕೀತಷ್ಟೆ. ದೇಶಕ್ಕೇನೂ ಲಾಭವಿಲ್ಲ. ಬದಲು ಸಮಾಜದ ಮುಖ್ಯವಾಹಿನಿಗಿಳಿದು, ಅದರ ನಿಜವಾದ ನೋವು ನಲಿವುಗಳನ್ನ ಅರಿತು, ಕಷ್ಟ ಕ್ಲೀಷೆಗಳನ್ನು ಬಗೆಹರಿಸುವ ಕುರಿತು ಕಾರ್ಯೋನ್ಮುಖವಾದರೆ ಜೀವನ ಸಾರ್ಥಕವಾಗುತ್ತೆ. ಭಾರತ ತನ್ನೊಳಗೆ ನಮಗೆಲ್ಲ ಸಾಕಷ್ಟು ಸ್ವಾತಂತ್ರ್ಯವನ್ನು ಕೊಟ್ಟಿದೆ. ನನ್ನ ದೇಶ ನನ್ನನ್ನು ನನ್ನ ಹಾಗಿರಲು ಬಿಟ್ಟ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ಎಲ್ಲವನ್ನೂ ಸಹಿಸಿಕೊಂಡೂ ಸದೃಢವಾಗಿರುವ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ನಿಮ್ಮಂತವರ ವ್ಯರ್ಥ ಪ್ರಯತ್ನಗಳನ್ನೆಲ್ಲ ಮೆಟ್ಟಿನಿಲ್ಲಲು ಸಶಕ್ತವಾದ ದೇಶ ಎಂಬ ಹೆಮ್ಮೆ ನನಗಿದೆ. ಧನ್ಯವಾದ.